Publish Date: Wed, 24 Jul 2024 (15:50 IST)
Updated Date: Wed, 24 Jul 2024 (15:53 IST)
ರಾಮನಗರ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮೀ ಅವರು ಶತಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ತಮ್ಮ ನೆಚ್ಚಿನ ನಟ ಆದಷ್ಟು ಬೇಗ ಬಿಡುಗಡೆಯಾಗಲಿ ಎಂದು ಡಿ ಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ನಿನ್ನೆ ರಾಮನಗರ ಚಾಮುಂಡಿ ಉತ್ಸವದಲ್ಲೂ ದರ್ಶನ್ ಪರ ಅಭಿಮಾನಿಗಳು ಘೋಷಣೆ ಕೂಗಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಭಾಷಣ ಮಾಡಲು ವೇದಿಕೆಯತ್ತ ಬರುತ್ತಿರುವಾಗ ದರ್ಶನ್ ಅವರ ಅಭಿಮಾನಿಗಳು ಡಿ ಬಾಸ್, ಡಿ ಬಾಸ್ ಎಂದು ಕೂಗಿದ್ದಾರೆ. ಇದನ್ನು ಕೇಳಿದ ಡಿಕೆಶಿ ಅವರು ಪ್ರತಿಕ್ರಿಯಿಸಿ ದರ್ಶನ್ ಪತ್ನಿ ಅವರು ಭೇಟಿಗೆ ಅವಕಾಶ ಕೇಳಿದ್ದಾರೆ ಎಂದು ಹೇಳಿದ್ದರು. ಇದೀಗ ಅದರಂತೆ ವಿಜಯಲಕ್ಷ್ಮೀ ಅವರು ದರ್ಶನ್ ಸಹೋಧರ ದಿನಕರ್ ತೂಗುದೀಪ್ ಜತೆ ಡಿಸಿಎಂ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇನ್ನೂ ಕರಗ ಉತ್ಸವದಲ್ಲಿ ದರ್ಶನ್ ವಿಚಾರ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್ ಅವರು, ಇನ್ನೂ ಏನಾದರೂ ಅನ್ಯಾಯ ಆಗಿದ್ದರೆ ಸರಿಪಡಿಸಲು ಪ್ರಯತ್ನ ಮಾಡುವೆ. ಆದರೆ, ನಾವು ಕಾನೂನಿಗೆ ಗೌರವ ಕೊಡಬೇಕು. ನಾವೆಲ್ಲ ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಆಗಿದ್ದವರಿಗೆ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣ. ನೊಂದ ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದರು.