Publish Date: Fri, 08 Sep 2023 (08:53 IST)
Updated Date: Fri, 08 Sep 2023 (10:10 IST)
ಮಂಗಳೂರು : ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು. ಹಾಗೂ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ಗಳಿಗೆ ಹೊಸ ಜಾಗ ಮತ್ತು ನಿರ್ದಿಷ್ಟ ಫುಡ್ ಮೆನುವನ್ನು ಪ್ರಸ್ತಾಪಿಸಲಾಗಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಬುಧವಾರ ಮಂಗಳೂರಿನ ಡಿಸಿ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಸಚಿವ ರಹೀಂ ಖಾನ್, ಸರ್ಕಾರದ ನಿರ್ಧಾರದಂತೆ ಇಂದಿರಾ ಕ್ಯಾಂಟೀನ್ಗಳಲ್ಲಿ ಹೊಸ ಮೆನುಗಾಗಿ ಹೊಸ ಟೆಂಡರ್ಗಳನ್ನು ನೀಡಲಾಗುವುದು ಎಂದು ಪ್ರಸ್ತಾಪಿಸಿದರು. ಪ್ರಸ್ತುತ, ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ 197 ಇಂದಿರಾ ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ, 188 ಹೊಸ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲಾಗುವುದು ಎಂದರು.
ಬಜ್ಪೆ, ಬೆಳ್ತಂಗಡಿ, ಕಿನ್ನಿಗೋಳಿ, ಮೂಡುಬಿದಿರೆ, ಕಡಬ, ಮುಲ್ಕಿ, ಕೋಟೆಕಾರ್, ವಿಟ್ಲ, ಮತ್ತು ಸೋಮೇಶ್ವರದಲ್ಲಿ ಹೊಸ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲಾಗುವುದು. ಪ್ರತಿಯೊಂದೂ ವಿವಿಧ ನಗರ ಸ್ಥಳೀಯ ಸಂಸ್ಥೆ ಮಿತಿಗಳ ಅಡಿಯಲ್ಲಿ ಬರುತ್ತದೆ. ಜನರಿಗೆ ಹೆಚ್ಚು ಅನುವಾಗುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು.
ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳಂತಹ ಪ್ರಮುಖ ಸ್ಥಳಗಳಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ತೆರಯಲಾಗುವುದು. ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಮಾನಿಟರಿಂಗ್ ವ್ಯವಸ್ಥೆಗಳನ್ನು ನವೀಕರಿಸಲಾಗುವುದು ಮತ್ತು ಆನ್ಲೈನ್ ಬಿಲ್ಲಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಹಿಂದೆ ರಾಜ್ಯದಲ್ಲಿ ಒಂದೇ ರೀತಿಯ ಆಹಾರದ ಮೆನು ಇತ್ತು. ಆದರೆ ಈಗ ಆಯಾಯ ಜಿಲ್ಲೆಗಳಿಗೆ ಸೂಕ್ತ ಎನಿಸುವ ಸ್ಥಳೀಯ ಆಹಾರ ಮೆನುವಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ರಹೀಂ ಖಾನ್ ಹೇಳಿದರು.