ನಾಯಕ ಯೋಗೀಶ್ ಇಲ್ಲಿ ಪಾದರಸದಂತಿದ್ದರೆ, ಅವರ ಅದ್ಬುತ ಮ್ಯಾನರಿಸಂ, ನೃತ್ಯ, ಡೈಲಾಗ್ ಡೆಲಿವರಿ ಎಲ್ಲವೂ ತುಂಬಾನೇ ಇಷ್ಟವಾಗುತ್ತದೆ. ನಾಯಕಿ ಸುಪ್ರಿತಾ ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಕ್ಕೆ ಲಗ್ಗೆ ಇಟ್ಟಿದ್ದಾರೆ. ಲವಲವಿಕೆಯಿಂದ ನಟಿಸಿದ್ದಾರೆ. ರಂಗಾಯಣ ರಘು ಸ್ವಲ್ಪ ಡಿಫರೆಂಟ್ ಆಗಿ ನಟಿಸಿದರೂ ಇವರ ಪಾತ್ರ ನೋಡುವಾಗ ದುನಿಯಾದ ಸತ್ಯಣ್ಣ ನೆನಪಾಗಿ ಮರೆಯಾಗುತ್ತಾನೆ. ಆದರೆ ಚಿತ್ರದ ದ್ವಿತೀಯಾರ್ಧದಲ್ಲಿ ನಿರ್ದೇಶಕ ಅರ್ಜುನ್ ಸ್ವಲ್ಪ ಎಡವಿದ್ದಾರೆ. ತನ್ನ ಪ್ರೇಯಸಿಗೆ ಸೈಕಲ್ನಲ್ಲೇ ಸಾವಿರಾರು ಕಿ.ಮೀ ದೂರದ ಜೈಪುರ, ಆಗ್ರಾವನ್ನು ತೋರಿಸುತ್ತಾನೆ. ಈ ಸಂದರ್ಭದಲ್ಲಿ ಡಬಲ್ ರೈಡ್ ಸೈಕಲ್ ತುಳಿದರೂ ಆತನಿಗೆ ಆಯಾಸವಾಗುವುದಿಲ್ಲ. ಈ ಮಧ್ಯೆ ಅಡ್ಡ ಬರುವ ನಾಲ್ಕಾರು ರೌಡಿಗಳನ್ನೂ ಉರುಳಿಸುತ್ತಾನೆ. ಈ ದೃಶ್ಯ ಸ್ವಲ್ಪ ಬೋರ್ ಹೊಡೆಯುತ್ತದೆ. ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ ಪೆಟ್ರೋಲ್ ಪ್ರಸನ್ನ ಕೂಡಾ ಇಲ್ಲಿ ಮಿಂಚುತ್ತಾರೆ. ಅವರ ನಟನಾ ಶೈಲಿ ವಿಭಿನ್ನವಾಗಿದೆ. ನಿರ್ದೇಶಕ ಅರ್ಜುನ್ ಹಿಂದೆ ರವಿಚಂದ್ರನ್ ಜೊತೆ ಸಹಾಯಕ ನಿರ್ದೇಶಕರಾಗಿ ದುಡಿದವರು. ಚಿತ್ರದಲ್ಲಿ ವಿ.ಹರಿಕೃಷ್ಣ ಅವರ ಸಂಗೀತ ಕೂಡಾ ಪ್ರಧಾನ ಪಾತ್ರ ವಹಿಸುತ್ತದೆ. ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಇಷ್ಟವಾಗುತ್ತದೆ. ಒಟ್ಟಾಗಿ ಹೆಚ್ಚು ಬಿಲ್ಡಪ್ ತಗೊಳದೇ ಸೈಲೆಂಟಾಗಿ ಒಂದು ಉತ್ತಮ ಚಿತ್ರ ಮೂಡಿಬಂದಿದೆ. |