Publish Date: Sat, 14 Mar 2026 (10:33 IST)
Updated Date: Sat, 14 Mar 2026 (10:36 IST)
ಅಭಿಮಾನಿಗಳಿಂದ ಅಣ್ಣಾವ್ರು ಎಂದು ಕರೆಯಿಸಿಕೊಳ್ಳುವ ಡಾ ರಾಜ್ ಕುಮಾರ್ ಕೇವಲ ನಟನಾಗಿ ಮಾತ್ರವಲ್ಲ, ನಿಜ ಜೀವನದಲ್ಲೂ ತಮ್ಮ ಆದರ್ಶಗಳಿಂದ ಜನರಿಗೆ ಅನುಕರಣೀಯರಾಗಿದ್ದರು. ಸಮಸ್ಯೆಗಳನ್ನು ಎದುರಿಸುವಾಗ ಅಣ್ಣಾವ್ರ ಈ ಮಾತು ನಮಗೆ ಪಾಠವಾಗಬೇಕು.
ಅಣ್ಣಾವ್ರು ತೆರೆ ಮೇಲೆ ಮೆರೆದು ಸಾಕಷ್ಟು ಜನರ ಪ್ರೀತಿ ಸಂಪಾದಿಸಿರಬಹುದು. ಹಾಗಂತ ಅವರಿಗೆ ಕಷ್ಟಗಳೇ ಇರಲಿಲ್ಲ ಎಂದಲ್ಲ. ಜೀವನದಲ್ಲಿ ಅವರೂ ಸಾಮಾನ್ಯರಂತೇ ಹಲವು ಏಳು-ಬೀಳುಗಳನ್ನು ಎದುರಿಸಿದ್ದಾರೆ. ಆದರೆ ಅದನ್ನೆಲ್ಲವನ್ನೂ ಅವರು ಎದುರಿಸಿ ಯಶಸ್ವೀ ಜೀವನ ನಡೆಸಿದವರು.
ಅಣ್ಣಾವ್ರಿಗೆ ಕೊನೆ ಕೊನೆಯಲ್ಲಿ ಮೊಣಕಾಲಿನ ಸಮಸ್ಯೆಯಾಗಿತ್ತು. ಎಷ್ಟೆಂದರೆ ಅವರಿಗೆ ತಮ್ಮ ಮೆಚ್ಚಿನ ಪಾತ್ರ ಮಾಡಲೂ ಕಷ್ಟವಾಗಿತ್ತು. ಇದು ಅವರಿಗೆ ತೀರಾ ಬಾಧೆ ನೀಡುತ್ತಿತ್ತು. ವೀರಪ್ಪನ್ ಅಪಹರಿಸಿ ಕಾಡಿಗೆ ಕರೆದುಕೊಂಡು ಹೋಗಿದ್ದಾಗಲೂ ಅವರಿಗೆ ಈ ಸಮಸ್ಯೆಯಿತ್ತು.
ಮೊಣಕಾಲಿನ ಸಮಸ್ಯೆಗೆ ಅವರು ಸಾಕಷ್ಟು ಚಿಕಿತ್ಸೆ ಪಡೆಯಲು ನೋಡಿದರಂತೆ. ಆದರೆ ಏನೇ ಮಾಡಿದರೂ ಅದು ಹೋಗುತ್ತಿರಲಿಲ್ಲ. ಕೊನೆಗೆ ಅಣ್ಣಾವ್ರು, ಇರಲಿ ನಾನೂ ನೋಡೇ ಬಿಡ್ತೀನಿ. ಇದನ್ನು ನನ್ನ ಫ್ರೆಂಡ್ ಮಾಡಿಕೊಳ್ಳುತ್ತೇನೆ. ನಾನು ಇರುವವರೆಗೆ ನನ್ನ ಜೊತೆಗೇ ಇರಲಿ. ಎಷ್ಟು ದಿನ ನನ್ನ ಜೊತೆಗಿರುತ್ತದೆ? ನಾನು ಇರುವವರೆಗೆ ಮಾತ್ರ ತಾನೇ ಎನ್ನುತ್ತಿದ್ದರಂತೆ. ಅದೇ ರೀತಿ ನಮಗೆ ಬರುವ ಸಮಸ್ಯೆಗಳನ್ನು ನಾವು ಸ್ನೇಹಿತನಂತೆ ಮಾಡಿಕೊಂಡು ಬಿಟ್ಟರೆ ಆ ಸಮಸ್ಯೆ ನಮಗೆ ಕಷ್ಟ ಎನಿಸಲ್ಲ ಎಂಬುದು ಅಣ್ಣಾವ್ರಿಂದ ನಾವು ಕಲಿಯಬೇಕಾದ ಪಾಠವಾಗಿದೆ.