Select Your Language

Notifications

webdunia
webdunia
webdunia
webdunia

'ತಮಿಳಲ್ಲಿ ಮಾತಾಡಿದ್ರೆ ಅದೇ ಭಾಷೆಯಲ್ಲೇಕೆ ಉತ್ತರಿಸ್ಬೇಕು?'

ಚೆನ್ನೈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುನರೂರು ಪ್ರಶ್ನೆ

'ತಮಿಳಲ್ಲಿ ಮಾತಾಡಿದ್ರೆ ಅದೇ ಭಾಷೆಯಲ್ಲೇಕೆ ಉತ್ತರಿಸ್ಬೇಕು?'
ಚೆನ್ನೈ , ಭಾನುವಾರ, 19 ಸೆಪ್ಟಂಬರ್ 2010 (11:27 IST)
ಅವಿನಾಶ್ ಬಿ.

WD
ಕನ್ನಡದ ನೆಲದಲ್ಲಿಯೇ ಕನ್ನಡ ಯಾರಿಗೂ ಬೇಡವಾಗುತ್ತಿದೆ. ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡುವ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಪ್ರಯತ್ನವೂ ಸರಕಾರದಿಂದ ಸಾಧ್ಯವಾಗಿಲ್ಲ ಎಂದು ಕೇಂದ್ರೀಯ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ವಿಷಾದಿಸಿದ್ದಾರೆ.

ಚೆನ್ನೈಯಲ್ಲಿ ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ತಮಿಳುನಾಡು ರಾಜ್ಯ ಘಟಕದ ಮೊದಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂಗ್ಲಿಷ್ ಹಾವಳಿಯಿಂದಾಗಿ ಕನ್ನಡ ಶಾಲೆಗಳು ದಿನೇ ದಿನೇ ಮುಚ್ಚುವ ಪರಿಸ್ಥಿತಿ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಒಳನಾಡ ಕನ್ನಡಿಗರಲ್ಲೇ ಈ ದುಸ್ಥಿತಿ ಇರುವಾಗ, ಹೊರನಾಡಿನಲ್ಲಿ ಕನ್ನಡ ಕಲಿಸುವ ಸೇವೆ ಮಾಡುತ್ತಿರುವ ಚೆನ್ನೈ ಕರ್ನಾಟಕ ಸಂಘದ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

webdunia
WD

ಇಂಥಾ ಅಭಿಮಾನಶೂನ್ಯತೆಯೇಕೆ?
ಬೆಂಗಳೂರಿನಲ್ಲಿ ಶೇ.20 ಮಾತ್ರ ಕನ್ನಡ ಮಾತನಾಡುವವರಿದ್ದಾರೆ. ನಾವೋ, ಬೇರೆ ನಾಡಿಗೆ ಹೋದಾಗ ಅಲ್ಲಿನ ಭಾಷೆ ಕಲಿತುಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ಬೆಂಗಳೂರಿಗೆ ವಲಸೆ ಬಂದವರು ಅವರವರ ಭಾಷೆಯಲ್ಲಿಯೇ ಮಾತನಾಡುತ್ತಾರೆಯೇ ಹೊರತು ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ, ನಾವು ಅವರಿಗೆ ಅವರ ತಮಿಳು ಭಾಷೆಯಲ್ಲಿಯೇ ಉತ್ತರಿಸುವ ಪ್ರಯತ್ನ ಮಾಡುತ್ತೇವೆ. ಇದೆಂಥಾ ಅಭಿಮಾನಶೂನ್ಯತೆ ನಮ್ಮದು ಎಂದು ಪುನರೂರು ವಿಷಾದಿಸಿದರು.

ನಮ್ಮ ರಾಜ್ಯದ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೂ ತೀವ್ರವಾಗಿದೆ. ಶಿಕ್ಷಕರಾಗಿದ್ದವರು ಬದಲಿ ಶಿಕ್ಷಕರನ್ನು ನೇಮಿಸಿ, ಬೇರೆ ಉದ್ಯೋಗ ಮಾಡುತ್ತಾರೆ ಎಂದ ಪುನರೂರು, ಅಧ್ಯಾಪಕರಿಲ್ಲದ ಶಾಲೆಗೆ ಮಕ್ಕಳನ್ನೇ ಕಳುಹಿಸಬೇಡಿ ಎಂದು ಪೋಷಕರಿಗೆ ಮನವಿ ಮಾಡಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಮಾತನಾಡಿ, ಅಧಿಕಾರಕ್ಕೆ ಬರುವ ಮೊದಲು ರೂಪಿಸಿದ್ದ 10 ಅಂಶಗಳ ಕಾರ್ಯಕ್ರಮ ಪಟ್ಟಿಯಲ್ಲಿ ಎಲ್ಲವನ್ನೂ ಒಂದೂವರೆ ವರ್ಷ ಅಧಿಕಾರಾವಧಿಯಲ್ಲಿ ಈಡೇರಿಸಿದ್ದೇನೆ ಎಂಬ ಹೆಮ್ಮೆ ತನಗಿದೆ ಎಂದರು.

ಎಲ್ಲ ಜಿಲ್ಲೆಗಳಲ್ಲಿ ಸಾಹಿತ್ಯ ಸಮ್ಮೇಳನ ಏರ್ಪಡಿಸುವ ಕನಸು ನನಸಾಗಿದೆ, ಅಧ್ಯಕ್ಷರ ಖರ್ಚು ವೆಚ್ಚಗಳಲ್ಲಿ ಉಳಿತಾಯ ಮಾಡಿದ 9 ಲಕ್ಷ ರೂಪಾಯಿಗಳನ್ನು ಹೊರರಾಜ್ಯಗಳ (ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಮತ್ತು ಕೇರಳ) ಕನ್ನಡ ಸಾಹಿತ್ಯ ಪರಿಷತ್ತುಗಳಿಗೆ ಹಂಚಿ, ಅವರಿಗೆ ಸಮ್ಮೇಳನ ಆಯೋಜಿಸಲು ನೆರವು ನೀಡಿರುವುದಾಗಿ ಹೇಳಿದ ಅವರು, ಸರಕಾರದಿಂದ 3.45 ಕೋಟಿ ರೂಪಾಯಿ ಸಹಾಯ ಧನವನ್ನು ಕಸಾಪಕ್ಕೆ ದೊರಕಿಸಿರುವುದಾಗಿ ಹೇಳಿದರು.

webdunia
WD

8 ಸಂಪುಟಗಳ ನಿಘಂಟು ಲೋಕಾರ್ಪಣೆ
ಅಕ್ಟೋಬರ್ 1ರಂದು 10 ಸಾವಿರ ಪುಟಗಳುಳ್ಳ 8 ಸಂಪುಟಗಳ ನಿಘಂಟು ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಲಿದೆ ಎಂದೂ ಡಾ.ನಲ್ಲೂರು ಪ್ರಸಾದ್ ಘೋಷಿಸಿದರು.

ಭಾಷೆ ಹೆಸರಲ್ಲಿ ದ್ವೇಷ ಬಿತ್ತೋದು ಬೇಡ. ಹೊರರಾಜ್ಯದಲ್ಲಿದ್ದುಕೊಂಡು ಕನ್ನಡದ ಕೈಂಕರ್ಯ ಮುಂದುವರಿಯಬೇಕು. ತಮಿಳು ಸಾಹಿತ್ಯಗಳು ಕನ್ನಡಕ್ಕೆ, ಕನ್ನಡದ ಕೃತಿಗಳು ತಮಿಳಿಗೆ ಅನುವಾದವಾಗುವ ಮೂಲಕ ಕೊಡು-ಕೊಳ್ಳುವಿಕೆ ಸಂಸ್ಕೃತಿ ಮುಂದುವರಿಯಬೇಕು ಎಂದರಲ್ಲದೆ, ಇಂತಹಾ ಅನುವಾದಿತ ಕೃತಿಗಳನ್ನು ಪ್ರಕಟಿಸಿದರೆ ಈ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಅರ್ಥಪೂರ್ಣವಾಗುತ್ತವೆ ಎಂದರು.

ಪೇಜಾವರ ಮಠದ ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಶೀರ್ವಚನ ನೀಡಿದರು. ಮದರಾಸು ವಿವಿ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಶ್ರೀಕೃಷ್ಣ ಭಟ್ ಅರ್ತಿಕತೆ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಮಂಗಳೂರು ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ಬೆಳಿಗ್ಗೆ ಕನ್ನಡ ಧ್ವಜಾರೋಹಣವನ್ನು ಕೆ.ಪಿ.ಆಚಾರ್ಯ ಹಾಗೂ ರಾಷ್ಟ್ರ ಧ್ವಜಾರೋಹಣವನ್ನು ಶ್ರೀಕೃಷ್ಣ ಭಟ್ ಅರ್ತಿಕತೆ ನೆರವೇರಿಸಿದರು. ಶ್ಯಾಂಪ್ರಕಾಶ್ ಅರ್ತಿಕಜೆ ಮತ್ತು ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿ ಎಸ್.ಎನ್.ಪಂಜಾಜೆ ನೇತೃತ್ವದ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ವತಿಯಿಂದ ಶ್ರೀರಾಮಚಂದ್ರ ದರ್ಶನ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ತಮಿಳುನಾಡು ಕಸಾಪ ಅಧ್ಯಕ್ಷ ಡಾ. ಕೆ.ಪಿ. ಆಚಾರ್ಯ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ.ತಮಿಳ್ ಸೆಲ್ವಿ ವಂದಿಸಿದರು. ಸುಧಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada