ಚಾಮರಾಜನಗರ: ಬಂಡೀಪುರ ಅಭಯಾರಣ್ಯದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣ ಮಾಡಲು ಅನುಮತಿ ನೀಡಿರುವುದಕ್ಕೆ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ, ದೇವಾಲಯ ಪರಿಸರ ಬಂಡೀಪುರ ಅಭಯಾರಣ್ಯದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಸೂಕ್ಷ್ಮ ಪರಿಸರ ವಲಯವಾಗಿದ್ದು ರಾತ್ರಿ ಸಂಚಾರಕ್ಕೂ ವಿರೋಧವಿದೆ.
ಆದರೆ ಈಗ ಈ ಪರಿಸರದಲ್ಲಿ ಮಲಯಾಳಂ ಸಿನಿಮಾವೊಂದರ ಚಿತ್ರೀಕರಣ ನಡೆಸಲಾಗುತ್ತಿದೆ. ಇದಕ್ಕೆ ಸ್ಥಳೀಯ ರೈತರು, ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಮ್ಮ ಹಸುಗಳನ್ನು ಇಲ್ಲಿ ಮೇಯಿಸಲೂ ಅವಕಾಶ ಕೊಡಲ್ಲ. ಹಾಗಿರುವಾಗ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಹೇಗೆ ಕೊಟ್ಟರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ಅರಣ್ಯ ವಲಯದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕೊಡಬೇಕು ಎಂಬ ಕೇರಳದ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿಯುತ್ತಿದೆಯಾ? ಬಂಡೀಪುರವನ್ನು ಕೇರಳಕ್ಕೆ ಒತ್ತೆ ಇಡಲಾಗಿದೆಯೇ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ರಾಜ್ಯ ಸರ್ಕಾರವೇ ಚಿತ್ರೀಕರಣಕ್ಕೆ ಅನುಮತಿ ನೀಡಿದೆ ಎನ್ನಲಾಗಿದೆ. ಇಂತಹ ಪರಿಸರ ಸೂಕ್ಷ್ಮ ವಲಯದಲ್ಲಿ ಕನ್ನಡ ಸಿನಿಮಾಗಳಿಗೇ ಚಿತ್ರೀಕರಣಕ್ಕೆ ಅವಕಾಶ ಕೊಡಲಾಗುವುದಿಲ್ಲ. ಹಾಗಿದ್ದಾಗ ಮಲಯಾಳಂ ಸಿನಿಮಾಗೆ ಅವಕಾಶ ಕೊಟ್ಟಿದ್ದು ಹೇಗೆ? ಸ್ಥಳೀಯ ಶಾಸಕ ಗಣೇಶ್ ಪ್ರಸಾದ್ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರು ಕೂಡಾ. ಅವರಿಗೂ ಇದರ ಅರಿವಾಗಿಲ್ವಾ ಎಂದು ಆಕ್ರೋಶ ವ್ಯಕ್ತವಾಗಿದೆ.