Publish Date: Thu, 10 Aug 2023 (12:54 IST)
Updated Date: Thu, 10 Aug 2023 (12:56 IST)
ಬೆಂಗಳೂರು : ಬಿಜೆಪಿ ಮೇಲೆ ಗುತ್ತಿಗೆದಾರರು ಮಾಡಿದ 40% ಆರೋಪ ಸತ್ಯ. ಕಾಂಗ್ರೆಸ್ ಮೇಲೆ ಮಾಡುತ್ತಿರುವ 15% ಕಮೀಷನ್ ಆರೋಪ ಸುಳ್ಳು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಡಿಸಿಎಂ ವಿರುದ್ಧದ ಕಮಿಷನ್ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಬಿಎಂಪಿಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ತನಿಖೆ ಮಾಡಲು 4 ತಂಡಗಳನ್ನು ರಚನೆ ಮಾಡಲಾಗಿದೆ. ಸಮಿತಿ ವರದಿ ಕೊಟ್ಟ ಮೇಲೆ ಬಿಲ್ ಕ್ಲಿಯರ್ ಆಗುತ್ತೆ. ಇನ್ನೂ ಸಮಿತಿ ವರದಿಯನ್ನು ಕೊಟ್ಟಿಲ್ಲ. ಆಗಲೇ ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಬಿಲ್ ಬೇಗ ಬಿಡುಗಡೆ ಮಾಡಬೇಕು ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದೇನೆ. ಬಿಜೆಪಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಕೆಲಸವೇ ಆಗಿಲ್ಲ, ಬಿಲ್ ಎಲ್ಲಿ ಕೋಡೋಣ. ಇದರ ತನಿಖೆಗೆ ತಂಡ ರಚನೆ ಮಾಡಿದ್ದೇವೆ. ತನಿಖೆಯ ವರದಿ ಬರಲಿ ಎಂದರು.
ಬಿಜೆಪಿ ಅವಧಿಯಲ್ಲಿ 40% ಕಮಿಷನ್ ಪಡೆದಿದ್ದರು. ನಮ್ಮ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಇವರು ಕಳೆದುಕೊಂಡಿದ್ದಾರೆ. ಬಿಜೆಪಿ ಅವರ ಮಾತಿಗೆ ಕಿಮ್ಮತ್ತಿಲ್ಲ. ಬಿಜೆಪಿ ಅವರಿಗೆ ವಿರೋಧ ಪಕ್ಷದಲ್ಲಿ ಇರಲು ಜನ ಆದೇಶ ಮಾಡಿದ್ದಾರೆ. ನಾಲ್ಕು ಮುಕ್ಕಾಲು ವರ್ಷ ಅವರು ವಿಪಕ್ಷದಲ್ಲೇ ಇರಲಿ ಎಂದು ಲೇವಡಿ ಮಾಡಿದರು.