ತರಕಾರಿಗಳನ್ನು ಬೇಯಿಸುವುದರಿಂದ ಇವುಗಳನ್ನು ಹಾಳಾಗದಂತೆ ಸಂರಕ್ಷಣೆಯಾಗುತ್ತದೆ ಮಾತ್ರವಲ್ಲದೆ ಅವುಗಳಲ್ಲಿರುವ ಪೌಷ್ಟಿಕಾಂಶವೂ ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದ್ದು, ಸಾಂಪ್ರದಾಯಿಕ ತಿಳುವಳಿಕೆಯನ್ನು ಸ್ಪಷ್ಟವಾಗಿ ವಿರೋಧಿಸುವುದರೊಂದಿಗೆ ಪಾಕಶಾಸ್ತ್ರದಲ್ಲಿ ಅಚ್ಚರಿಯನ್ನು ಉಂಟುಮಾಡಿದೆ.
ಈ ಕುರಿತಾಗಿ ಸಂಶೋಧನೆ ನಡೆಸಿದ ಅಂತರಾಷ್ಟ್ರೀಯ ಸಂಶೋಧನಾ ತಂಡ, ಅಡುಗೆ ಪದ್ಧತಿಗೆ ಅನುಗುಣವಾಗಿ ತರಕಾರಿಗಳನ್ನು ಬೇಯಿಸುವುದರಿಂದ ಅವುಗಳನ್ನು ಹೆಚ್ಚು ಸಮಯ ಸಂರಕ್ಷಿಸಬಹುದಾಗಿದೆ, ಅಲ್ಲದೆ ಅವುಗಳಲ್ಲಿನ ಪೌಷ್ಟಿಕಾಂಶಗಳ ಪ್ರಮಾಣದಲ್ಲಿ ಹೆಚ್ಚಳವೂ ಉಂಟಾಗುತ್ತದೆ ಎಂದು ತಿಳಿಸಿರುವುದಾಗಿ 'ಸೈನ್ಸ್ ಡೈಲಿ' ವರದಿ ಮಾಡಿದೆ.
ತರಕಾರಿಗಳನ್ನು ಹಸಿಯಾಗಿಯೇ ತಿನ್ನಬೇಕು, ತರಕಾರಿಗಳನ್ನು ಬೇಯಿಸಿದರೆ ಅದರ ಪೋಷಕಾಂಶಗಳು ನಾಶವಾಗುತ್ತದೆ ಎಂದು ಅನೇಕ ಮಂದಿ ತಿಳಿದಿದ್ದಾರೆ. ಆದರೆ ತರಕಾರಿಗಳನ್ನು ಬೇಯಿಸುವುದರಿಂದ ಅವುಗಳಲ್ಲಿರುವ ಪೌಷ್ಟಿಕಾಂಶಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ ಎಂಬುದಾಗಿ ನಮ್ಮ ಅಧ್ಯಯನ ತಿಳಿಸುತ್ತದೆ ಎಂದು ಸಂಶೋಧನಾ ತಂಡದ ನಾಯಕ ಇಟಲಿಯ ನಿಕೋಲಿಟಾ ಪೆಲೆಗ್ರಿನಿ ಹೇಳುತ್ತಾರೆ.
ಕ್ಯಾರೆಟ್, ಮುಳ್ಳುಸೌತೆ ಮತ್ತು ಕಾಲಿಫ್ಲವರ್ಗಳನ್ನು ಕುದಿಸುವುದು, ಹಬೆಯಲ್ಲಿ ಬೇಯಿಸುವುದು ಮತ್ತು ಹುರಿಯುವುದು- ಇಟಾಲಿಯನ್ ಮೂಲದ ಪದ್ಧತಿಯ ಈ ಮೂರು ಪಾಕ ವಿಧಾನಕ್ಕೆ ಒಳಪಡಿಸಿದಾಗ ಉಂಟಾದ ಬದಲಾವಣೆಯ ಆಧಾರದಲ್ಲಿ ತಂಡವು ಈ ತೀರ್ಮಾನವನ್ನು ತೆಗೆದುಕೊಂಡಿತು.
ಬೇಯಿಸುವುದರಿಂದ ಮತ್ತು ಕುದಿಸುವುದರಿಂದ ತರಕಾರಿಗಳಲ್ಲಿರುವ 'ಆಂಟಿಆಕ್ಸಿಡೆಂಟ್ ಕಂಪೌಂಡ್'ನ್ನು ಉಳಿಸಿಕೊಳ್ಳಬಹುದಾಗಿದೆ. ಆದರೆ ನೀರು ಆಧಾರಿತ ಪಾಕ ವಿಧಾನಕ್ಕೆ ಹೋಲಿಸಿದರೆ ಹುರಿಯುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳಲ್ಲಿರುವ ಆಂಟಿಆಕ್ಸಿಡೆಂಟ್ ಕಳೆದುಹೋಗುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಕಾಲಿಫ್ಲವರನ್ನು ಹಬೆಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಗ್ಲುಕೋಸೈನೊಲೇಟ್ಸ್ (ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವುಳ್ಳ ಸಸ್ಯಜನ್ಯ ಅಂಶ) ಅಂಶವು ಹೆಚ್ಚಾಗುವುದು ಕಂಡುಬಂತು.
ತರಕಾರಿಗಳನ್ನು ಉತ್ತಮವಾಗಿ ಸಂರಕ್ಷಣೆ ಮಾಡಬಲ್ಲ ಮತ್ತು ಪೌಷ್ಟಿಕಾಂಶಗಳ ಪ್ರಮಾಣವನ್ನು ಹೆಚ್ಚುಮಾಡಬಲ್ಲ ಪಾಕ ವಿಧಾನವನ್ನು ಆಯ್ಕೆ ಮಾಡಬಹುದು ಎಂದು ಈ ತಂಡವು ಸಲಹೆ ನೀಡಿದೆ. ಏನೇ ಆದರೂ ನಾವು ಬೇಯಿಸಿದ ತರಕಾರಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಎದುರು ನೋಡುತ್ತಿದ್ದೇವೆ ಎಂದು ಪಿಲ್ಲೆಗ್ರಿನಿ ಅವರು ಉಲ್ಲೇಖಿಸಿರುವುದನ್ನು ವರದಿಗಳು ತಿಳಿಸಿವೆ.
ಈ ಅಧ್ಯಯನದ ಫಲಿತಾಂಶವನ್ನು 'ಎಸಿಎಸ್ ಜರ್ನಲ್ ಆಫ್ ಎಗ್ರಿಕಲ್ಚರ್ ಆಂಡ್ ಫುಡ್ ಕೆಮೆಸ್ಟ್ರಿ'ಯಲ್ಲಿ ಪ್ರಕಟಿಸಲಾಗಿದೆ.