ಡಯಾಬಿಟಿಕ್ ಫುಟ್ ಸೊಸೈಟಿ ಆಫ್ ಇಂಡಿಯಾದ 6ನೇ ವಾರ್ಷಿಕ ಸಮಾವೇಶ ಚೆನ್ನೈನ ತಾಜ್ ಕೋರೊಮ್ಯಾಂಡಲ್ನಲ್ಲಿ ನೆರವೇರಿತು. ಭಾರತ ಮತ್ತಿತರ ರಾಷ್ಟ್ರಗಳಿಗೆ ಸೇರಿದ ಸುಮಾರು 400 ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಮೂವರು ಖ್ಯಾತ ಅಂತಾರಾಷ್ಟ್ರೀಯ ಭಾಷಣಕಾರರಾದ ಅಮೆರಿಕದ ಡಾ.ಡೇವಿಡ್ ಆರ್ಮ್ಸ್ಟ್ರಾಂಗ್, ಡಾ. ಕ್ರಿಸ್ ಅಟಿಂಗರ್ ಹಾಗೂ ಲಂಡನ್ನ ಮೈಕ್ ಎಡ್ಮಂಡ್ಸ್ ಜತೆಗೆ ಭಾರತದ 20 ಮಂದಿ ತಜ್ಞರು ಪಾಲ್ಗೊಂಡಿದ್ದರು.
ಮಧುಮೇಹಿ ಪಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಅನೇಕ ಹೊಸ ವಿಧಾನಗಳಾದ ಹೊಸ ರೋಗಪ್ರತಿರೋಧಕ, ಗಾಯವಾಸಿಮಾಡುವ ಹೊಸ ವಿಎಸಿ ಥೆರಪಿ, ಗಾಯದ ಡ್ರೆಸಿಂಗ್ ಸಾಮಗ್ರಿ ಮುಂತಾದ ವಿಷಯಗಳನ್ನು ಚರ್ಚಿಸಲಾಯಿತು.
ಚೆನ್ನೈನ ಸುಂದರಾಂ ಮೆಡಿಕಲ್ ಪ್ರತಿಷ್ಠಾನದ ಪ್ಲಾಸ್ಟಿಕ್ ಸರ್ಜನ್ ಡಾ. ವಿ.ಬಿ.ಎನ್. ಮೂರ್ತಿ ಸಮಾವೇಶದ ಸಂಘಟನಾ ಅಧ್ಯಕ್ಷರಾಗಿದ್ದರು ಮತ್ತು ಚೆನ್ನೈನ ಎಂವಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಜಯ್ ವಿಶ್ವನಾಥನ್ ಸಂಘಟನಾ ಕಾರ್ಯದರ್ಶಿ.
ಸಮಾವೇಶದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರು, ಶಸ್ತ್ರಚಿಕಿತ್ಸಕರಿಗೆ ಡಿಎಫ್ಎಸ್ಐ ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳನ್ನು ತಮಿಳುನಾಡು ಆರೋಗ್ಯ ಖಾತೆ ಕಾರ್ಯದರ್ಶಿ ವಿ.ಕೆ. ಸುಬ್ಬರಾಜು ಬಿಡುಗಡೆ ಮಾಡಿದರು.