ಹಾಸ್ಯ ನಟನೊಬ್ಬ ದಿಢೀರನೆ ನಟನಾದರೆ ಏನಾಗುತ್ತದೋ ಆ ಅವಾಂತರ ಸುಂದರಿ ಗಂಡ ಸದಾನಂದ ಚಿತ್ರದಲ್ಲೂ ಆಗಿದೆ. ಶರಣ್ ಮೊದಲ ಬಾರಿಗೆ ಹಾಸ್ಯ ನಟನಾಗಿ ನಟಿಸಿದ ಈ ಚಿತ್ರಕ್ಕೆ ಜನತೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ದೇಶಕ ಉಮಾಕಾಂತ್ ತಮ್ಮ ನಿರ್ದೆಶನದಲ್ಲಿ ಎಡವಿದ್ದಾರೆ. ಈ ಹಿಂದೆ ಕೋಮಲ್ ನಾಯಕನಾಗಿ ನಟಿಸಿದ್ದರೂ ಚಿತ್ರಕಥೆ ಹಾಗೂ ಅವರ ನೈಜ ಅಭಿನಯ ಎಲ್ಲರನ್ನು ಮೆಚ್ಚಿಸಿತ್ತು. ಆದರೆ ಶರಣ್ ವಿಷಯದಲ್ಲಿ ಅದು ಉಲ್ಟಾ ಹೊಡೆದಿದೆ.
ಹಾಸ್ಯ ಕೇವಲ ಹಾಸ್ಯವಾಗಿದ್ದರೆ ಮಾತ್ರ ಚೆನ್ನ. ಅದು ಅತಿಹಾಸ್ಯ ಆದರೆ ನೋಡಲು ಅಸಹ್ಯ. ಇಲ್ಲೂ ಅದೇ ರೀತಿಯಾಗಿದೆ. ಶರಣ್ ಓವರ್ ಆಕ್ಟಿಂಗ್ ಎದ್ದು ಕಾಣುತ್ತದೆ. ಶರಣ್ರಿಂದ ನೈಜ ಅಭಿನಯವನ್ನು ನಾವು ಬಯಸುವಂತಿಲ್ಲ. ನಿಂತಲ್ಲಿ ನಿಲ್ಲದೇ ಅಗತ್ಯಕ್ಕಿಂತ ಹೆಚ್ಚು ಮೈ ಬಳುಕಿಸಿದ ಶರಣ್ ಅಭಿನಯ ಅಷ್ಟಕಷ್ಟೇ.
ಈ ಹಿಂದೆ ಹಿಂದಿಯಲ್ಲಿ ಬಂದ ಗರಂ ಮಸಾಲ ಚಿತ್ರದ ರೀತಿಯಲ್ಲೇ ಚಿತ್ರ ಮಾಡಲು ಹೋಗಿ ಚಿತ್ರತಂಡ ಎಡವಿದೆ. ಮನೆಯಲ್ಲಿ ಪತ್ನಿಯೆದುರು ಶ್ರೀರಾಮನಂತೆ ವರ್ತಿಸಿ ಹೊರಗಡೆ ಚೆಂದದ ಹುಡುಗಿಯರನ್ನು ಪಟಾಯಿಸುವ ಕಥೆಯನ್ನು ಒಳಗೊಂಡಿದೆ. ಶರಣ್ ಮನೆಯಲ್ಲಿ ತನ್ನ ಹೆಂಡತಿಗೆ ಬಾರಿ ನಿಷ್ಠಾವಂತನಂತೆ ನಟಿಸಿ ಮನೆ ಕೆಲಸವೆಲ್ಲ ಮಾಡುತ್ತಾನೆ. ಆಕೆ ಕೆಲಸಕ್ಕೆ ಹೋದ ನಂತರ ತನ್ನ ಗೆಟಪ್ ಬದಲಾಯಿಸಿ ಏನೇನೋ ಸುಳ್ಳು ಹೇಳಿ ಜೀವನೋಪಾಯಕ್ಕಾಗಿ ಶ್ರೀಮಂತ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಳ್ಳುವತ್ತ ಚಿತ್ರ ಸಾಗುತ್ತದೆ.
ಚಿತ್ರದ ಎರಡನೇ ಭಾಗದ ಸೀನ್ಗಳೆಲ್ಲ ಕೇವಲ ಒಂದು ಫೋನ್ ಬೂತ್ನಲ್ಲಿ ನಡೆಯುತ್ತದೆ. ನಿರ್ದೇಶಕರು ಲೊಕೇಶನ್ ಆಯ್ಕೆಯಲ್ಲಿ ಎಡವಿದ್ದಾರೆ. ಸಂಗೀತ ಹಾಗೂ ದೃಶ್ಯಗಳಿಗೆ ಇಲ್ಲಿ ಸಂಬಂಧ ಕಲ್ಪಿಸುವಂತಿಲ್ಲ ಕ್ಯಾಮರಾ ಕೆಲಸ ಸಾಧಾರಣ.