ಕನ್ನಡ ಚಿತ್ರರಂಗಕ್ಕೆ ಸಿಕ್ಸರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಪ್ರಜ್ವಲ್ಗೆ ನಂತರದ ದಿನಗಳಲ್ಲಿ ಬೇಡಿಕೆ ಹೆಚ್ಚಿ ಅನೇಕ ಅವಕಾಶಗಳು ಸಿಕ್ಕಿವೆ. ಇದರ ಗುಂಗಿನಲ್ಲಿ ಗಂಗೆ ಬಾರೆ ತುಂಗೆ ಬಾರೆ ಚಿತ್ರವನ್ನು ಒಪ್ಪಿಕೊಂಡರು. ಆದರೆ ಇಲ್ಲಿ ಸಂಪೂರ್ಣ ಎಡವಿದ್ದಾರೆ.
ಒಬ್ಬ ಕ್ರಿಯೇಟಿವ್ ವ್ಯಕ್ತಿಯೆಂದು ಹೆಸರು ಪಡೆದಿರುವ ಸಾಧು ಕೋಕಿಲ ಯಾಕಾಗಿ ಇಂತಹ ಚಿತ್ರವನ್ನು ನೀಡಿದ್ದಾರೆ ಎಂಬಂತಾಗಿದೆ. ಯಾವುದೇ ಅರ್ಥವಿಲ್ಲದ ಒಂದು ಕಳಪೆ ಚಿತ್ರಕಥೆಯನ್ನು ಆಯ್ಕೆ ಮಾಡಿದ ಸಾಧು ಅದರ ನಿರೂಪಣೆಯಲ್ಲೂ ಎಡವಿದ್ದಾರೆ. ಚಿತ್ರದ ಛಾಯಾಗ್ರಹಣ ಇಲ್ಲಿನ ದೃಶ್ಯಗಳಿಗೆ ಯಾವುದೇ ಮೆರುಗು ನೀಡಿಲ್ಲ.
ಉತ್ತಮ ಪ್ರತಿಭೆಯುಳ್ಳ ಪ್ರಜ್ವಲ್ ಯಾಕಾಗಿ ಇಂತಹ ಚಿತ್ರವನ್ನು ಒಪ್ಪಿಕೊಂಡರು ಎಂದು ಆಶ್ವರ್ಯವಾಗುತ್ತಿದೆ. ಯಾವುದೇ ಸತ್ವವಿಲ್ಲದ ಒಂದು ಪ್ರೇಮಕಥೆಯನ್ನು ಚಿತ್ರ ಒಳಗೊಂಡಿದೆ.
ವೃತ್ತಿಯಲ್ಲಿ ಎಲೆಕ್ಟ್ತ್ರಿಶಿಯನ್ ಆದ ಹರ್ಷ( ಪ್ರಜ್ವಲ್) ಗಂಗಾಳ (ಸುನೈನಾ) ಪ್ರೇಮಪಾಶಕ್ಕೆ ಬೀಳುತ್ತಾನೆ. ಆದರೆ ಗಂಗಾಳ ಸೋದರಿ ತುಂಗಾ ಕೂಡಾ ಹರ್ಷನನ್ನು ಪ್ರೀತಿಸುತ್ತಾಳೆ. ಹೀಗೆ ಸೋದರಿಯರಿಬ್ಬರ ನಡುವೆ ಪ್ರೀತಿಯ ವಿವಾದ ಉಂಟಾಗುತ್ತದೆ. ಕೊನೆಗೆ ತುಂಗಾ ಹರ್ಷನನ್ನು ತ್ಯಾಗ ಮಾಡುತ್ತಾಳೆ.
ಇಲ್ಲಿ ಪ್ರಜ್ವಲ್ ಅಭಿನಯ ಯಾವುದೇ ರೀತಿಯ ಮೋಡಿ ಮಾಡುವುದಿಲ್ಲ. ಸುನೈನಾ ಹಾಗೂ ಗಾಯತ್ರಿ ಅಭಿನಯದಿಂದ ಮಾರು ದೂರವಿದ್ದಾರೆ. ಆದರೆ ಬಿಚ್ಚಮ್ಮಗಳಾಗಿ ಮಿಂಚಿದ್ದಾರೆ. ಚಿತ್ರಕ್ಕೆ ಸಾಧು ನೀಡಿದ ಸಂಗೀತವೂ ಅವರ ನಿರ್ದೇಶನದಂತೆ ಕೆಟ್ಟದಾಗಿದೆ. ಬುಲೆಟ್ ಪ್ರಕಾಶ್ ಅವರ ಹಾಸ್ಯ ಕೂಡಾ ರಂಜಿಸುವುದಿಲ್ಲ.