ಕಾರ್ಕೋಟಿ ವಿಷವುಳ್ಳ ಕಾಳಿಂಗ ಸರ್ಪವೊಂದು ಕಚ್ಚಿದ ಪರಿಣಾಮ ನುರಿತ ಉರಗತಜ್ಞನೋರ್ವ ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಲ್ಕೋಡು ಗ್ರಾಮದಲ್ಲಿ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ಪ್ರಫುಲ್ಲದಾಸ್ ಭಟ್(62) ಎಂದು ಹೇಳಲಾಗಿದ್ದು, ಇವರು ಉರಗತ್ಜ್ಞರಾಗಿದ್ದ ಕಾರಣ ಹಾವನ್ನು ಹಿಡಿಯುವ ಸಲುವಾಗಿಯೇ ಕರೆಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅವರು ಹಾವನ್ನು ಹಿಡಿಯುವಲ್ಲಿಯೂ ಕೂಡ ಯಶಸ್ವಿಯಾದರು. ಆದರೆ ಹಾವನ್ನು ಹಿಡಿದ ಬಳಿಕ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ವೇಳೆ ಹಾವು ಭಟ್ ಅವರಿಗೆ ಕಚ್ಚಿದ ಪರಿಣಾಮ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ಹಿಂದೆಯೂ ಸಾಕಷ್ಟು ಹಾವುಗಳನ್ನು ಹಿಡಿದಿದ್ದ ಇವರು, ಸಾಕಷ್ಟು ಹಾವುಗಳಿಂದ ಕಚ್ಚಿಸಿಕೊಂಡೂ ಇದ್ದರು. ಆದರೆ ಈ ಬಾರಿ ಕಚ್ಚಿಸಿಕೊಂಡ ಅವರು ಸಾವಿನ ದವಡೆ ಸೇರಿದ್ದಾರೆ.