ಭೀಮಾ ತೀರದಲ್ಲಿ ಚಿತ್ರವಿಮರ್ಶೆ; ಒರಿಜಿನಲ್ ರೌದ್ರಾವತಾರ!
ಚಿತ್ರ: ಭೀಮಾ ತೀರದಲ್ಲಿತಾರಾಗಣ: ವಿಜಯ್, ಪ್ರಣೀತಾ, ಪ್ರಜ್ವಲ್ ಪೂವಯ್ಯ, ಉಮಾಶ್ರೀ, ದೊಡ್ಡಣ್ಣನಿರ್ದೇಶನ: ಓಂಪ್ರಕಾಶ್ ರಾವ್ಸಂಗೀತ: ಅಭಿಮನ್ ರಾಯ್ '
ಭೀಮಾ ತೀರದಲ್ಲಿ' ರಿಮೇಕ್ ಅಲ್ಲ, ಯಾವುದೇ ದೃಶ್ಯಗಳು ನಕಲಿ ಅಲ್ಲ, ಎಲ್ಲವೂ ಪಕ್ಕಾ ಒರಿಜಿನಲ್. ನಿಜವಾಗಿ ನಡೆದ ಘಟನೆಯನ್ನೇ ಆಧರಿಸಿದ ಸಿನಿಮಾ. ಆದರೆ ಯಾವುದೂ ಹೊಸತೆನಿಸುವುದಿಲ್ಲ. ಇಂತಹ ನೂರಾರು ಸೇಡಿನ ಚಿತ್ರಗಳು ಈಗಾಗಲೇ ಬಂದು ಹೋಗಿರುವುದರಿಂದ ಬೇಕೇ ಬೇಕು ಅನ್ನೋ ಭಾವನೆ ಬರೋದೇ ಇಲ್ಲ. ಆದರೂ ನಾಯಕ ವಿಜಯ್ ನೋಡಿಸಿಕೊಂಡು ಹೋಗುತ್ತಾರೆ. ಇಡೀ ಚಿತ್ರ ಅವರ ಹೆಗಲ ಮೇಲೆಯೇ ಸಾಗುತ್ತದೆ.ಚಂಡ್ಯಾ (ವಿಜಯ್) ಅಸಮಾನತೆಯ ನಡುವೆಯೇ ಬಾಲ್ಯವನ್ನು ಕಳೆದವನು. ತಾಯಿಯಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಿರುತ್ತಾನೆ. ಹಣವಿದ್ದವರಿಗೆ ಮಾತ್ರ ಈ ಸಮಾಜದಲ್ಲಿ ಎಲ್ಲವೂ ಸಿಗುತ್ತದೆ ಎಂಬ ಸತ್ಯ ಅವನಿಗೆ ಗೊತ್ತಾಗಿರುತ್ತದೆ. ಹೀಗಿದ್ದವನು ಸಿದ್ದಪ್ಪನ (ದೊಡ್ಡಣ್ಣ) ಗರಡಿ ಸೇರುತ್ತಾನೆ. ಈಗ ಚಂಡ್ಯಾ ಎದೆ ಕೊಟ್ಟವರನ್ನು ಸಿಗಿದು ತೋರಣ ಕಟ್ಟುವಷ್ಟು ಬಲಶಾಲಿ.ಚಂಡ್ಯಾ ಊರಿಗೆ ಉಪಕಾರಿ. ಈ ಸಮಾಜ ಹೀಗಿರಬಾರದು, ಹಾಗಿರಬೇಕು ಎಂದು ಬಯಸುವವನು. ಜನರ ಬೇಕು-ಬೇಡಗಳಿಗೆ ಈತನೇ ಅನಧಿಕೃತ ವಾರಸುದಾರ. ಆದರೆ ರಾಜಕೀಯ ಆತನ ಕನಸುಗಳನ್ನು ನನಸು ಮಾಡುವುದಿಲ್ಲ. ಗ್ರಾಮದ ಮುಖಂಡನ ಗೋಲಿಯಾಟಕ್ಕೆ ಚಂಡ್ಯಾ ಬಲಿಪಶುವಾಗುತ್ತಾನೆ. ಆಗ ಹುಟ್ಟಿಕೊಂಡ ಸೇಡಿನಲ್ಲಿ ಆತ ಚಂಡಿಯಾಗುತ್ತಾನೆ. ಸೇಡಿಗೆ ಬಿದ್ದು ರುಂಡಗಳನ್ನು ಚೆಂಡಾಡುತ್ತಾನೆ.ಚಂಡ್ಯಾನಿಗೆ ಮತ್ತೆ ಮತ್ತೆ ಮೋಸವೇ ಎದುರಾಗುತ್ತದೆ. ಪ್ರತೀಕಾರವೇ ಉಸಿರಾಗುತ್ತದೆ. ಬದಲಾಗಲು ಹೊರಟಾಗ ಎಲ್ಲವೂ ಸಂಪೂರ್ಣ ಶಾಂತ.ಆಕ್ಷನ್ ಚಿತ್ರಗಳಿಗೆ ಜೀವ ತುಂಬುವುದರಲ್ಲಿ ನಿರ್ದೇಶಕ ಓಂಪ್ರಕಾಶ್ ರಾವ್ ಎತ್ತಿದ ಕೈ. ಅವರಿಗೆ ಹೆಗಲಿಗೆ ಹೆಗಲಾಗಿರುವುದು ಎಂ.ಎಸ್. ರಮೇಶ್. ಅವರ ಸಂಭಾಷಣೆ ವಿಜಯ್ ಮೀನ ಖಂಡಗಳನ್ನು ಕುಣಿಸುತ್ತದೆ. ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಆ ಮಟ್ಟಿಗೆ ನಿರ್ದೇಶಕರು ಅಂದುಕೊಂಡದ್ದನ್ನು ಸಾಧಿಸಿದ್ದಾರೆ.
ಇಡೀ 'ಭೀಮಾ ತೀರದಲ್ಲಿ' ಚಿತ್ರದಲ್ಲಿ ತುಂಬಿರೋದು ರೋಷ. ವಿಜಯ್ ಹೊಡೆದಾಡುವುದರಲ್ಲಿ ನಿಸ್ಸೀಮ ಎಂಬ ಕಾರಣಕ್ಕಷ್ಟೇ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದೂ ಭಾಸವಾಗುತ್ತದೆ. ಫ್ಯಾಮಿಲಿ ಪ್ರೇಕ್ಷಕರ ಪಾಲಿಗೆ ವಿಜಯ್ ಭೀಭತ್ಸರಾಗುತ್ತಾರೆ. ಕೆಲವು ದೃಶ್ಯಗಳಿಗೆ ಕಣ್ಣು ಮುಚ್ಚಿಕೊಳ್ಳಲೇ ಬೇಕು ಎಂಬಂತಿದೆ. ಇಷ್ಟು ಕ್ರೂರತೆಯ ನಡುವೆ ಅಲ್ಲಲ್ಲಿ ಸೆಂಟಿಮೆಂಟ್ ಕಾಡುತ್ತದೆ. ತಾಯಿಯ ಜತೆಗಿನ ದೃಶ್ಯಗಳಲ್ಲಿ ವಿಜಯ್ ಕಣ್ಣಾಲಿಗಳನ್ನು ಒದ್ದೆ ಮಾಡಿಸುತ್ತಾರೆ.ಇದುವರೆಗಿನ ಚಿತ್ರಗಳಲ್ಲಿ ಬೆದರು ಬೊಂಬೆಯಾಗಿದ್ದ ಪ್ರಣೀತಾಗೆ ಈ ಚಿತ್ರದಲ್ಲಿ ಅಭಿನಯಕ್ಕೆ ಅವಕಾಶ ಸಿಕ್ಕಿದೆ. ಉಮಾಶ್ರೀ ತಾಯಿ ಪಾತ್ರ ಸಿಕ್ಕಿದರೆ ಹೇಗೆ ಪರಕಾಯ ಪ್ರವೇಶ ಮಾಡುತ್ತಾರೆಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಶ್ರೀನಿವಾಸಮೂರ್ತಿ, ಲೋಕನಾಥ್, ಶರತ್ ಲೋಹಿತಾಶ್ವ ಎಲ್ಲೂ ಕೊರತೆ ಮಾಡಿಲ್ಲ.ಅಭಿಮನ್ ರಾಯ್ ಸಂಗೀತ ಹೊಡೆ-ಬಡಿ ಸದ್ದಿನ ನಡುವೆ ಕ್ಷೀಣವಾಗಿದೆ. ಗಂಭೀರ ಚಿತ್ರವಾದ ಕಾರಣ, ಹಾಡುಗಳೇ ಬೇಕಿರಲಿಲ್ಲ. ಕ್ಯಾಮರಾ ಹಿಡಿದಿರುವ ನಿರ್ಮಾಪಕ ಅಣಜಿ ನಾಗರಾಜ್ ಭರವಸೆ ಮೂಡಿಸುತ್ತಾರೆ.ನೀವು ವಿಜಯ್ ಅಭಿಮಾನಿಯಾಗಿದ್ದರೆ, ಅದರಲ್ಲೂ ಕ್ರೌರ್ಯತೆಯೇ ಬೇಕಿದ್ದರೆ, ನಿಮ್ಮ ಹೃದಯ ನಿಜಕ್ಕೂ ಗಟ್ಟಿಯಿದ್ದರೆ ಖಂಡಿತಾ ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು.