Select Your Language

Notifications

webdunia
webdunia
webdunia
webdunia

ಕರ್ನಾಟಕದ ಟಾಪ್ 10 ಪ್ರಸಿದ್ದ ಪ್ರವಾಸಿ ತಾಣಗಳು

ಕರ್ನಾಟಕದ ಟಾಪ್ 10 ಪ್ರಸಿದ್ದ ಪ್ರವಾಸಿ ತಾಣಗಳು
ಬೆಂಗಳೂರು , ಗುರುವಾರ, 26 ಡಿಸೆಂಬರ್ 2019 (14:21 IST)
ಕಣ್ಮನ ಸೆಳೆಯುತ್ತಿರುವ ಕಲ್ಲತ್ತಗಿರಿ, ಹೆಬ್ಬೆ ಫಾಲ್ಸ್
 
ಚಿಕ್ಕಮಗಳೂರು ಪರ್ವತ ಶ್ರೇಣಿಗಳ ನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಪರ್ವತ ಶ್ರೇಣಿಗಳಲ್ಲಿರುವ ಫಾಲ್ಸ್ ಗಳು ಎಂದಿಗಿಂತ ಹೆಚ್ಚಾಗಿ ಮೈದುಂಬಿಕೊಂಡು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
 
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆತರೀಕೆರೆ ತಾಲ್ಲೂಕಿನ ಪರ್ವತ ಶ್ರೇಣಿಗಳಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಕಲ್ಲತ್ತಗಿರಿ ಹಾಗೂ ಹೆಬ್ಬೆ ಫಾಲ್ಸ್ ಗಳಿಗೆ ಹೆಚ್ಚಾಗಿ ಹರಿದು ಬರುತ್ತಿದೆ. ಮೇಲಿನಿಂದ ಧುಮ್ಮುಕ್ಕುತ್ತಿರುವ ನೀರಿನ ದೃಶ್ಯಾವಳಿನೋಡುಗರ ಗಮನ ಸೆಳೆಯುತ್ತಿವೆ. ಹಸಿರು ಬೆಟ್ಟಗಳ ನಡುವೆ ಕಣ್ಣಿಗೆಕಾಣಸಿಗುವ ಹಾಲ್ನೊರೆಯಂತೆ
ಹರಿಯುತ್ತಿರುವ ನೀರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹೆಬ್ಬೆ ಮತ್ತು ಕಲ್ಲತ್ತಗಿರಿ ಫಾಲ್ಸ್ಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
 
ಕಲ್ಲತ್ತಗಿರಿ ಹಾಗೂ ಹೆಬ್ಬೆಯು ತುಂಬಿ ಹರಿಯುತ್ತಿದ್ದು ಪ್ರವಾಸಿಗರಲ್ಲಿ ಎಂದಿಗಿಂತ ಹೆಚ್ಚಾಗಿ ಮುದನೀಡುತ್ತಿವೆ. ಹಸಿರು ಬೆಟ್ಟಗಳ ನಡುವೆ ತಣ್ಣನೆಯ ಮೋಡ, ರಸ್ತೆ ತುಂಬೆಲ್ಲ ಜುಳು ಜುಳು ಝರಿಗಳ ನಾದ ಪ್ರವಾಸಿಗರಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದೆ.
 
 
ಮುಂಗಾರು ಮಳೆಗೆ ಮಲೆನಾಡಿನ ಕಂಪು
 
 
ಮಳೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ... ಮಳೆಯಲ್ಲಿ ನೆನೆಯುತ್ತ ಆ ಚುಮ ಚುಮ ಚಳಿಗೆ ಸಣ್ಣದಾಗಿ ನಡುಗಿ ಮನೆಯನ್ನು ಸೇರಿ ಬಿಸಿ ಚಹಾ ಸೇವಿಸುವ ಸುಖ ಹೇಳುವಂತದ್ದಲ್ಲ.. ಅದರಲ್ಲೂ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಗಾಲ ಶುರುವಾಯಿತೆಂದರೆ ಸಾಕು ಪ್ರಕೃತಿ ತನ್ನದೇ ಆದ ರೀತಿಯಲ್ಲಿ ನಮ್ಮನ್ನು ಸೆಳೆಯತೊಡಗುತ್ತದೆ.
 
ಅದರಲ್ಲೂ ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಅಬ್ಬರಿಸುವ ಸಮುದ್ರದ ಕಡಲು ನಮ್ಮೊಡನೆ ಏನನ್ನೋ ಹೇಳಬಯಸುತ್ತಿವೆ ಎನ್ನುವಂತೆ ಭಾಸವಾಗುವುದು ಸುಳ್ಳಲ್ಲ. ಸೂತ್ತಲೂ ಕಾರ್ಮೋಡಗಳು ತಣ್ಣನೆಯ ಗಾಳಿ ಸಿಡಿಲು ಗುಡುಗುಗಳ ಆರ್ಭಟದಿ ಸುರಿಯುವ ಮಳೆಗೆ ಮನಸ್ಸು ಮುದಗೊಳ್ಳುವುದರ ಜೊತೆಗೆ ಏನೋ ಒಂದು ರೀತಿಯ ಸಡಗರವನ್ನು ನಮ್ಮೊಳಗೆ ಉಂಟು ಮಾಡುತ್ತದೆ ಎಂದರೆ ತಪ್ಪಾಗಲಾರದು. 
 
ಪಟ್ಟಣಕ್ಕೆ ಹೋಲಿಸಿದರೆ ಮಳೆಯ ಮಜಾವನ್ನು ಅನುಭವಿಸಬೇಕು ಎಂದರೆ ಅದು ಸಾಧ್ಯವಾಗದ ಮಾತು. ನಗರ ಪ್ರದೇಶಗಳಲ್ಲಿ ಕಂಡುಬರುವ ಟ್ರಾಫ್ರಿಕ್ ಜಂಜಾಟ, ಕಾಂಕ್ರಿಟ್ ಕಾಡುಗಳ ಮಧ್ಯೆ ಇರುವ ರಸ್ತೆಗಳಲ್ಲಿ ಮಳೆ ಬಂತೆಂದರೆ ಸಾಕು ಹಿಡಿ ಶಾಪ ಹಾಕಬೇಕಾಗುವುದೇ ಹೊರತು ಮಳೆಯ ಆನಂದವನ್ನು ಪಡೆಯುವುದು ಅಸಾಧ್ಯ. ನಮಗೆ ಮಳೆಯ ಸೊಬಗು ಸಿಗುವುದು ಮಲೆನಾಡು ಮತ್ತು ಕರಾವಳಿ ಭಾಗದಲ್ಲೇ ಏಕೆಂದರೆ ಅಲ್ಲಿನ ವಾತಾವರಣ, ಶುದ್ಧ ಗಾಳಿ, ಸುತ್ತಲಿನ ಪ್ರಕೃತಿ, ಮಸುಕಾದ ಮಂಜು, ಸೌಂದರ್ಯದ ನೈಜ ಅನುಭೂತಿ ಸಿಗುವುದು ಈ ಪ್ರದೇಶಗಳಲ್ಲಿ ಎಂದೇ ಹೇಳಬಹುದು ಇಲ್ಲಿನ ಸುಂದರತೆಗೆ ಮರುಳಾಗದವರು ಯಾರು ಇಲ್ಲ ಅದಕ್ಕಾಗಿಯೇ ಹಲವಾರು ಸಿನೆಮಾಗಳಲ್ಲಿ ಇಲ್ಲಿನ ಸೊಬಗನ್ನು ಸೆರೆಹಿಡಿಯಲು ಚಿತ್ರೀಕರಣವನ್ನು ಮಾಡಲಾಗುತ್ತದೆ. 
 
ಮಲೆನಾಡಿನ ಪ್ರದೇಶಗಳಲ್ಲಿ ಮಳೆಗಾಲ ಬಂತೆಂದರೆ ಸಾಕು ಸುತ್ತಲಿನ ಹಸಿರು ಕಣ್ಣಿಗೆ ಮುದ ನೀಡಲು ಸುತ್ತಲಿನ ಪ್ರದೇಶ ತಯಾರಾಗುತ್ತದೆ ಬೆಟ್ಟ ಗುಡ್ಡಗಳು ಹಸಿರು ಸೀರೆ ಉಟ್ಟ ಚೆಲುವೆಯ ಹಾಗೆ ಸಿಂಗಾರಗೊಳ್ಳುತ್ತದೆ. ಜಲಪಾತಗಳು ದುಮ್ಮಿಕ್ಕಿ ಹರಿಯುತ್ತೊಡಗುತ್ತವೆ ಅದನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಮಳೆಗಾಲದಲ್ಲಿ ಮಲೆನಾಡಿನ ಕಡೆಗೆ ಪ್ರಯಾಣ ಬೆಳೆಸುವುದು. ಅಷ್ಟೇ ಅಲ್ಲ ಕರಾವಳಿ ಭಾಗದಲ್ಲಿ ತುಂಬಿ ಹರಿಯುವ ನದಿಗಳು, ಸಮುದ್ರ ತನ್ನದೇ ಆದ ರೀತಿಯಲ್ಲಿ ಮನಸ್ಸಿಗೆ ಮುದ ನೀಡುತ್ತವೆ. ಅಷ್ಟೇ ಅಲ್ಲ, ಮಳೆ ಬೀಳುವ ಅವಧಿಯಲ್ಲಿ ಕಡಲ ತಡಿಯಲ್ಲಿ ಸಂಗಾತಿಯೊಡನೆ ಹೆಜ್ಜೆಗಳನ್ನು ಸೇರಿಸಿ ನಡೆಯುವುದು ಕಿನಾರೆಯಲ್ಲಿ ಮಳೆಯಲ್ಲಿ ನೆನೆಯುವುದು ಇವೆಲ್ಲಾ ಮನಸಿಗೆ ಸಂತಸವನ್ನುಂಟು ಮಾಡುತ್ತದೆ.
 
ಮಳೆಗಾಲ ಬಂತೆಂದರೆ ಸಾಕು ಮನೆಯಲ್ಲಿ ಅದೇನೋ ಸಡಗರ, ತರತರಹದ ತಿನಿಸುಗಳನ್ನು ತಯಾರಿಸುವುದು ಸಾಮಾನ್ಯ ಅದರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಗಾಲಕ್ಕೆಂದೇ ಸಾಕಷ್ಟು ವಿಧ ವಿಧವಾದ ತಿನಿಸುಗಳನ್ನು ತಯಾರಿಸುತ್ತಾರೆ. ಮಾಂಸ ಪ್ರಿಯರಿಗೆ ಮಳೆಗಾಲ ಬಂತು ಎಂದರೆ ಸಾಕು ವಿವಿಧ ಬಗೆಯ ಭಕ್ಷ್ಯ ಭೋಜನಗಳು ಮನೆಗಳಲ್ಲಿ ಸಿದ್ಧವಾಗುತ್ತವೆ. ಅಷ್ಟೇ ಅಲ್ಲ ಕರಾವಳಿ ಭಾಗದಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ತರಹೇವಾರು ಮೀನುಗಳು ಲಭ್ಯವಾಗುತ್ತವೆ ಅದು ಎಲ್ಲಾ ಅವಧಿಯಲ್ಲೂ ಲಭ್ಯವಿರುವುದಿಲ್ಲ ಹಾಗಾಗಿ ಅಂತಹ ಮೀನುಗಳಿಗೆ ಬಾರಿ ಬೇಡಿಕೆ ಇದ್ದು ಅದರ ರುಚಿಯನ್ನು ಸವಿಯಬೇಕು ಎಂದರೆ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಬೇಕು. ಅಷ್ಟೇ ಅಲ್ಲ ಮಳೆಗಾಲದ ಅವಧಿಯಲ್ಲಿ ಮಲೆನಾಡಿನ ಹಲವೆಡೆ ವಿಶೇಷವಾಗಿ ಮಾಂಸದೂಟವನ್ನು ತಯಾರಿಸುತ್ತಾರೆ. ಅಲ್ಲದೇ ಮಳೆಗಾಲದಲ್ಲಿ ಹಣ್ಣಿನ ವೈನ್‌ಗಳನ್ನು ಸಹ ತಯಾರಿಸುವುದು ವಾಡಿಕೆ. ಅವೆಲ್ಲದರ ನಡುವೆ ಕರಿದ ಪದಾರ್ಥಗಳಾದ ಚಕ್ಕುಲಿ, ಹಲಸಿನ ಚಿಪ್ಸ್‌ಗಳು, ನಿಪ್ಪಟ್ಟು, ಸಬ್ಬಕ್ಕಿ ಸಂಡಿಗೆ ಅರಳು ಸಂಡಿಗೆ, ನುಚ್ಚಿನುಂಡೆ ಹೀಗೆ ತರತರಹ ತಿನಿಸುಗಳನ್ನು ಮಳೆಗಾಲಕ್ಕಾಗಿಯೇ ಸಿದ್ಧಪಡಿಸಲಾಗುತ್ತದೆ.
 
ಮಲೆನಾಡಿನಲ್ಲಿ ಮಳೆಗಾಲದ ಅವಧಿಯಲ್ಲಿ ಕಾಡಿನಲ್ಲಿ ಸಿಗುವ ಅಣಬೆಗಳಿಗೆ ಬಾರಿ ಬೇಡಿಕೆ ಇದ್ದು ಇದರಿಂದ ವಿವಿಧ ರೀತಿಯ ಅಡುಗೆಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲ ಸುವರ್ಣಗಡ್ಡೆ, ಬಿದಿರಿನ ಕಳಲೆಯಿಂದ ಮಾಡಿರುವ ಭಕ್ಷ್ಯಗಳು ಮತ್ತು ಕೆಸುವಿನ ದಂಟು ಮತ್ತು ಎಲೆಯಿಂದ ತಯಾರಿಸುವ ಆಹಾರವನ್ನು ಸವಿಯಲು ಮಳೆಗಾಲ ಒಂದು ಉತ್ತಮ ಸಮಯ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲ ಸಂಜೆ ಸಮಯಕ್ಕೆ ಎಂದೇ ಹಲವಾರು ರೀತಿಯ ಬಜ್ಜಿಗಳನ್ನು ತಯಾರಿಸುತ್ತಾರೆ ಇದು ಚಹಾದೊಂದಿಗೆ ಉತ್ತಮ ಕಾಂಬಿನೇಷನ್ ಎಂದೇ ಹೇಳಬಹುದು.
 
ಅದಲ್ಲದೇ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕಂಬಳ, ಕೆಸರುಗದ್ದೆ ಆಟ ಹೀಗೆ ಮೊದಲಾದ ದೇಸಿ ಆಟಗಳನ್ನು ಮಲೆನಾಡು ಮತ್ತು ಕರಾವಳಿ ಭಾಗದ ಹಳ್ಳಿ ಪ್ರದೇಶಗಳಲ್ಲಿ ನಾವು ಕಾಣಬಹುದು. ಈ ಅವಧಿಯಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ನೀರಿನ ಒರತೆಗಳು, ನದಿ ಮತ್ತು ಸಮುದ್ರದ ದಂಡೆಗಳಲ್ಲಿ ಕುಳಿತು ಗಾಳ ಹಾಕುವ ದೃಶ್ಯಗಳು, ಗದ್ದೆಗಳಲ್ಲಿ ಕಂಡುಬರುವ ಏಡಿ, ಗಿಡಗಳ ಮೇಲೆ ಅತ್ತಿಂದಿತ್ತ ಹಾರಾಡುವ ಪಾತರಗಿತ್ತಿಗಳು ನಿಮ್ಮನ್ನು ಬಾಲ್ಯದ ತೆಕ್ಕೆಗೆ ನೂಕುವುದರ ಜೊತೆಗೆ ಪ್ರೇಮಿಗಳಿಗೆ, ಛಾಯಾಗ್ರಾಹಕರಿಗೆ, ಕವಿಗಳಿಗೆ ಮಲೆನಾಡಿನ ಸುಂದರ ತಾಣಗಳು ನಿಮ್ಮ ನೆನಪಿನ ಬುತ್ತಿಯನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
 
ಇವೆಲ್ಲಾ ಹೇಳಿದ ಮೇಲೆ ಯಾವ ಪ್ರದೇಶಕ್ಕೆ ಹೋದರೆ ಸೂಕ್ತ ಎಂಬ ಕೂತುಹಲ ನಿಮಗೂ ಇರಬಹುದು ಅದಕ್ಕೆಂದೇ ಕೆಲವು ಪ್ರದೇಶಗಳು ನಿಮಗಾಗಿ - 
 
 
ಮಲೆನಾಡಿನ ಕಡೆಯಲ್ಲಿ ಪ್ರಯಾಣ ಬೆಳೆಸಬೇಕು ಎಂದಾದರೆ ಮಡಿಕೇರಿಯಲ್ಲಿ ಭಾಗಮಂಡಲ, ಮಂದಾಲ್‌ಪಟ್ಟಿ, ಪುಷ್ಪಗಿರಿ ಬೆಟ್ಟ, ಮಕ್ಕಳಗುಡಿ ಬೆಟ್ಟ, ಶಾಂತಳ್ಳಿ, ಕುಂದಳ್ಳಿ, ಕುಮಾರಳ್ಳಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀವು ಪ್ರಯಾಣಿಸುತ್ತೀರಿ ಎಂದಾದರೆ ಮುಳ್ಳಯ್ಯನಗಿರಿ, ಕುದುರೆಮುಖ, ಬಾಬಾ ಬುಡನ್‌ಗಿರಿ, ಕೆಮ್ಮಣ್ಣುಗುಂಡಿ, ಕೊಟ್ಟಿಗೆಹಾರ, ಶೃಂಗೇರಿ ಅರಣ್ಯ ಪ್ರದೇಶ, ಕಲ್ಲತ್ತಗಿರಿ, ಮೂಡಿಗೆರೆ ಉತ್ತಮವಾಗಿರುತ್ತದೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಪ್ರಯಾಣಿಸಬೇಕು ಎಂದು ಬಯಸಿದಲ್ಲಿ ಗೋಕರ್ಣ, ಯಾಣ, ಶಿರಸಿ, ಭಟ್ಕಳ, ಕೋಗಾರಘಟ್ಟ, ಕರಿಕಾನ ಪರಮೇಶ್ವರಿ, ದಾಂಡೇಲಿ, ಸಾತೊಡ್ಡಿ, ಜೇನುಕಲ್ಲು, ಮಾಗೋಡು, ಭಗವತಿ ಕಾಡುದೇವಿಮನೆ ಘಟ್ಟ ನೋಡುವ ಜೊತೆಗೆ ವಜ್ರಳ್ಳಿ ಜಲಪಾತ ಮತ್ತು ಮಲ್ಪೆ, ಕಾಪು, ಕೂಡ್ಲು ತೀರ್ಥ, ಬರ್ಕಣ, ಬೆಳ್ಕಲ್ ತೀರ್ಥ, ಅರಿಶಿನಗುಂಡಿ, ಜೋಮ್ಲು ತೀರ್ಥ, ಕೋಸಳ್ಳಿ ಜಲಪಾತಗಳು ಮಳೆಗಾಲದ ನಿಜ ಸೌಂದರ್ಯವನ್ನು ದರ್ಶನವನ್ನು ನೀವು ಪಡೆಯಬಹುದು. ಹಾಸನ ಜಿಲ್ಲೆಯಲ್ಲಿ ನೋಡುವುದಾದರೆ ಸಕಲೇಶಪುರವನ್ನು ಮರೆಯಲೇಬಾರದು. ರೊಟ್ಟಿಕಲ್ಲು, ಬೆಟ್ಟದಮನೆ, ಮರಗುಂದ, ಮಂಜರಾಬಾದ್ ಕೋಟೆ, ಕೆಂಪುಹೊಳೆ, ಜೇನುಕಲ್ಲು ಗುಡ್ಡ ಇವೆಲ್ಲವೂ ಇಲ್ಲಿನ ಅದ್ಭುತ ಪಾಕೃತಿಕ ಸೌಂದರ್ಯದ ರಸದೂಟವನ್ನು ನಿಮಗೆ ಊಣಬಡಿಸುತ್ತವೆ. ಅಷ್ಟೇ ಅಲ್ಲ ಜಲಪಾತದ ತವರೂರು ಎಂದೇ ಹೆಸರುವಾಸಿಯಾಗಿರುವ ಶಿವಮೊಗ್ಗದಲ್ಲಿ ಸಾಕಷ್ಟು ಪ್ರದೇಶಗಳಿದ್ದು ಆಗುಂಬೆ ಮತ್ತು ಜೋಗ ಪ್ರಮುಖ ಆಕರ್ಷಣೆ ಎಂದೇ ಹೇಳಬಹುದು ಅಲ್ಲದೇ ಇಲ್ಲಿನ ಸುತ್ತಮುತ್ತಲ ಕಾಡುಗಳು ಪ್ರವಾಸಿಗರನ್ನು ಮನಮೋಹಕಗೊಳಿಸುತ್ತವೆ ಅಷ್ಟೇ ಅಲ್ಲ ಗುಡವಿ ಪಕ್ಷಿಧಾಮ, ಕೆಳದಿ, ಸಕ್ಕರೆ ಬಯಲು ಆನೆ ಶಿಬಿರ, ಕವಲೆದುರ್ಗ, ಕೊಡಚಾದ್ರಿಗಳಲ್ಲಿ ಮಳೆಯ ಮಜವನ್ನು ಆನಂದಿಸಬಹುದು
 
ಒಟ್ಟಿನಲ್ಲಿ ಬಾನಲ್ಲಿ ನಡೆಯುವ ಸಡಗರವು ಮುತ್ತಾಗಿ ಸುರಿಯುವ ಸೋನೆ ಮಳೆಯನ್ನು ಆಸ್ವಾದಿಸಲು ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ಭೇಟಿ ನೀಡುವುದು ಅವಶ್ಯಕವೆಂದೇ ಹೇಳಬಹುದು. ನೀವೂ ಒಮ್ಮೆ ಭೇಟಿ ಕೊಡಿ ಮಳೆಯ ಮಂಜಿನ ಹನಿಗಳೊಂದಿಗಿನ ನಿಮ್ಮ ನೆನಪಿನ ಬುತ್ತಿಯನ್ನು ಕಟ್ಟಿಕೊಳ್ಳಿ.
 
ಕರ್ನಾಟಕದಲ್ಲಿರುವ ಈ ಗಿರಿಧಾಮ ಬಗ್ಗೆ ನಿಮಗೆಷ್ಟು ಗೊತ್ತು...!
 
ಸುತ್ತಲೂ ಹಸಿರು ತಣ್ಣಗೆ ಮೈಕೊರೆವ ಚಳಿ, ತಂಪಾದ ಗಾಳಿಯ ಜೊತೆಗೆ ಎತ್ತನೋಡಿದರತ್ತ ಮಂಜು ಅಲ್ಲಲ್ಲಿ ಕೂಗುವ ಹಕ್ಕಿಗಳ ಕೂಗು, ಆಗತಾನೇ ಉದಯಿಸೋ ಸೂರ್ಯ ಅದೆಲ್ಲೋ ಗೀಳಿಡುವ ಪ್ರಾಣಿಗಳ ಶಬ್ದ ಇವನ್ನೆಲ್ಲಾ ನೀವು ಅನುಭವಿಸಬೇಕು ಎಂದು ಬಯಸಿದರೆ, ಕರ್ನಾಟದಲ್ಲಿರುವ ಈ ಪ್ರದೇಶಕ್ಕೆ ನೀವು ಭೇಟಿ ನೀಡಲೇಬೇಕು. ಹೌದು ಪಕೃತಿಯ ಸೊಬಗು ಸವಿಯುತ್ತಾ ನಿಮ್ಮ ಪ್ರಯಾಣವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುವ ಉತ್ತಮ ಪ್ರವಾಸಿತಾಣ ಇದಾಗಿದ್ದು, ನೀವು ಒಂದು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇ ಆದಲ್ಲಿ ನೀವು ಆ ಪ್ರವಾಸದ ಆ ನೆನಪನ್ನು ಎಂದಿಗೂ ಮರೆಯಲಾರಿರಿ ಕುದುರೆಮುಖ.
 
ಈ ಪರ್ವತವು ಕುದುರೆಯ ಮುಖದ ಹಾಗೆ ಇರುವ ಕಾರಣ ಇದಕ್ಕೆ ಕುದುರೆಮುಖ ಎನ್ನುವ ಹೆಸರು ಬಂದಿದೆ. ಇದು ಪಶ್ಚಿಮ ಘಟ್ಟವಾಗಿದ್ದು ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿದೆ. ಇದು ಸಮುದ್ರ ಮಟ್ಟದಿಂದ 1894 ಮೀಟರ್ (6214 ಅಡಿ) ಎತ್ತರದಲ್ಲಿದ್ದು ಸುಂದರವಾದ ಪರ್ವತ ಶ್ರೇಣಿಯನ್ನು ಹೊಂದಿದೆ. ಈ ಸುಂದರ ಗಿರಿಧಾಮ ಚಿಕ್ಕಮಗಳೂರಿನಲ್ಲಿದ್ದು, ಈ ಪರ್ವತದ ಪಶ್ಚಿಮಕ್ಕೆ 95 ಕಿಮೀ. ದೂರದಲ್ಲಿ ಅರಬ್ಬಿ ಸಮುದ್ರವಿದೆ. ಅದನ್ನು ಬೆಟ್ಟದ ಮೇಲಿಂದ ಕಾಣಬಹುದು.
 
ಈ ಗಿರಿಧಾಮವು ಸೂತ್ತಲು ಹಸಿರಿನಿಂದ ಕೂಡಿದೆ. ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಅಲ್ಲಲ್ಲಿ ಸಿಗುವ ಕಿರಿದಾದ ದಾರಿಗಳಲ್ಲಿ ಸಾಗುವಾಗ ಕಂಡುಬರುವ ಚಿಕ್ಕ ಜರಿ, ತೊರೆಗಳು ಪ್ರವಾಸಿಗರಿಗೆ ಇನ್ನಷ್ಟು ಪ್ರಯಾಣದ ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ಸುತ್ತಲೂ ಕಾಣುವ ಹಸಿರು ಹುಲ್ಲು ಗಿಡಮರಗಳು, ಚಿಲಿಪಿಲಿ ಕೂಗುವ ಪಕ್ಷಿ ಸಂಕುಲ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಮಣ್ಣು ತುಂಬಾ ವಿಶೇಷವಾಗಿದ್ದು ಈ ಪ್ರದೇಶವು ಟ್ರೆಕ್ಕಿಂಗ್ ಮಾಡಲು ಉತ್ತಮವಾಗಿದೆ. ಈ ಪ್ರದೇಶದಲ್ಲಿ ಕಬ್ಬಿಣದ ಅದಿರು ಹೆಚ್ಚಿನ ಪ್ರಮಾಣದಲ್ಲಿದ್ದು ನೀವು ಕಬ್ಬಿಣ ಅದಿರಿನ ಕಾರ್ಖಾನೆಗಳನ್ನು ನೋಡಬಹುದು. ಇದು ಪ್ರೇಮಿಗಳಿಗೆ, ನವ ವಿವಾಹಿತರು ಹಾಯಾಗಿ ಸಮಯವನ್ನು ಕಳೆಯಲು ಉತ್ತಮ ಸ್ಥಳವಾಗಿದೆ.
 
ಕುದುರೆಮುಖದಲ್ಲಿ ನೋಡಲೇಬೇಕಾದ ಸ್ಥಳಗಳು 
 
ಕುದುರೆಮುಖ ಪರ್ವತಾರೋಹಿಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಬೆಟ್ಟದ ತುದಿಯನ್ನು ನೋಡದೇ ನಿಮ್ಮ ಪ್ರವಾಸ ಪೂರ್ಣಗೊಳ್ಳದು. ಇಲ್ಲಿಗೆ ಹೋಗಲು ಸಾಕಷ್ಟು ಟ್ರೆಕ್ಕಿಂಗ್ ದಾರಿಗಳಿದ್ದು, ಅದರ ಹೊರತಾಗಿ ಬೇರೆ ಪರ್ವತದ ತುದಿಗಳನ್ನು ತಲುಪಲು ಬೇರೆ ಬೇರೆ ದಾರಿಗಳಿವೆ. ಇಲ್ಲಿಗೆ ಪ್ರಯಾಣಿಸುವಾಗ ಅಗತ್ಯವಾದ ವಸ್ತುಗಳನ್ನು ಸುರಕ್ಷತೆಯ ಸಾಧನಗಳನ್ನು ತೆಗೆದುಕೊಂಡು ಹೋಗುವುದು ಸೂಕ್ತ. ಅಷ್ಟೇ ಅಲ್ಲ ಚಾರಣಿಗರಿಗೆ ಅನುಕೂಲವಾಗುವಂತೆ ಹಲವಾರು ತಂಗುದಾಣಗಳನ್ನು ಈ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು 'ಕೆರೆಕಟ್ಟೆ', ಹಾಗೂ 'ನವೂರ್ ಅರಣ್ಯದ ರೆಸ್ಟ್ ಹೌಸ್‌ಗಳು ಉತ್ತಮವಾಗಿವೆ.
 
ಕುದುರೆಮುಖ ನ್ಯಾಷನಲ್ ಪಾರ್ಕ್
 
ಕುದುರೆಮುಖದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಆಗಿರುವ ಕುದುರೆಮುಖ ನ್ಯಾಷನಲ್ ಪಾರ್ಕ್‌ ನೋಡಲು ಸುಂದರವಾಗಿದೆ. ಈ ಪ್ರದೇಶದಲ್ಲಿ ಸಾಂಬಾರ್, ಹುಲಿ ಬಾಲದ ಅಳಿಲು, ಹಂದಿ, ಹುಲಿ, ಸೀಳುನಾಯಿಗಳು ಮತ್ತು ಚಿರತೆಗಳು ಇವೆ. ಸಂಪೂರ್ಣ ನ್ಯಾಷನಲ್‌ ಪಾರ್ಕ್‌ ಅನ್ನು ತಿರುಗಾಡಲು ಪ್ರವಾಸಿಗರಿಗೆ ವಿಶೇಷ ಪರವಾನಗಿ ಅಗತ್ಯವಿರುತ್ತದೆ. ಈ ರಾಷ್ಟ್ರೀಯ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ಥಳೀಯ ಬಸ್‌ಗಳು, ಆಟೋಗಳ ಸೇವೆಗಳು ಲಭ್ಯವಿರುತ್ತದೆ. ಇದರ ಮೂಲಕ ನೀವು ಸುಲಭವಾಗಿ ಪಾರ್ಕ್ ಅನ್ನು ತಲುಪಬಹುದಾಗಿದೆ.
 
ಹನುಮಾನ್ ಗುಂಡಿ ಫಾಲ್ಸ್
 
ಭೋರ್ಗರೆವ ಈ ಜಲರಾಶಿಯನ್ನು ನೋಡುವುದೇ ಕಣ್ಣಿಗೆ ಆನಂದ ದೂರದಿಂದ ಈ ದೃಶ್ಯವನ್ನು ನೋಡುತ್ತಾ ಹತ್ತಿರ ಸಾಗಿದಂತೆಲ್ಲ ರೋಮಾಂಚನವಾಗುವುದು. 100 ಅಡಿ ಎತ್ತರದಿಂದ ಬಂಡೆಗಳಿಂದ ನಡುವೆ ಧುಮುಕುವ ಈ ಫಾಲ್ಸ್ ನೈಸರ್ಗಿಕವಾಗಿ ರಚಿತವಾಗಿದ್ದು ನೋಡುಗರನ್ನು ತನ್ನ ಸೌಂದರ್ಯ ರಾಶಿಯಿಂದಲೇ ಸೆರೆಹಿಡಿಯುತ್ತದೆ. 100 ಅಡಿ ಎತ್ತರದಿಂದ ಬೀಳುವ ನೀರು ಬಂಡೆಗಳಿಗೆ ಬಡಿಯುತ್ತಾ ಚದುರಿ ಮಂಜಿನ ಹನಿಗಳಾಗಿ ಹಾಲಿನಂತೆ ಧುಮುಕುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಮಲೆಗಾಲದಲ್ಲಿ ಅಬ್ಬರಿಸುವ ಈ ಫಾಲ್ಸ್ ಉಳಿದ ಸಮಯದಲ್ಲಿ ಮಂದವಾಗಿರುತ್ತದೆ. ಕಾಡಿನ ಸವಿಯನ್ನು ಸವಿದು ದಣಿವಾರಿಸಿಕೊಳ್ಳಲು ಈ ಹನುಮಾನ್ ಗುಂಡಿ ಫಾಲ್ಸ್ ಉತ್ತಮ ಸ್ಥಳವಾಗಿದೆ.
 
ಗಂಗಾಮೂಲಾ
 
ಪಶ್ಚಿಮಘಟ್ಟಕ್ಕೆ ಹೊಂದಿಕೊಂಡೇ ಇರುವ ಈ ಗಂಗಮೂಲ ಒಂದು ಚಾರಣ ಪ್ರದೇಶವಾಗಿದ್ದು ಸಮುದ್ರ ಮಟ್ಟಕ್ಕಿಂತ 1458 ಮೀಟರ್ ಎತ್ತರದಲ್ಲಿದೆ. ಈ ಪ್ರದೇಶ ಚಾರಣ ಮಾಡಲು ಉತ್ತವಾಗಿದ್ದು ಈ ಪ್ರದೇಶದಲ್ಲಿ ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳು ಉದ್ಭವಿಸುತ್ತವೆ. ಇದರ ಸುತ್ತಮುತ್ತಲೂ ದಟ್ಟ ಅರಣವಿದ್ದು, ಇಲ್ಲಿ ನೀವು ಚಾರಣಕ್ಕೆ ಹೋಗುವುದಾದರೆ ಅಗತ್ಯ ವಸ್ತುಗಳನ್ನು ಒಯ್ಯುವುದು ಸೂಕ್ತ. 
 
ಲಕ್ಯಾ ಡಾಮ್
 
ಶೃಂಗೇರಿಯಿಂದ 40 ಕಿಮೀ. ದೂರದಲ್ಲಿರುವ ಲಕ್ಯಾ ಡಾಮ್ ಕುದುರೆಮುಖದಿಂದ 2 ಕಿಮೀ. ದೂರದಲ್ಲಿದೆ. ಇದು ಭದ್ರ ನದಿಯ ಉಪನದಿಯಾದ ಲಕ್ಯಾ‌ಗೆ ಕಟ್ಟಿರುವ ಆಣೆಕಟ್ಟಾಗಿದ್ದು, ಈ ಡ್ಯಾಮ್ 100 ಮೀ ಎತ್ತರವಿದೆ. ಇದನ್ನು ಕುದುರೆಮುಖ ಐರನ್ ಓರೆ ಕಂಪನಿ ನಿರ್ಮಿಸಿದ್ದು ಗಣಿಗಾರಿಕೆ ಕಾರ್ಯಾಚರಣೆಗಳಿಂದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಣೆ ಮಾಡುವುದು ಈ ಅಣೆಕಟ್ಟಿನ ಪ್ರಮುಖ ಉದ್ದೇಶವಾಗಿತ್ತು. ಆದರೆ ಈ ಡ್ಯಾಮ್ ಅರಣ್ಯ ಪ್ರದೇಶದಲ್ಲಿರುವುದರಿಂದ 2005 ರಲ್ಲಿ ಅದಿರು ಕಂಪನಿಯನ್ನು ಮುಚ್ಚಲಾಯಿತು. ಈಗ ಇದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು ಸೋಮವಾರದಿಂದ ಶನಿವಾರ ಬೆಳಿಗ್ಗೆ 4.30 ರಿಂದ ಸಂಜೆ 6.30 ರವರೆಗೆ ಹಾಗೂ ರವಿವಾರದಂದು ಬೆಳಿಗ್ಗೆ 9.30 ರಿಂದ ಸಂಜೆ 6.30ರ ವರೆಗೆ ಭೇಟಿ ನೀಡಬಹುದಾಗಿದೆ.
 
ಜನತಾ ಮಾರ್ಕೆಟ್
ಕುದುರೆಮುಖ ಎಂಬ ಸುಂದರ ಪಟ್ಟಣದ ಮಾರುಕಟ್ಟೆ ಪ್ರದೇಶ ಇದಾಗಿದ್ದು, ಕುದುರೆಮುಖದಲ್ಲಿ ಬೆಳೆಯುವ ಮತ್ತು ಅಲ್ಲಿ ಲಭ್ಯವಿರುವ ವಸ್ತುಗಳನ್ನು ಖರೀದಿಸಲು ಇದು ಉತ್ತಮ ಸ್ಥಳವಾಗಿದೆ. ಈ ಸ್ಥಳವನ್ನು ಮೊದಲು ಭದ್ರಾ ಮಾರುಕಟ್ಟೆ ಎಂದು ಕರೆಯುತ್ತಿದ್ದು ಇಂದು ಅದು ಜನತಾ ಮಾರ್ಕೆಟ್ ಆಗಿದೆ.
 
ಹೊರನಾಡು
 
ಪಶ್ಚಿಮಘಟ್ಟದ ಭದ್ರಾ ನದಿಯ ಸಾಲಲ್ಲಿ ಈ ಪೂಣ್ಯ ಕ್ಷೇತ್ರವಿದ್ದು ನೋಡಲು ನಯನಮನೋಹರವಾಗಿದೆ. ಕುದುರೆಮುಖದಿಂದ ಸುಮಾರು 29 ಕಿಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ದೇವಸ್ಥಾನವು ಪ್ರಮುಖ ಆಕರ್ಷಣೆಯಾಗಿದೆ. ಇದು ಪುರಾತನವಾದ ದೇವಸ್ಥಾನವಾಗಿದ್ದು ಸುಂದರವಾದ ಪ್ರಾಂಗಣವನ್ನು ಹೊಂದಿದೆ. ಈ ದೇವಾಲಯವು ನೋಡಲು ತುಂಬಾ ಸುಂದರವಾಗಿದ್ದು, ದೇವಿ ಅನ್ನಪೂರ್ಣೇಶ್ವರಿಯು ಶ್ರೀಚಕ್ರ, ಚಕ್ರ, ಶಂಖ ಮತ್ತು ದೇವಿ ಗಾಯತ್ರಿಯನ್ನು ತನ್ನ ನಾಲ್ಕು ಹಸ್ತಗಳಲ್ಲಿ ಹಿಡಿದಿರುವ ಸುಂದರ ಬಂಗಾರದ ಮೂರ್ತಿಯನ್ನು ನೀವು ಇಲ್ಲಿ ಕಾಣಬಹುದಾಗಿದೆ. ಹಲವು ಶತಮಾನಗಳ ಹಿಂದೆ ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಈ ದೇವಾಲಯದಲ್ಲಿ ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ಇಲ್ಲಿ ಅನ್ನ ಸಂತರ್ಪಣೆಯು ಇದ್ದು ಹೊರನಾಡಿಗೆ ಹೋಗದೇ ಕುದುರೆಮುಖ ಪ್ರವಾಸ ಪೂರ್ತಿಯಾಗದು.
 
ಸಾಗಲು ದಾರಿ
ಕುದುರೆಮುಖ ಬೆಂಗಳೂರಿನಿಂದ 332.8 ಕಿಮೀ ದೂರದಲ್ಲಿದ್ದು ಸುಮಾರು 7 ಗಂಟೆ ಪ್ರಯಾಣವಾಗಿದೆ. ಚಿಕ್ಕಮಗಳೂರಿನಿಂದ ಹೋಗುವುದಾದರೆ ಕುದುರೆಮುಖವು 107 ಕಿಮೀ ದೂರದಲ್ಲಿದ್ದು, ಇಲ್ಲಿಂದ ಸಾಕಷ್ಟು ಬಸ್‌ ವ್ಯವಸ್ಥೆ ಲಭ್ಯವಿದೆ. ಅಲ್ಲದೇ ಕುದುರೆಮುಖದಿಂದ ಹತ್ತಿರದ ಪ್ರವಾಸಿ ಸ್ಥಳಗಳಿಗೆ ಹೋಗಲು ಸ್ಥಳೀಯ ಜೀಪುಗಳು ಬಾಡಿಗೆಗೆ ಲಭ್ಯವಿದೆ.
 
ಒಟ್ಟಿನಲ್ಲಿ ನಿಮ್ಮ ಸಂಗಾತಿಯೊಡನೆ, ಸ್ಮೇಹಿತರೊಡನೆ ಅಥವಾ ಕುಟುಂಬದವರೊಡನೆ ನೀವು ಪ್ರವಾಸ ಮಾಡಲು ಬಯಸಿದಲ್ಲಿ ಇದು ಉತ್ತಮ ಸ್ಥಳವಾಗಿದ್ದು, ವೈಲ್ಡ್‌‌ಲೈಫ್ ಫೋಟೋಗ್ರಾಫಿ ಪ್ರಿಯರು ಮತ್ತು ಚಾರಣ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ.
 
ಕರ್ನಾಟಕದಲ್ಲಿದೆ ಚಿಕ್ಕ ತಿರುಮಲ ನಿಮಗೆ ಗೊತ್ತೇ...!
 
ಪಶ್ಚಿಮಘಟ್ಟಗಳಿಗೆ ಹೊಂದಿಕೊಂಡಿರುವ ಕರಾವಳಿ ಪ್ರದೇಶವು ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕತೆಗಳ ನೆಲಗಟ್ಟುಗಳ ಮೇಲೆ ನಿಂತಿದೆ. ಇಲ್ಲಿ ಎಲ್ಲವೂ ಇದೆ ಸುತ್ತಲೂ ಹಸಿರಿನಿಂದ ಕಂಗೊಳಿಸೋ ಮಲೆನಾಡು ಅದರಲ್ಲಿ ಕಾಣ ಸಿಗೋ ಜಲಪಾತಗಳು, ಪಶ್ಚಿಮಕ್ಕೆ ಹಾಸಿರೋ ಅರಬ್ಬೀ ಒಟ್ಟಾಗಿ ಪ್ರಕೃತಿಯ ಮಡಿಲಿನ ಸ್ವರ್ಗ ಅಂತಲೇ ಕರೆಯುವುದಾದರೆ ಅದು ಉತ್ತರ ಕನ್ನಡ ಜಿಲ್ಲೆ ಮಾತ್ರ.
 
 
ಉತ್ತರ ಕನ್ನಡ ಜಿಲ್ಲೆಯನ್ನು ಕರ್ನಾಟಕದ ಕಾಶ್ಮೀರ ಅಂತಾ ಕರೆಯುವುದರೊಂದಿಗೆ ಈ ಜಿಲ್ಲೆಯಲ್ಲಿರುವ ಗೋಕರ್ಣ ಕ್ಷೇತ್ರವನ್ನು ದಕ್ಷಿಣ ಕಾಶಿ ಅಂತಲು ಕರೆಯುತ್ತಾರೆ. ಅಲ್ಲದೇ ಇದೇ ಜಿಲ್ಲೆಯಲ್ಲಿನ ಮಂಜುಗುಣಿ ಕ್ಷೇತ್ರವನ್ನು ಚಿಕ್ಕ ತಿರುಪತಿ ಎಂತಲು ಕರೆಯುತ್ತಾರೆ. ಅದು ಹೇಗಿದೆ ಅದರ ವಿಶೇಷತೆಗಳೇನು ಎಂಬಿತ್ಯಾದಿ ಮಾಹಿತಿಗಳು ನಿಮಗಾಗಿ.
 
ಉತ್ತರ ಕನ್ನಡ ಜಿಲ್ಲೆ ಹಲವಾರು ಪುಣ್ಯಕ್ಷೇತ್ರಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿದ್ದು, ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಇಲ್ಲಿ ಪ್ರಾಚೀನ ಐತಿಹಾಸಿಕ ಪ್ರಸಿದ್ಧ ಕ್ಷೇತ್ರಗಳಿದ್ದು, ಪುರಾಣ ಪ್ರಸಿದ್ಧ ತಾಣಗಳನ್ನು ಸಹ ನಾವು ಈ ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಈ ಕ್ಷೇತ್ರವು ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮಂಜಗುಣಿ ಎಂಬ ಗ್ರಾಮದಲ್ಲಿದ್ದು ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿದೆ.
 
ಚಾರಣ ಪ್ರಿಯರು ಇಲ್ಲಿ ಭೇಟಿ ನೀಡಲೇಬೇಕು...!
 
ನೀವು ಚಾರಣ ಪ್ರಿಯರೇ ನಿಮಗೆ ಕಾಡು ಮೇಡು ಅಲೆದು ಜರಿತೊರೆಗಳಲ್ಲಿ ಮಿಂದೆದ್ದು ಗಿರಿಶಿಖರಗಳನ್ನು ಹತ್ತುವ ಹವ್ಯಾಸ ನಿಮಗಿದೆಯೇ ಹಾಗಾದರೆ ಈ ಸ್ಥಳ ನಿಮ್ಮೆಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಲು ಉತ್ತಮವಾಗಿದೆ. ಅಂದು ಎಲ್ಲಿದೆ ಹೇಗಿದೆ ಅನ್ನೋ ಸಂಕ್ಷಿಪ್ತ ವಿವರ ನಿಮಗಾಗಿ.
 
ಕುಮಾರ ಪರ್ವತ ನೆಟ್ಟಿಗರು ಈ ಸ್ಥಳವನ್ನು ಹೆಚ್ಚಾಗಿ ಕೇ.ಪಿ ಅಂತಾ ಕರೆಯುತ್ತಾರೆ. ಇದು ಚಾರಣ ಮಾಡಲು ಉತ್ತಮ ಸ್ಥಳವಾಗಿದ್ದು ಲಕ್ಷಾಂತರ ಜನರು ಇಲ್ಲಿಗೆ ಚಾರಣಕ್ಕಾಗಿ ಬರುತ್ತಾರೆ. ಕುಮಾರ ಪರ್ವತವು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿಯಲ್ಲಿ ಬರುವ ಪ್ರದೇಶವಾಗಿದ್ದು ಚಾರಣಕ್ಕೆ ಬರುವವರು ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ದರ್ಶನವನ್ನು ಸಹ ಮಾಡಬಹುದು.
 
ಇದು ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಪ್ರದೇಶವಾಗಿದ್ದು ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಶಿಖರಕ್ಕೆ ಒಮ್ಮೆ ನೀವು ಚಾರಣ ಹೋದಲ್ಲಿ ಮತ್ತೆ ಮತ್ತೆ ಹೋಗಬೇಕು ಎಂದೆನಿಸುವ ಅದ್ಭುತ ತಾಣ ಎಂದೇ ಹೇಳಬಹುದು. ಈ ಪರ್ವತವು ಸಮುದ್ರ ಮಟ್ಟದಿಂದ 1712 ಮೀಟರ್‌ಎತ್ತರದಲ್ಲಿದ್ದು ಮುಗಿಲೆತ್ತರದಲ್ಲಿನ ಆನಂದವನ್ನು ಕಣ್ತುಂಬಿಕೊಳ್ಳಲು ಇದು ಪ್ರದೇಶವು ಉತ್ತವಾಗಿದೆ. ಈ ಶಿಖರಕ್ಕೆ ಚಾರಣ ಮಾಡಲು ಸುಮಾರು 13 ಕಿಮೀ. ನಡೆಯಬೇಕಾಗುತ್ತದೆ. ಕುಕ್ಕೆ ಸುಬ್ರಮಣ್ಯದ ಕಡೆಯಿಂದ ನೀವು ಪ್ರಯಾಣ ಬೆಳೆಸಿದರೆ ಸುಮಾರು 4 ರಿಂದ 5 ಕಿಮೀ ಗಳಷ್ಟು ದಟ್ಟವಾದ ಅರಣ್ಯದಲ್ಲಿ ನೆಡೆಯಬೇಕಾಗುತ್ತದೆ. ಇದು ಸ್ವಲ್ಪ ಕಷ್ಟಕರವಾಗಿದ್ದರು ಚಾರಣಿಕರಿಗೆ ಈ ಪ್ರಯಾಣ ಹೊಸ ರೀತಿಯ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲವಾದಲ್ಲಿ ಸೋಮವಾರ ಪೇಟೆಯಿಂದ ಈ ಪ್ರದೇಶಕ್ಕೆ ನೀವು ಹೋಗಲು ಬಯಸಿದರೆ 20 ಕಿಮೀ ಕ್ರಮಿಸಿ ಅಲ್ಲಿಂದ 10 ಕಿಮೀ ನೆಡೆಯಬೇಕಾಗುತ್ತದೆ. ಇದು ಕೂಡಾ ಉತ್ತಮವಾದ ದಾರಿಯಾಗಿದ್ದು ಚಾರಣದ ಅನುಭವವನ್ನು ಪಡೆಯಲು ಒಂದು ಸಲ ನೀವು ಭೇಟಿ ನೀಡಲೇಬೇಕು.
 
ನೀವು ಚಾರಣಕ್ಕೆ ಹೊರಡುವಾಗ ನಿಮಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ನೀವು ಸುಬ್ರಮಣ್ಯ ಹತ್ತಿರವಿರುವ ದಾರಿಯಿಂದ ಚಾರಣಕ್ಕೆ ಹೊರಟರೆ, ಸ್ವಲ್ಪ ದೂರದಲ್ಲಿ ನೆಡೆದರೆ ಮೊದಲಿಗೆ ನಿಮಗೆ ಸಿಗುವುದು ಭೀಮನಕಲ್ಲು ಹಾಗೆಯೇ ಮುಂದಕ್ಕೆ ಸಾಗಿದರೆ ನಿಮಗೆ ಗಿರಿಗದ್ದೆ ಭಟ್ಟರ ಮನೆಯೊಂದು ಸಿಗುತ್ತದೆ. ಈ ಬೆಟ್ಟದಲ್ಲಿ ಇರುವ ಏಕೈಕ ಮನೆ ಎಂದರೆ ಇದೊಂದೇ. ನೀವು ಊಟದ ವ್ಯವಸ್ಥೆಗೆ ಹಾಗೂ ತಂಗಲು ಇದು ಸುಕ್ತವಾದ ಜಾಗವಾಗಿದದ್ದು ಮೊದಲೇ ಅವರಿಗೆ ತಿಳಿಸಿರಬೇಕಾಗುತ್ತದೆ. ಇಲ್ಲವಾದಲ್ಲಿ, ನೀವು ಅರಣ್ಯ ಇಲಾಖೆಯ ಕಚೇರಿಯಲ್ಲಿ ಅಥವಾ ಹತ್ತಿರದ ಮಂಟಪದಲ್ಲಿ ಕ್ಯಾಂಪ್ ಮಾಡಬಹುದು.
 
ಆಗುಂಬೆಯ ಪ್ರೇಮಸಂಜೆಯ....!!
 
 
ಆಗುಂಬೆ ಎನ್ನೋ ಹೆಸರು ಕೇಳಿದೊಡನೆ ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೆ, ಓ ಗೆಳತಿಯೇ ಎನ್ನೋ ಈ ಹಾಡು ಒಮ್ಮೆಲೇ ನಮಗೆ ನೆನಪಿಗೆ ಬರುತ್ತದೆ. ಹೌದು ಆಗುಂಬೆಯಾ ಸೌಂದರ್ಯ ರಾಶಿಯ ವರ್ಣನೆಯನ್ನು ನೀವು ಈ ಹಾಡಿನಲ್ಲಿ ಕಾಣಬಹುದು. ಕೇಳುವುದಕ್ಕೆ ಈ ಹಾಡು ಇಷ್ಟು ಸೊಗಸಾಗಿರುವಾಗ ಆಗುಂಬೆ ಇನ್ನೂ ನೋಡುವುದಕ್ಕೆ ಹೇಗಿರಬಹುದು ಎನ್ನೋ ಕೂತುಹಲ ಎಲ್ಲರಿಗೂ ಇರುವಂತದ್ದೇ,
 
ನೀವು ಸಹ ಆಗುಂಬೆಗೆ ಹೋಗಬೇಕು, ಅಲ್ಲಿನ ಸೌಂದರ್ಯ ರಾಶಿಯನ್ನು ಕಣ್ತುಂಬಿಕೊಳ್ಳಬೇಕು ಎಂದು ನೀವು ಬಯಸಿದ್ದರೆ ಈ ವರದಿ ನಿಮಗೆ ಸಹಾಯಕವಾಗಬಹುದು.
 
ಪಶ್ಚಿಮ ಘಟ್ಟಗಳ ನಡುವೆ ತನ್ನ ಸೌಂದರ್ಯ ರಾಶಿಯಿಂದಲೇ ಮನಸೆಳೆಯುವ ಆಗುಂಬೆ ರಜೆಯನ್ನು ಕಳೆಯಲು ಉತ್ತಮ ಸ್ಥಳವೆಂದೇ ಹೇಳಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿರುವ ಜಲಪಾತಗಳು ಸಹ ಆಗುಂಬೆಗೆ ಮೆರಗು ನೀಡಿದ್ದು, ಪ್ರವಾಸಿಗರ ಸ್ವರ್ಗ ಎಂದರು ತಪ್ಪಾಗಲಾರದು.
 
ಆಗುಂಬೆಯು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಒಂದು ಊರಾಗಿದ್ದು, ಪಶ್ಚಿಮ ಘಟ್ಟಪ್ರದೇಶದಲ್ಲಿದೆ. ಇಲ್ಲಿರುವ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಈ ಪ್ರದೇಶವು ವರ್ಷದ ಅರ್ಧಕ್ಕೂ ಹೆಚ್ಚು ಭಾಗ ಮಳೆಯಿಂದ ಕೂಡಿದ್ದು, ಇಲ್ಲಿ ಫೆಬ್ರುವರಿ ನಂತರದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆ ಆಗುತ್ತದೆ. ಆಗುಂಬೆಯಲ್ಲಿ ವರ್ಷಕ್ಕೆ ಸುಮಾರು 7,620 ಮಿಮೀ. ಮಳೆಯಾಗುವುದರಿಂದ ಇದನ್ನು ದಕ್ಷಿಣದ ಚಿರಾಪುಂಜಿ ಎಂದು ಸಹ ಕರೆಯುತ್ತಾರೆ. ಈ ಪ್ರದೇಶದಲ್ಲಿ ಸೂರ್ಯಾಸ್ತವು ಪ್ರಮುಖ ಆಕರ್ಷಣೆಯಾಗಿದ್ದು ಇದನ್ನು ನೋಡಲೆಂದೇ ಇಲ್ಲಿಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆಗುಂಬೆಯು ಸಮುದ್ರ ಮಟ್ಟದಿಂದ 2,314 ಮೀ ಎತ್ತರವಿದ್ದು ನೋಡಲು ರಮಣೀಯವಾಗಿದೆ. ಅಲ್ಲದೇ ಇಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಂಡುಬರುತ್ತವೆ. ಹೆಸರುವಾಸಿ ಉರಗತಜ್ಞರಾದ ರೊಮುಲುಸ್ ವಿಟೆಕರ್ ಮೊದಲ ಬಾರಿಗೆ ಕಾಳಿಂಗ ಸರ್ಪವನ್ನು ನೋಡಿದ್ದು ಇದೇ ಪ್ರದೇಶದಲ್ಲಂತೆ, ಅಲ್ಲದೇ ಅವರು ಆಗುಂಬೆಯನ್ನು "ಕಾಳಿಂಗ ಸರ್ಪಗಳ ರಾಜಧಾನಿ" ಎಂದು ಕರೆದಿದ್ದಾರೆ.
 
ಬೆಂಗಳೂರಿನ ಹತ್ತಿರವಿರುವ ಪಿಕ್‌ನಿಕ್ ತಾಣಗಳು...!
 
ಬೆಂಗಳೂರು ವಾಸಿಗಳಿಗೆ ವಿಕೆಂಡು ಬಂತು ಎಂದರೆ ಸಾಕು ಏನೋ ಒಂದು ತರಹದ ಖುಷಿ. ವೀಕೆಂಡುಗಳಲ್ಲಿ ಸ್ನೇಹಿತರೊಟ್ಟಿಗೋ ಇಲ್ಲವೇ ಕುಟುಂಬದವರೊಂದಿಗೆ ಸಿಕ್ಕ ಅಲ್ಪ ಅವಧಿಯಲ್ಲೇ ಎಲ್ಲಿಯಾದರೂ ಸುತ್ತಾಡಿಕೊಂಡು ದಿನನಿತ್ಯದ ಜಂಜಾಟದಿಂದ ಕೊಂಚ ಮಟ್ಟಿಗೆ ರಿಲೆಕ್ಸ್ ಹೊಂದಬೇಕು ಎನ್ನುವುದು ಎಲ್ಲರ ಆಸೆ ಕೂಡಾ,
 
ಆದರೆ ಅವರಿಗಿರುವ ಕಡಿಮೆ ಅವಧಿಯಲ್ಲಿ ಅದು ಸಾಧ್ಯವಾಗುವುದಿಲ್ಲ. ಬೆಂಗಳೂರಿನ ಸಮೀಪವೇ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂದು ನೀವು ಬಯಸಿರಬಹುದು, ಆದರೆ ಸಮಯದ ಅಭಾವದ ಕಾರಣ ಎಲ್ಲಿ ಹೋಗಬಹುದು ಎನ್ನೋ ಯೋಚನೆಯಲ್ಲಿ ನೀವಿದ್ರೆ, ಈ ವರದಿ ನಿಮಗೆ ಉಪಯೋಗವಾಗಬಹುದು. ನೀವು ಈ ಪ್ರದೇಶಗಳನ್ನು ಕೇವಲ 2 ರಿಂದ 3 ಗಂಟೆಗಳಲ್ಲಿ ಪ್ರಯಾಣಿಸಬಹುದುದಾಗಿದೆ.
 
ಸಾವನದುರ್ಗ ಬೆಟ್ಟ
 
ಬೆಂಗಳೂರಿನಿಂದ ಸುಮಾರು 33 ಕಿಮೀ. ದೂರ ಸಾಗಿದರೆ ಸಿಗುವುದೇ ಸಾವನದುರ್ಗ. ಈ ಪ್ರದೇಶಕ್ಕೆ ಮಾಗಡಿ ರಸ್ತೆಯ ಮೂಲಕವು ಸಾಗಬಹುದಾಗಿದೆ. ಈ ಪ್ರದೇಶವು ಟ್ರಕ್ಕಿಂಗ್ ತಾಣವಾಗಿದ್ದು, ಸಾವನದುರ್ಗ ಬೆಟ್ಟವು ಪ್ರಪಂಚದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ 1226 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಈ ಬೆಟ್ಟವನ್ನು ಕರಿಗುಡ್ಡ ಅಂತಲು ಕರಿಯುತ್ತಾರೆ. ಈ ಬೆಟ್ಟದ ಬುಡದಲ್ಲಿ ಸಾವಂಡಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನವಿದ್ದು, ಪ್ರಸಿದ್ಧವಾಗಿದೆ. ವಾರಾಂತ್ಯದಲ್ಲಿ ಈ ಸ್ಥಳಕ್ಕೆ ಸಾಕಷ್ಟು ಜನರು ಸಹ ಬರುತ್ತಾರೆ. ಇದು ಟ್ರಕ್ಕಿಂಗ್ ಪ್ರಿಯರಿಗೆ ಉತ್ತಮ ತಾಣವಾಗಿದ್ದು, ಬೆಟ್ಟದ ಮೇಲಿಂದ ನಿಂತು ನೋಡಿದರೆ ಬೆಟ್ಟದ ಸುತ್ತಮುತ್ತಲಿನ ಕಾಡಿನ ಸುಂದರ ದೃಶ್ಯವನ್ನು ಸವಿಯಬಹುದು. ಇದು ಫೋಟೋಗ್ರಾಫಿಗೂ ಸಹ ಉತ್ತಮ ಸ್ಥಳವಾಗಿದೆ.
 
ದೊಡ್ಡ ಆಲದ ಮರ 
 
ಬೆಂಗಳೂರಿನಿಂದ ಸುಮಾರು 25 ಕಿಮೀ. ದೂರದಲ್ಲಿರುವ ಈ ಪ್ರದೇಶವನ್ನು ದೊಡ್ಡ ಆಲದ ಮರ ಎಂದು ಕರೆಯುತ್ತಾರೆ. ಇದು ಒಂದು ದಿನದ ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ತಾಣವಾಗಿದ್ದು, ನೀವು ಈ ಪ್ರದೇಶದಲ್ಲಿ ಸುಮಾರು 400 ವರ್ಷಕ್ಕಿಂತಲು ಹಳೆಯದಾದ ಮರಗಳನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿನ ತಂಪಾದ ಗಾಳಿ ಮತ್ತು ಆಹ್ಲಾದಕರ ವಾತಾವರಣ ನೋಡುಗರಿಗೆ ನೆಮ್ಮದಿಯನ್ನು ನೀಡುತ್ತದೆ. ಈ ಸ್ಥಳಕ್ಕೆ ನೀವು ಭೇಟಿ ನೀಡಬೇಕು ಎಂದೆನಿಸಿದರೆ ಅಕ್ಟೋಬರ್‌ನಿಂದ ಮಾರ್ಚ್ ಉತ್ತಮ ಸಮಯವಾಗಲಿದೆ.
 
ಚಿಕ್ಕಬಳ್ಳಾಪುರ
 
ಬೆಂಗಳೂರಿನಿಂದ ಸುಮಾರು 58 ಕಿಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಐತಿಹಾಸಿಕ ಮತ್ತು ಮಾನವ ನಿರ್ಮಿತ ಅನೇಕ ಪ್ರೇಕ್ಷಣೀಯ ಸ್ಥಳಗಳು ಹೊಂದಿದೆ. ಈ ಪ್ರದೇಶದಲ್ಲಿ ಹಲವಾರು ಐತಿಹಾಸಿಕ ದೇವಸ್ಥಾನಗಳಿದ್ದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೇ ಚಿಕ್ಕಬಳ್ಳಾಪುರ ಪಟ್ಟಣದಿಂದ ಸುಮಾರು 12 ಕಿ.ಮೀ. ದೂರದಲ್ಲಿ ವಿವೇಕಾನಂದ ಜಲಪಾತವಿದ್ದು ಮಳೆಗಾಲದಲ್ಲಿ ಅದರ ಅಂದವನ್ನು ನೋಡಲು ಜನರು ಮುಗಿಬಿಳುತ್ತಾರೆ. ವಿಜಯನಗರ ಕಾಲದ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿರುವ ವಿಷ್ಣು ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಕಪ್ಪು ಕಲ್ಲಿನಲ್ಲಿ ವಿಶೇಷ ಚಿತ್ರಗಳೊಂದಿಗೆ ಕೆತ್ತಲ್ಪಟ್ಟ ಈ ದೇವಸ್ಥಾನವು ವಿಶೇಷವಾಗಿದೆ. ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವ ಮುದ್ದೇನಹಳ್ಳಿಯು ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳವಾಗಿದ್ದು ಇಲ್ಲಿ ವಿಶ್ವೇಶ್ವರಯ್ಯನವರು ವಾಸಿಸುತ್ತಿದ್ದ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಅಲ್ಲದೇ ಚಿತ್ರಾವತಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ, ಎಲ್ಲೋಡೆ ಶ್ರೀ ಲಕ್ಷ್ಮೀ ಆದಿನಾರಾಯಣ ದೇವಸ್ಥಾನ ಮತ್ತು ಕಂದಾವರ ಕೆರೆ ಇಲ್ಲಿನ ಪ್ರಮುಖ ಆಕರ್ಷಣೆ ಆಗಿದೆ.
 
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
 
ಬೆಂಗಳೂರಿನಿಂದ ಸುಮಾರು 36 ಕಿಮೀ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ನೋಡಲು ತುಂಬಾ ಆಕರ್ಷಣಿಯವಾಗಿದ್ದು ವನ್ಯಜೀವಿಗಳ ವೈವಿಧ್ಯತೆಯನ್ನು ನೀವಿಲ್ಲಿ ಆನಂದಿಸಬಹುದು. ಫೋಟೋಗ್ರಾಫಿ ಮಾಡುವವರಿಗೆ ಈ ಸ್ಥಳವು ಉತ್ತಮವಾಗಿದ್ದು ಹೈಕಿಂಗ್, ಟ್ರೆಕ್ಕಿಂಗ್ ಅನ್ನು ಸಹ ನೀವು ಇಲ್ಲಿ ಮಾಡಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿ ಸಫಾರಿ ಡ್ರೈವ್‌ಗೆ ಹೋಗುವ ಮೂಲಕ ಕಾಡಿನ ಪ್ರಾಣಿಗಳನ್ನು ಹತ್ತಿರದಿಂದ ನೀವು ನೋಡಬಹುದಾಗಿದೆ. ಅಲ್ಲದೇ ಇಲ್ಲಿ ಪ್ರಾಣಿ ಸಂಗ್ರಹಾಲಯವಿದ್ದು ವೈವಿಧ್ಯಮಯ ಪ್ರಾಣಿಸಂಕುಲಗಳನ್ನು ನೀವು ಇಲ್ಲಿ ವೀಕ್ಷಿಸಬಹುದಾಗಿದೆ.
 
ನಂದಿ ಬೆಟ್ಟ
 
ಬೆಂಗಳೂರಿನಿಂದ ಸುಮಾರು 62 ಕಿಮೀ. ದೂರದಲ್ಲಿರುವ ನಂದಿ ಬೆಟ್ಟ ಪ್ರೇಮಿಗಳ ಪಾಲಿನ ಸ್ವರ್ಗವೆಂದೇ ಹೇಳಬಹುದು. ಈ ಪ್ರದೇಶಕ್ಕೆ ಮುಂಜಾನೆ 6 ಗಂಟೆಯಲ್ಲಿ ಬೀಳುವ ಇಬ್ಬನಿ ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತದೆ. ನಂದಿಬೆಟ್ಟ ಸಮುದ್ರಮಟ್ಟದಿಂದ 4851 ಅಡಿ (1478 ಮೀ) ಎತ್ತರದಲ್ಲಿದ್ದು ಮುಂಜಾನೆಯಲ್ಲಿ ಮೋಡಗಳು ನಿಮ್ಮ ಪಕ್ಕದಲ್ಲಿಯೇ ಚಲಿಸುವುದನ್ನು ನೀವು ಇಲ್ಲಿ ನೋಡಬಹುದಾಗಿದೆ. ಇಲ್ಲಿ ಸೂರ್ಯೋದಯ ಮತ್ತು ಸುರ್ಯಾಸ್ತಮಾನವನ್ನು ನೀವು ಇತರ ಸ್ಥಳಗಳಿಗಿಂತ ಭಿನ್ನವಾಗಿ ಕಾಣಬಹುದಾಗಿದೆ. ಇಲ್ಲಿ ಊಟೋಪಚಾರಕ್ಕೆ ಎಲ್ಲಾ ರೀತಿಯ ವ್ಯವಸ್ಥೆಯಿದ್ದು ಪುರಾತನ ದೇವಸ್ಥಾನಗಳನ್ನು ನೀವು ಕಾಣಬಹುದಾಗಿದೆ.
 
ನೇತ್ರಾಣಿ ಇದೀಗ ಸ್ಕೂಬಾ ಡೈವಿಂಗ್ ತಾಣ...!
 
 
ಸಮುದ್ರ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ ಕಡಲ ದಡದಲ್ಲಿ ಅಲೆಯ ಶಬ್ದವನ್ನು ಆಲಿಸಿ ನಡೆಯುವುದೇ ಒಂದು ಸಂಭ್ರಮ. ಅಬ್ಬರಿಸಿ ಬರುವ ಅಲೆಯೊಂದಿಗೆ ಆಟವಾಡುತ್ತ ಮುಸ್ಸಂಜೆಯ ಸಮಯವನ್ನು ಕಳೆಯುವುದು ಎಲ್ಲರಿಗೂ ಇಷ್ಟವೇ. ಅದನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಸಮುದ್ರವನ್ನು ನೋಡಲು ಬರುತ್ತಾರೆ. 
 
ದಡದಿ ನಿಂತು ನೋಡುವ ಪ್ರತಿಯೊಬ್ಬರೂ ಸಮುದ್ರದ ವಿಹಂಗಮ ನೋಟಕ್ಕೆ ಬೆರಗಾಗುವವರೇ, ಅಲ್ಲದೇ ಸಮುದ್ರದ ಆಳದಲ್ಲಿ ಏನಿರಬಹುದು ಎಂಬ ಕುತುಹಲ ಎಲ್ಲರಿಗೂ ಇರುವುದು ಸಾಮಾನ್ಯ. ಅದನ್ನು ಒಮ್ಮೆಯಾದರೂ ನೋಡಬೇಕು ಎನ್ನುವವರ ಸಂಖ್ಯೆಯೇನು ಇಂದು ಕಮ್ಮಿ ಇಲ್ಲ. ನಿಮಗೂ ಕಡಲ ತಳದಿ ಹೊಕ್ಕು ಅಲ್ಲಿನ ವಿಸ್ಮಯವನ್ನು ನೋಡಬೇಕು ಅನಿಸಿದರೆ ಈ ವರದಿ ನಿಮಗೆ ಉಪಯೋಗವಾಗಬಹುದು.
 
ಸ್ಕೂಬಾ ಡೈವಿಂಗ್ ಇದು ಸಮುದ್ರದಾಳಕ್ಕೆ ಆಕ್ಸಿಜನ್ ಸಿಲೆಂಡರ್‌ಗಳನ್ನು ಹಾಕಿಕೊಂಡು ಇಳಿಯುವ ಸಾಹಸಮಯ ಜಲಕ್ರೀಡೆ. ಇದರ ಕುರಿತು ಸಾಕಷ್ಟು ಜನರು ಓದಿರುತ್ತಾರೆ ಇಲ್ಲವೇ ಟಿವಿ ಮುಂತಾದವುಗಳಲ್ಲಿ ನೋಡಿರುತ್ತಾರೆ. ವಿದೇಶಗಳಲ್ಲಿ ಸಮುದ್ರಾಳದಲ್ಲಿ ಇಳಿದು ಒಳಗಿನ ಜೀವರಾಶಿಯನ್ನು ಚಿತ್ರಿಸುವುದು ಒಂದು ಹವ್ಯಾಸ ಅದನ್ನು ಟಿವಿಗಳಲ್ಲಿ ಯೂಟ್ಯೂಬ್ ಮುಂತಾದವುಗಳಲ್ಲಿ ನಾವು ನೋಡುತ್ತಿರುತ್ತೇವೆ. ಅಂತಹುದೇ ನಮ್ಮಲ್ಲೇ ಇದ್ದರೆ ನಾವು ಸಹ ಸಮುದ್ರದಾಳಕ್ಕೆ ಹೋಗಬಹುದಿತ್ತು ಎಂದೆಲ್ಲಾ ಅನಿಸುವುದು ಸಹಜವೇ.
 
ಹೌದು ಸ್ಕೂಬಾ ಡೈವಿಂಗ್ ನಮ್ಮಲ್ಲಿ ತುಂಬಾನೇ ವಿರಳ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದರ ಕ್ರೇಜ್ ತುಂಬಾನೇ ಇದೆ. ಆದರೆ ನಮ್ಮಲ್ಲಿ ಸರಿಯಾದ ತರಬೇತಿ ಕೊರತೆಯಿಂದಾಗಿ ಸ್ಕೂಬಾ ಡೈವಿಂಗ್ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತದೆ, ಅವುಗಳೆಂದರೆ ಅಂಡಮಾನ್-ನಿಕೋಬಾರ್, ಪಾಂಡಿಚೇರಿ ಹಾಗೂ ಗೋವಾ. ಆದರೆ ಇದೀಗ ಅದನ್ನು ನಮ್ಮ ಕರ್ನಾಟಕದಲ್ಲೂ ಕಾಣಬಹುದಾಗಿದೆ. ನೀವು ಸಹ ಸ್ಕೂಬಾ ಡೈವಿಂಗ್‌ ಮಾಡಬೇಕು ಸಮುದ್ರದಾಳದಲ್ಲಿನ ಲೋಕವನ್ನು ಕಣ್ತುಂಬಿಕೊಳ್ಳಬೇಕು ಎಂದಾದರೆ ನೀವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಮುರುಡೇಶ್ವರದ ಸಮೀಪದಲ್ಲಿರುವ ನೇತ್ರಾಣಿಗೆ ಬರಬೇಕು.
 
ಮಿರ್ಜಾನ್ ಕೋಟೆ ಬಗ್ಗೆ ನಿಮಗೆಷ್ಟು ಗೊತ್ತು?
 
ಕರ್ನಾಟಕ ರಾಜ್ಯ ಒಂದು ಸಾಂಸ್ಕೃತಿಕ ತವರು. ಇದು ಭಾರತದ ಇತಿಹಾಸದಲ್ಲಿ ತನ್ನದೇ ಆದ ಕೊಡುಗೆಯನ್ನು ದೇಶಕ್ಕೆ ನೀಡಿದ ಹಿರಿಮೆ ಈ ರಾಜ್ಯಕ್ಕಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡ ನಾಡಿನ ಚರಿತ್ರೆಯನ್ನು ನೀವು ಕೇಳಿರುತ್ತಿರಿ. ಇತಿಹಾಸದ ಪುಟವನ್ನು ನಾವು ತಿರುವಿದಾಗ ಅನೇಕ ರಾಜರು ಸಾಮಂತರು ಕರ್ನಾಟಕವನ್ನು ಆಳಿರುವುದನ್ನು ನೀವು ಓದಿರುತ್ತಿರಿ. 
 
ಅವರ ಆಳ್ವಿಕೆಯ ಕಾಲದಲ್ಲಿ ರಾಜ್ಯ ಹಾಗಿತ್ತು ಹೀಗಿತ್ತು ಎನ್ನೋ ವಿಷಯಗಳು ನಮ್ಮ ಕಿವಿಯಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇದನ್ನು ನೋಡಲು ನಮಗೆ ಸಾಧ್ಯವಿಲ್ಲವಲ್ಲ ಎಂಬ ಕೊರಗು ನಮ್ಮಲ್ಲೂ ಆಗಾಗ ಮೂಡುವುದು ಸಹಜ. ಅಲ್ಲದೇ ಅವರ ರಾಜ್ಯ, ಕೋಟೆ ಹೇಗಿರಬಹುದು ಎಂಬ ಕೂತುಹಲಕ್ಕೆ ಕೋಟೆ ಕೊತ್ತಲುಗಳು, ಹಳೆಯ ಶಾಸನಗಳು, ನಾಣ್ಯಗಳು ಗ್ರಂಥಗಳು ಹೀಗೆ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಸಿಗುತ್ತವೆ. 
 
ಆದರೆ ನಮ್ಮಲ್ಲಿ ಕೋಟೆಗಳೇನೋ ಸಾಕಷ್ಟಿವೆ ಆದರೆ ಅವುಗಳನ್ನು ನೋಡಬೇಕು ಅದರ ಸೌಂದರ್ಯವನ್ನು ಆಸ್ವಾಹಿಸಬೇಕು ಎಂದರೆ ಅಂತಹ ಕೋಟೆಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಅದರಲ್ಲೂ ಕೆಲವು ಕೋಟೆಗಳು ಅಳಿವಿನ ಅಂಚಿನಲ್ಲಿದ್ದರೆ ಇನ್ನು ಕೆಲವು ಕೋಟೆಗಳು ಮಾತ್ರ ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಗತ ವೈಭವದ ವೈಭೋಗವನ್ನು ಸಾರುತ್ತಿದೆ. ಅಂತಹ ಕೋಟೆಗಳಲ್ಲಿ ಮಿರ್ಜಾನ್ ಕೋಟೆಯು ಒಂದು.
 
ಕೋಟೆಗೆ ದಾರಿ
 
ಮಿರ್ಜಾನ್ ಕೋಟೆಯು ಉತ್ತರಕನ್ನಡದ (ಕಾರವಾರ) ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿದೆ. ಗೋಕರ್ಣದಿಂದ ಸುಮಾರು 23 ಕಿಮಿ ದೂರದಲ್ಲಿರುವ ಮಿರ್ಜಾನ್ ಕೋಟೆ, ಕುಮಟಾ ಪಟ್ಟಣದಿಂದ 10.5 ಕಿಮಿ ದೂರದಲ್ಲಿದೆ. ನಾವು ಕಾಣಬಹುದಾದ ಉತ್ತಮ ಸ್ಥಿತಿಯಲ್ಲಿರುವ ಕೋಟೆಗಳಲ್ಲಿ ಇದು ಕೂಡಾ ಒಂದಾಗಿದೆ. ಇದು ಅಘನಾಶಿನಿ ನದಿಯ ತಟದಲ್ಲಿದ್ದು ಅದರಾಚೆಗೆ ಅರಬ್ಬೀ ಸಮುದ್ರವನ್ನು ಹೊಂದಿದೆ.
 
 
ಕೋಟೆಯ ಭೌಗೋಳಿಕ ಲಕ್ಷಣಗಳು
 
ಸುಮಾರು ೧೧.೫ ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಈ ಕೋಟೆಯಿದ್ದು ನೋಡಲು ತುಂಬಾ ಆಕರ್ಷಕವಾಗಿದೆ. ಈ ಕೋಟೆಯು ಕರಾವಳಿ ಪ್ರದೇಶದಲ್ಲಿ ಕಂಡುಬರುವ ಜಂಬಿಟ್ಟಿಗೆ ಕಲ್ಲಿನಿಂದ (ಲ್ಯಾಟರೈಟ್) ನಿರ್ಮಾಣವಾಗಿದ್ದು ಇಂದಿಗೂ ಅದರ ಗೋಡೆಗಳು ಗಟ್ಟಿಯಾಗಿವೆ. ಇದರಲ್ಲಿ ಒಂದು ಮುಖ್ಯ ದ್ವಾರಗಳಿದ್ದು ಮೂರು ಉಪ ದ್ವಾರಗಳು ಕಂಡುಬರುತ್ತವೆ. ಕೋಟೆಯ ಸುತ್ತ ತಗ್ಗು ಪ್ರದೇಶವಿದ್ದು ಹಲವಾರು ಗುಪ್ತದ್ವಾರಗಳನ್ನು ಹೊಂದಿದೆ. ಅದಲ್ಲದೇ ಇಲ್ಲಿ ಹಲವಾರು ಕಂದಕಗಳು, ದರ್ಬಾರ ಹಾಲ್, ರಾಣಿಯ ಸಿಂಹಾಸನ, ಪಾಕಶಾಲೆ, ಮಾರುಕಟ್ಟೆ ದೇವಸ್ಥಾನ, ಮಸಿದಿಯಂತಹ ಅವಶೇಷಗಳು ಮತ್ತು ಈ ಕೋಟೆಯಲ್ಲಿ 9 ಭಾವಿಗಳನ್ನು ನಾವು ಕಾಣಬಹುದಾಗಿದೆ. ಅದಲ್ಲದೇ ಕೋಟೆಯ ಧ್ವಜ ಸ್ತಂಭ, ಕಾವಲು ಗೋಪುರ ಅಲ್ಲಿಂದ ಕಾಣುವ ಅಘನಾಶಿನಿ ನದಿ ನೋಡುಗರನ್ನು ಆಕರ್ಷಿಸುವುದಂತು ಸುಳ್ಳಲ್ಲ. ಮೆಟ್ಟಿಲುಗಳ ನಿರ್ಮಾಣವು ಆಕರ್ಷಕವಾಗಿದ್ದು ಪ್ರತಿಯೊಂದು ದ್ವಾರವು ಹಾಗೂ ಕೋಟೆಯ ಕಲ್ಲುಗಳು ಜನರನ್ನು ಆಕರ್ಷಿಸುತ್ತದೆ. ಅಲ್ಲದೇ ಕೋಟೆಯ ನಿರ್ಮಾಣವು ಅಚ್ಚುಕಟ್ಟಾಗಿದ್ದು ಪ್ರತಿಯೊಂದು ಸೌಕರ್ಯವನ್ನು ಈ ಕೋಟೆ ಹೊಂದಿರುವುದಕ್ಕೆ ಸಾಕ್ಷಿ ಲಭಿಸುತ್ತದೆ.
 
 
ಇತಿಹಾಸದಲ್ಲಿ ಮಿರ್ಜಾನ್ ಕೋಟೆ 
 
ಕರ್ನಾಟಕದ ಇತಿಹಾಸದಲ್ಲಿ ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿಗೊಂಡಿದ್ದ ಸಾಳುವ ವಂಶದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು 16 ನೇ ಶತಮಾನದಲ್ಲಿ ನಿರ್ಮಿಸಿದ್ದಾಳೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕೋಟೆಯನ್ನು ಕಟ್ಟಿರುವವರ ಕುರಿತು ಹಲವಾರು ಭಿನ್ನಾಭಿಪ್ರಾಯಗಳಿದ್ದು, ಇಬ್ನಬಟೂಟ ಎಂಬ ನವಾಯತ ರಾಜ 1200 ರಲ್ಲಿ ಕಟ್ಟಿರುವುದಾಗಿ ಹೇಳುತ್ತಾರೆ. ಮತ್ತೊಂದು ವಾದದ ಪ್ರಕಾರ ಈ ಕೋಟೆಯನ್ನು ಬಿಜಾಪುರದ ಸುಲ್ತಾನ ಶರೀಫ್ ಉಲ್ ಮುಲ್ಕ್ ಇದನ್ನು 1608-1640 ರ ಕಾಲದಲ್ಲಿ ಕುಮಟಾ ಪಟ್ಟಣ ರಕ್ಷಣೆ ದೃಷ್ಟಿಯಿಂದ ಕಟ್ಟಿದನೆಂದು ಹೇಳುತ್ತಾರೆ. ಹೆಚ್ಚಿನವರ ಪ್ರಕಾರ ಇದು ಗೇರುಸೊಪ್ಪೆಯ ರಾಣಿ ಕಟ್ಟಿರುವುದು ಎಂಬ ಮಾತು ಸ್ಥಳೀಯವಲಯದಲ್ಲಿದೆ. ರಾಣಿ ಚೆನ್ನಭೈರಾದೇವಿಯು ವಿಜಯನಗರ ಅರಸರ ಸಾಮಂತ ರಾಣಿಯಾಗಿದ್ದು ಸುಮಾರು 54 ವರ್ಷಗಳ ಕಾಲ ಈ ಪ್ರಾಂತ್ಯವನು ರಾಜ್ಯಭಾರ ಮಾಡಿರುವುದು ವಿಶೇಷವಾಗಿದೆ.
 
ವ್ಯಾಪಾರ
ಈ ರಾಣಿಯ ಆಳ್ವಿಕೆಯ ಅವಧಿಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ಇತ್ತು. ಈ ಪ್ರದೇಶವು ಅಕ್ಕಿ ಮತ್ತು ಕಾಳುಮೆಣಸಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. ಅಲ್ಲದೇ ಈ ಪ್ರದೇಶದಲ್ಲಿ ಬೆಳೆಯುವ ಅಡಿಕೆ, ಕಾಳುಮೆಣಸು, ಇಲ್ಲಿ ತಯಾರಿಸುವ ಉಪ್ಪು ಮುಂತಾದ ಸಾಂಬಾರ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ವ

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರ ಮಾಡಿದ ಉತ್ತಮ ಆಡಳಿತ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ