ತೆರಿಗೆ ವಂಚಕರ ಹಾವಳಿಯನ್ನು ತಪ್ಪಿಸಲು ಮತ್ತು ತೆರಿಗೆ ವಂಚನೆಯಂತಹ ಆರೋಪಗಳನ್ನು ತಡೆಗಟ್ಟಲು ತೆರಿಗೆ ಇಲಾಖೆ ಪ್ರಸಕ್ತ ಆರ್ಥಿಕ ವರ್ಷದಿಂದ ಹೊಸ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿಸದೇ ವಂಚಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಆದಾಯ ತೆರಿಗೆ ಇಲಾಖೆ, ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಾನ್ ಕಾರ್ಡ್ ಹಾಗೂ ಎಲ್ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ರದ್ದುಗೊಳಿಸುವುದಾಗಿ ಪ್ರಕಟಿಸಿದೆ.
ತೆರಿಗೆ ಇಲಾಖೆ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ತೆರಿಗೆ ಪಾವತಿ ಮಾಡದೇ ವಂಚನೆ ಮಾಡುವವರ ಪ್ಯಾನ್ ಕಾರ್ಡ್ನ್ನು ಬ್ಲಾಕ್ ಮಾಡುವುದಾಗಿ ಮತ್ತು ಅಂತಹ ವಂಚಕರಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಸಾಲ ದೊರೆಯದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ತೆರಿಗೆ ಪಾವತಿ ಮಾಡದೇ ವಂಚನೆ ಮಾಡುವ ಚಂದಾದಾರರ ಖಾತೆಗೆ ಹಣ ನೇರವಾಗಿ ಜಮಾವಣೆಯಾಗುವ ಎಲ್ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಹಣವನ್ನು ರದ್ದುಗೊಳಿಸುವಂತೆ ಹಣಕಾಸು ಇಲಾಖೆಗೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ.