Publish Date: Sun, 31 Oct 2021 (12:59 IST)
Updated Date: Sun, 31 Oct 2021 (13:03 IST)
ಪುನೀತ್ ಇನ್ನಿಲ್ಲ ಎಂಬ ಮಾತನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಅದನ್ನು ಒಪ್ಪಿಕೊಂಡು ಬದುಕು ಸಾಗಿಸಲೇಬೇಕಿದೆ.
ಅವರನ್ನು ಕಳೆದುಕೊಂಡ ಸ್ನೇಹಿತರು, ಸೆಲೆಬ್ರಿಟಿಗಳು ಪರಿಪರಿಯಾಗಿ ನೋವು ಅನುಭವಿಸುತ್ತಿದ್ದಾರೆ. ಬಾಲ್ಯದಿಂದಲೂ ಪುನೀತ್ ಜೊತೆ ಗೆಳೆತನ ಹೊಂದಿದ್ದ ಕಿಚ್ಚ ಸುದೀಪ್ ಅವರು ಈ ಘಟನೆಯಿಂದ ವಿಚಲಿತರಾಗಿದ್ದಾರೆ. ಅಗಲಿದ ಗೆಳೆಯನ ಬಗ್ಗೆ ಅವರು ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಸುದೀಪ್ ಅವರು ಭಾವುಕವಾಗಿ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.
ಎಲ್ಲವೂ ಮುಗಿದಿದೆ. ಸಹಜ ಸ್ಥಿತಿಯಲ್ಲಿ ಬರಲು ಇನ್ನೂ ಸ್ವಲ್ಪ ದಿನ ಹಿಡಿಯಲಿದೆ. ಇದು ಕೇವಲ ನಷ್ಟವಲ್ಲ. ಜನರು ಮತ್ತು ಚಿತ್ರರಂಗಕ್ಕೆ ಆಗಿರುವ ಸಡನ್ ಆಘಾತ. ಈ ದಿನ ಒಂದು ಸುಂದರ ಅಧ್ಯಾಯ ಕೊನೆ ಆಗಿದೆ. ಅಂತ್ಯಕ್ರಿಯೆ ವೇಳೆ ಕುಳಿತಿರುವಾಗ ಮಕ್ಕಳ ಪರಿಸ್ಥಿತಿ ಹೇಗಿರಬಹುದು ಅಂತ ಚಿಂತೆ ಆಯಿತು. ಕುಟುಂಬದ ಹಿರಿಯರಿಗೆ ಹೇಗೆ ಆಗಿರಬಹುದು? ಇದನ್ನೆಲ್ಲ ಯೋಚಿಸುತ್ತ ಪ್ರಜ್ಞೆ ತಪ್ಪಿದಂತಾಯಿತು ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
ಪುನೀತ್ ಎಲ್ಲರ ಪ್ರೀತಿಪಾತ್ರ ವ್ಯಕ್ತಿ ಆಗಿದ್ದರು. ಇಂದು ತಂದೆ-ತಾಯಿ ಪಕ್ಕದಲ್ಲಿ ಅವರನ್ನು ಮಲಗಿಸಿದ ಬಳಿಕ ನಾನು ಅಲ್ಲಿಂದ ಹೊರಟೆ. ಆಗ ಮನದಲ್ಲಿ ಹೀಗೆ ಅನಿಸಿತು; ಪುನೀತ್ ರಾಯಲ್ ಆಗಿ ಹುಟ್ಟಿದರು, ರಾಯಲ್ ಆಗಿ ಬೆಳೆದರು, ರಾಯಲ್ ಆಗಿ ಬಾಳಿದರು, ರಾಯಲ್ ಆಗಿಯೇ ಹೊರಟುಹೋದರು. ಈ ತಮ್ಮ ತಾರೆ ಈಗ ಆಕಾಶಕ್ಕೆ ಸೇರಿದೆ. ರಾತ್ರಿ ಆಗಸ ನೋಡಿದಾಗ ಬೇರೆಲ್ಲರಿಗಿಂತ ನೀವು ಹೆಚ್ಚು ಮಿನುಗುತ್ತೀರಿ ಎಂಬ ಭರವಸೆ ನನಗಿದೆ ಎಂದಿದ್ದಾರೆ ಸುದೀಪ್.