Publish Date: Mon, 20 Dec 2021 (09:01 IST)
Updated Date: Mon, 20 Dec 2021 (09:32 IST)
ಬೆಂಗಳೂರು: ಬೆಳಗಾವಿಯಲ್ಲಿ ಕನ್ನಡ ಬಾವುಟ ಸುಟ್ಟು ಪುಂಡಾಟ ಮೆರೆದ ಎಂಇಎಸ್ ಕಾರ್ಯಕರ್ತರ ಉದ್ಧಟತನದ ವಿರುದ್ಧ ನಟ ಶಿವರಾಜ್ ಕುಮಾರ್ ಗರಂ ಆಗಿ ಮಾತನಾಡಿದ್ದಾರೆ.
ನಮ್ಮ ಧ್ವಜ ಸುಟ್ಟರೆ ನಮ್ಮ ತಾಯಿಯನ್ನೇ ಸುಟ್ಟಂತೆ. ತಾಯಿಗೇನಾದರೂ ಆದರೆ ಸುಮ್ಮನಿರಕ್ಕಾಗುತ್ತಾ? ಹೋರಾಟ ಮಾಡಕ್ಕೆ ಸಿದ್ಧ. ನಂಗೀಗ 60 ವರ್ಷ ಆಯ್ತು. ಇಷ್ಟು ದಿನ ಬೆಳೆಸಿದ್ದೀರಾ. ಒಂದು ವೇಳೆ ಇದರಿಂದಲೇ ನನ್ನ ಪ್ರಾಣ ಹೋಗುತ್ತೆ ಅಂದರೆ ನಾನು ಭಾಷೆಗೋಸ್ಕರ ಪ್ರಾಣ ಕೊಡಲೂ ಸಿದ್ಧ ಎಂದು ಗುಡುಗಿದ್ದಾರೆ.
ಬಡವ ರಾಸ್ಕಲ್ ಸಿನಿಮಾ ಈವೆಂಟ್ ನಲ್ಲಿ ಗರಂ ಆಗಿ ಮಾತನಾಡಿದ ಶಿವಣ್ಣ ನಾವು ಎಲ್ಲಾ ಭಾಷೆಯ ಸಿನಿಮಾನೂ ನೋಡ್ತೀವಿ, ಗೌರವಿಸುತ್ತೇವೆ. ಹಾಗಂತ ನಮಗೆ ನಮ್ಮ ಭಾಷೆ ಎಂದರೆ ಅಭಿಮಾನವಿಲ್ಲ ಎಂದರ್ಥವಲ್ಲ. ಆದರೆ ನಮ್ಮ ಭಾಷೆ ಅಭಿಮಾನದಿಂದ ಇನ್ನೊಬ್ಬರಿಗೆ ಅವಮಾನ ಮಾಡಬಾರದು ಎಂದು ಶಿವಣ್ಣ ಖಡಕ್ ಆಗಿ ಹೇಳಿದ್ದಾರೆ.