ಮುಂಬೈ: ಬಾಲಿವುಡ್ ಖ್ಯಾತ ನಟ ಟೈಗರ್ ಶ್ರಾಫ್ ಅವರನ್ನು ಹತ್ಯೆ ಮಾಡಲು ಸುಫಾರಿ ನೀಡಲಾಗಿದೆ. ಅವರಿಗೆ ಕೊಲೆ ಬೆದರಿಕೆ ಇದೆ ಎಂದು ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಸುಳ್ಳು ಮಾಹಿತಿ ನೀಡಿದ ವ್ಯಕ್ತಿ ಈಗ ಪೊಲೀಸ್ ಅತಿಥಿಯಾಗಿದ್ದಾನೆ.
ಸೋಮವಾರ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಪಂಜಾಬ್ನಿಂದ ಕರೆ ಮಾಡಿದ್ದ ಮಾಣಿಕ್ ಕುಮಾರ್ ಸುಜಿಂದರ್ ಸಿಂಗ್ ಎಂಬ ವ್ಯಕ್ತಿ, ಟೈಗರ್ ಶ್ರಾಫ್ ಅವರ ಹತ್ಯೆಗೆ ಸುಪಾರಿ ನೀಡಲಾಗಿದ್ದು, ಕೆಲ ವ್ಯಕ್ತಿಗಳಿಗೆ ಆಯುಧ ಹಾಗೂ ₹2 ಲಕ್ಷ ನೀಡಲಾಗಿದೆ ಎಂದು ಹೇಳಿಕೊಂಡಿದ್ದ.
ಕೆಲವು ಭದ್ರತಾ ಏಜೆನ್ಸಿಯವರಿಂದ ಟೈಗರ್ ಶ್ರಾಫ್ ಅವರನ್ನು ಕೊಲ್ಲಲು ಸಿದ್ಧತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಸಿಂಗ್ ನೀಡಿದ್ದ ಮಾಹಿತಿ ಸುಳ್ಳು ಎಂದು ಗೊತ್ತಾಗಿದೆ.
ಈ ಸಂಬಂಧ ಮುಂಬೈ ಪೊಲೀಸರು ಖಾರ್ ಉಪನಗರದಲ್ಲಿ ಪ್ರಕರಣ ದಾಖಲಿಸಿದ್ದು, ಪಂಜಾಬ್ನ ಅಧಿಕಾರಿಗಳ ಸಹಕಾರದಿಂದ ಆತನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಮುಂಬೈಗೆ ತರಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.