Publish Date: Sat, 28 Jan 2017 (15:18 IST)
Updated Date: Sat, 28 Jan 2017 (15:22 IST)
ರಾಜ್ಯದ 7 ಜಿಲ್ಲೆಗಳ ಬಯಲು ಸೀಮೆ ಪ್ರದೇಶಗಳಿಗೆ ನೀರು ಪೂರೈಸುವ ಉದ್ದೇಶದೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆಗೆ ಅಗತ್ಯವಿರುವ ಸುಮಾರು 600 ಎಕರೆ ಭೂಮಿಯನ್ನು ಖರೀದಿಸಲು ದರ ನಿರ್ಧರಣೆಗೆ ಅಗತ್ಯವಿರುವ ಪೂರ್ವ ತಯಾರಿಗಾಗಿ ಜಿಲ್ಲಾಧಿಕಾರಿ ವಿ. ಚೈತ್ರ ಅವರ ಅಧ್ಯಕ್ಷತೆಯಲ್ಲಿಂದು ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ಈವರೆಗೆ ಆಗಿರುವ ಪ್ರಗತಿಯ ಬಗ್ಗೆ ಭೂಸ್ವಾಧೀನ ಅಧಿಕಾರಿ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಯೋಜನೆಗೆ ಅಗತ್ಯವಿರುವ ನಿರ್ಧಿಷ್ಟ ಜಮೀನಿನ ಪ್ರಮಾಣದ ಬಗ್ಗೆ ಪದೇ ಪದೇ ವ್ಯತ್ಯಾಸಗಳಾಗಬಾರದು. ಈ ಬಗ್ಗೆ ಅಂತಿಮಪಡಿಸಿ ಜನವರಿ 27ರೊಳಗೆ ವರದಿ ಸಲ್ಲಿಸಿದ ನಂತರವಷ್ಟೇ ದರ ನಿರ್ಧರಣೆಯ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿ.ಚೈತ್ರ ಅವರು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
100 ಎಕರೆ ಮೇಲಿನ ಜಮೀನು ಖರೀದಿಗೆ ಇರುವ ನಿರ್ಭಂದಗಳನ್ನು ಸರ್ಕಾರ ಸಡಿಲಿಸಿ ಹಂತ ಹಂತದ ಖರೀದಿಗೆ ಒಪ್ಪಿಗೆ ನೀಡಿದೆ. ಆದರೆ ಖರೀದಿಯ ಮೌಲ್ಯವು ವಿಶೇಷ ಭೂಸ್ವಾಧೀನ ಪ್ರಕ್ರಿಯೆಯ ದರ ನಿಗಧಿ ಮಾನದಂಡ ಮಿತಿಯೊಳಗಿರಬೇಕೆಂದು ನಿರ್ದೇಶನ ನೀಡಲಾಗಿದೆ.
ಭೂ ಕೋರಿಕೆ ಇಲಾಖೆ ಖರೀದಿ ಉದ್ದೇಶ, ವಿಸ್ತೀರ್ಣ, ಆರ್.ಟಿ.ಸಿ. ನಕ್ಷೆ ಮತ್ತು ಒಪ್ಪಿಗೆ ಪತ್ರವನ್ನು ಪಡೆಯಬೇಕು ಎಂದ ಅವರು ಯೋಜನೆಯ ಸಾಮಾಜಿಕ ಪರಿಣಾಮಗಳ ನಿರ್ಧರಣೆಗೆ ರಚಿಸಲಾಗಿರುವ ಸಮಿತಿ ತನ್ನ ವರದಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶವನ್ನು ಕೋರಿದ್ದು ಅದರ ಬಗೆಗಿನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಆದೇಶ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.