ಚಿತ್ರ: ಪೇಪರ್ ದೋಣಿ
ತಾರಾಗಣ: ನವೀನ್ ಕೃಷ್ಣ, ಶಾಂತಲಾ, ಅವಿನಾಶ್, ಸತ್ಯಜಿತ್, ಆದಿ ಲೋಕೇಶ್, ವಿನಯಾ ಪ್ರಸಾದ್
ನಿರ್ದೇಶನ: ಆರ್.ಕೆ. ನಾಯಕ್
ಸಂಗೀತ: ಶ್ರೀ ಸುಮನ್
ಮೊದಲನೆಯದಾಗಿ ವಿಭಿನ್ನ ಕಥಾವಸ್ತುವನ್ನು ಆರಿಸಿಕೊಂಡಿರುವುದಕ್ಕೆ ನಿರ್ದೇಶಕರನ್ನು ಅಭಿನಂದಿಸೋಣ. ಅದೇ ಕಡಿ-ಬಡಿ, ಮರ ಸುತ್ತುವ ಸಿನಿಮಾಗಳನ್ನಷ್ಟೇ ಮಾಡುತ್ತಿರುವಾಗ ಇಂತಹ ಪ್ರಯತ್ನಕ್ಕೆ ಕೈ ಹಾಕಿರುವುದು ಪ್ರಶಂಸಾರ್ಹ.ಹಾಗೆಂದು ಸಿನಿಮಾ ಚೆನ್ನಾಗಿದೆ ಎಂದೇನೂ ಹೇಳಲು ಹೊರಟಿಲ್ಲ. ನಿರ್ದೇಶಕ ಆರ್.ಕೆ. ನಾಯಕ್ ಹಾಸಿಗೆಯಿಂದ ಹೊರಗೆ ಕಾಲು ಚಾಚಿದ್ದಾರೆ. ತಮ್ಮ ಸಾಮರ್ಥ್ಯವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದೆ ಎಲ್ಲೆಲ್ಲೋ ಹೋಗಿ ಏನೇನೋ ಎಡವಟ್ಟುಗಳನ್ನು ಮಾಡಿಕೊಂಡಿದ್ದಾರೆ.ಇಲ್ಲಿ ನಾಯಕ ಚೇತನ್ (ನವೀನ್ ಕೃಷ್ಣ) ಚಿಂದಿ ಆಯುವ ಹುಡುಗ. ಎಲ್ಲೋ ಇದ್ದವನು ಉನ್ನತ ಸ್ಥಾನಕ್ಕೆ ಏರುತ್ತಾನೆ. ಇಡೀ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಹೊಸ ಐಡಿಯಾ ಮಾಡುತ್ತಾನೆ. ಪ್ರತಿ ಗ್ರಾಮಕ್ಕೂ ಅಗ್ಗದ ದರದಲ್ಲಿ ಲ್ಯಾಪ್ಟಾಪ್ ನೀಡಿದರೆ, ಸಮಸ್ಯೆಗಳನ್ನು ಪತ್ತೆ ಮಾಡಬಹುದು, ಎಲ್ಲವೂ ಸರಿ ಹೋಗುತ್ತದೆ ಅನ್ನೋದು ಅವನ ಕಲ್ಪನೆ. ಆತನ ಬಲೆಗೆ ಭ್ರಷ್ಟ ರಾಜಕಾರಣಿಗಳು, ಕಾವಿಧಾರಿಗಳು, ಭಯೋತ್ಪಾದಕರು, ಕೊನೆಗೆ ಪತ್ರಕರ್ತರೂ ಬೀಳುತ್ತಾರೆ. ಸೋಮಾಲಿಯಾ, ನೈಜೀರಿಯಾಗಳಂತಹ ದೇಶಗಳ ಸಮಸ್ಯೆಗಳಿಗೂ ಪರಿಹಾರ ಕೊಡುತ್ತಾನೆ. ಇದೇ ರೀತಿಯ ವಿಚಿತ್ರ ಕಲ್ಪನೆಗಳ ಅದೆಷ್ಟು ಚಿತ್ರಗಳು ಬಾಲಿವುಡ್ನಲ್ಲಿ ಬಂದಿಲ್ಲ. ಅಲ್ಲಿ ಅದ್ಭುತವನ್ನಾಗಿಸುವುದು ಅವರಿಗೆ ಸಾಧ್ಯವಿದೆ. ಇಲ್ಲೂ ಕನಿಷ್ಠ ಸಿನಿಮಾ ನೋಡುವಂತೆ ಮಾಡುವ ಸಾಧ್ಯತೆಗಳು ನಿರ್ದೇಶಕರಿಗೆ ಇದ್ದವು. ಅವುಗಳನ್ನು ಕೈ ಚೆಲ್ಲಿದ್ದಾರೆ. ಇಂತಹದ್ದೊಂದು ವಿಶಾಲ ವ್ಯಾಪ್ತಿಯ ಕಥೆಯನ್ನು ಸಿನಿಮಾ ಮಾಡುವಾಗ ಮೊದಲು ಬಜೆಟ್ ವ್ಯಾಪ್ತಿಯ ಬಗ್ಗೆ ನಿರ್ದೇಶಕರು ಚಿಂತಿಸಬೇಕಿತ್ತು. ಅಷ್ಟರಮಟ್ಟಿಗಿನ ವೈಜ್ಞಾನಿಕತೆಯನ್ನು ಬಿಂಬಿಸುವುದು ಸಾಧ್ಯವಿಲ್ಲದೇ ಇದ್ದಾಗ ನಿರ್ದೇಶಕರು ಒಂದು ಮಿತಿ ಹಾಕಿಕೊಳ್ಳಬೇಕಿತ್ತು.ಅನಗತ್ಯ ವಿಚಾರಗಳನ್ನು ತುರುಕಿರುವುದು, ಸಮಸ್ಯೆಗಳಿಗೆ ತಾರ್ಕಿಕ ಅರ್ಥ ನೀಡಲು ವಿಫಲವಾಗಿರುವುದು, ತಾಂತ್ರಿಕತೆಯ ಬೆಂಬಲ ಇಲ್ಲದೇ ಇರುವುದು ಪ್ರಮುಖ ಹಿನ್ನಡೆ. ಇಂತಹ ಕಥೆಯನ್ನು ಆರಿಸಿಕೊಳ್ಳುವಾಗ ಅಲ್ಲಿ ಪ್ರೀತಿ-ಪ್ರೇಮದ ಹಂಗನ್ನು ಬಿಡಬೇಕಿತ್ತು. ಈ ಗೊಂದಲಗಳಿಂದಾಗಿ ನಾಯಕಿ ವೀಣಾ (ಶಾಂತಲಾ) ಎಲ್ಲೋ ಕಳೆದು ಹೋಗುತ್ತಾರೆ.ಚಿತ್ರದ ಹೆಸರು ಕಾವ್ಯಾತ್ಮಕವಾಗಿದೆ, ನಮ್ಮದೇ ಬಾಲ್ಯವನ್ನು ಕೆದಕುವ ಯತ್ನಗಳಿರಬಹುದು ಎಂಬ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋದೀರೀ, ಜೋಕೆ!