Select Your Language

Notifications

webdunia
webdunia
webdunia
webdunia

ಕ್ರೇಜಿ ಲೋಕ ಚಿತ್ರವಿಮರ್ಶೆ; ಕನ್ನಡ ಪ್ರೇಕ್ಷಕರಿಗೆ ಶಿಕ್ಷೆ

ಕ್ರೇಜಿ ಲೋಕ ಚಿತ್ರವಿಮರ್ಶೆ; ಕನ್ನಡ ಪ್ರೇಕ್ಷಕರಿಗೆ ಶಿಕ್ಷೆ
ಚಿತ್ರ: ಕ್ರೇಜಿ ಲೋಕ
ತಾರಾಗಣ: ರವಿಚಂದ್ರನ್, ಡೈಸಿ ಬೋಪಣ್ಣ, ಹರ್ಷಿಕಾ ಪೂಣಚ್ಚ, ರಮ್ಯಾ
ನಿರ್ದೇಶನ: ಕವಿತಾ ಲಂಕೇಶ್
ಸಂಗೀತ: ಮಣಿಕಾಂತ್ ಕದ್ರಿ

SUJENDRA


ರವಿಚಂದ್ರನ್‌ರಂತಹ ನಾಯಕರನ್ನು ಆರಿಸುವಾಗಲೇ ಕವಿತಾ ಲಂಕೇಶ್ ಚಿತ್ರದ ಮೇಲೆ ಸಂಶಯಗಳಿದ್ದವು. ಅದು ನಿಜವಾಗಿದೆ. ತನ್ನತನವನ್ನೂ ಉಳಿಸಿಕೊಳ್ಳದೆ, ಅತ್ತ ಕ್ರೇಜಿಯಾಗಿಯೂ ಮಾಡದೆ ಇಕ್ಕಟ್ಟಿನಲ್ಲಿ ಒದ್ದಾಡಿದ್ದಾರೆ. ಪ್ರೇಕ್ಷಕರನ್ನು ಬಡಪಾಯಿಗಳನ್ನಾಗಿಸಿದ್ದಾರೆ.

ಒಂದು ಸಿನಿಮಾದಲ್ಲಿ ಏನೆಲ್ಲ ಕೆಟ್ಟದಿರಬಹುದು. ಹೀಗೆ ಪಟ್ಟಿ ಮಾಡಲು ಕೂತರೆ ಒಂದೆರಡಕ್ಕಾದರೂ ರಿಯಾಯಿತಿ ಕೊಡಬಹುದು. ಆದರೆ 'ಕ್ರೇಜಿ ಲೋಕ'ದಲ್ಲಿ ಎಲ್ಲವೂ ಮೈನಸ್ಸೇ. ಇಂತಹ ಸಿನಿಮಾವೊಂದನ್ನು ಕವಿತಾ ಲಂಕೇಶ್ ಯಾಕೆ ಮಾಡಿದರೋ? ರವಿಚಂದ್ರನ್ ಯಾಕೆ ಒಪ್ಪಿಕೊಂಡರೋ ಎಂಬಂತಿದೆ.

ಹಳ್ಳಿ ಗಮಾರ ಬಸವರಾಜ್ (ರವಿಚಂದ್ರನ್) ಸಮಾಜ ಸೇವೆಗಾಗಿಯೇ ತನ್ನನ್ನು ತಾನು ಮುಡಿಪಾಗಿಟ್ಟವನು. ಆತನಿಗೆ ಗೌರವ ಡಾಕ್ಟರೇಟ್ ಸಿಗುವ ದಿನ ಆಗುವ ಅವಮಾನ ತಾನೇ ಕಟ್ಟಿದ ಕಾಲೇಜಿನಲ್ಲಿ ತನ್ನ ಮಗನಿಗೆ ಜೂನಿಯರ್ ಆಗಿ ಪಿಯು ಸೇರುವಂತೆ ಮಾಡುತ್ತದೆ. ಅಲ್ಲಿ ಸೈಕಾಲಜಿ ಪ್ರೊಫೆಸರ್ ಸರಳಾ (ಡೈಸಿ ಬೋಪಣ್ಣ) ಸಿಗುತ್ತಾಳೆ. ಹೀಗೆ ಕೊಂಚ ಆಸಕ್ತಿ ಎನಿಸಬಹುದಾಗಿದ್ದ ಕಥೆ ಪೇಲವವಾಗಿ ಮುಂದಕ್ಕೆ ಸಾಗುತ್ತದೆ.

ನಿರ್ದೇಶಕಿ ಕವಿತಾ ಲಂಕೇಶ್ ಕಥೆಯ ಆಯ್ಕೆಯಲ್ಲಿ ಎಡವಿಲ್ಲ. ಆದರೆ ಚಿತ್ರಕಥೆ, ಸಂಭಾಷಣೆ, ನಿರೂಪನೆಯಲ್ಲಿ ತನ್ನತನವನ್ನು ತೋರಿಸಿಲ್ಲ. ದೇವೀರಿ, ಪ್ರೀತಿ ಪ್ರೇಮ ಪ್ರಣಯ, ಅವ್ವದಂತಹ ಚಿತ್ರಗಳ ನಿರ್ದೇಶಕಿಗೆ ಇದೇ ಕಥೆಯನ್ನು ಆಸಕ್ತಿ ಕೆರಳಿಸುವಂತೆ ತೋರಿಸುವುದು ಸಾಧ್ಯವಿತ್ತು. ಆದರೂ ಯಾಕೋ....?

ರವಿಚಂದ್ರನ್ ವಿಗ್ ಬೀದಿ ನಾಟಕವನ್ನು ನೆನಪಿಸುತ್ತದೆ. ಸ್ವತಃ ಅವರಿಗೂ ಅದು ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತದೆ. ಅವರಿಗೆ ಯಾವ ದಿಕ್ಕಿನಿಂದಲೂ ಸರಿ ಹೊಂದದ ಪಾತ್ರ. ತನ್ನದಲ್ಲದ ನಿರ್ದೇಶನ ಬೇರೆ. ಎಂದಿನಂತೆ ಅವರು ಹಾಜರಾತಿ ಹಾಕಿ ಹೋಗಿದ್ದಾರೆ.

ಡೈಸಿ ಬೋಪಣ್ಣ ಮೋಸ ಮಾಡಿಲ್ಲ. ಅವಿನಾಶ್, ಹರ್ಷಿಕಾ, ಸೂರ್ಯ ಕೂಡ ತಮ್ಮ ಕೆಲಸ ಮುಗಿಸಿದ್ದಾರೆ. ಅವಿನಾಶ್, ಭಾರತಿ ವಿಷ್ಣುವರ್ಧನ್, ನೀನಾಸಂ ಅಶ್ವತ್ಥ್ ಎಂದಿನಂತೆ ಲೀಲಾಜಾಲ. ಸೀತಾರಾಂ ಛಾಯಾಗ್ರಹಣ ಗಮನ ಸೆಳೆಯುವುದಿಲ್ಲ. ಮಣಿಕಾಂತ್ ಕದ್ರಿ ಸಂಗೀತದ ಹಾಡುಗಳು ಕೇಳುವಂತಿಲ್ಲ. ಇದ್ದುದರಲ್ಲಿ ರಮ್ಯಾ 'ಗಲಭೆ..' ಓಕೆ.

ಹಾಸ್ಯಾಸ್ಪದವಾಗಿರುವ ಹಾಸ್ಯ ಸನ್ನಿವೇಶಗಳು ಸೇರಿದಂತೆ ಚಿತ್ರದ ಯಾವ ಭಾಗವನ್ನೂ ನೋಡಬೇಕೆನಿಸುವುದಿಲ್ಲ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada