Select Your Language

Notifications

webdunia
webdunia
webdunia
webdunia

ಬಾಳು ಬದಲಾವಣೆಯ ಪರ್ವಕಾಲ - ಸಂಕ್ರಾತಿ

ಮಕರ ಸಂಕ್ರಮಣ ವಿಶೇಷ

ಬಾಳು ಬದಲಾವಣೆಯ ಪರ್ವಕಾಲ - ಸಂಕ್ರಾತಿ
WD
ಹಲವರು, 'ಇಂದು ತಮ್ಮ ಬದುಕನ್ನು ಬದಲಾಯಿಸಿಕೊಳ್ಳಬೇಕು' ಎಂದುಕೊಳ್ಳುವುದು ನಮ್ಮ ಹೆಮ್ಮೆಯ ಹಬ್ಬ "ಸಂಕ್ರಾಂತಿ ದಿನದಂದು. ಜನರಲ್ಲಿ ಹೊಸ ಬದಲಾವಣೆ ಮತ್ತು ಆಚರಣೆ ತರುವ `ಸಂಕ್ರಾಂತಿ ಪ್ರತಿ ವರ್ಷ ಜನವರಿ 14 ರಂದು ಬರುತ್ತದೆ. ಎಲ್ಲರೂ ಅದ್ದೂರಿಯಾಗಿ ಈ ಹಬ್ಬವನ್ನು ಆಚರಿಸುತ್ತೇವೆ. ಅದರಂತೆ ಈ ವರ್ಷವೂ ಮತ್ತೆ ಮರಳಿ ಬಂದಿದೆ ಸಡಗರದ ಸಂಕ್ರಾಂತಿ.

ಸೂರ್ಯದೇವ ತನ್ನ ಪಥ ಬದಲಾಯಿಸಿ ಒಂದು ರಾಶಿಯಿಂದ ಮತ್ತೊಂದು ರಾಶಿಯತ್ತ ತನ್ನ ಕಿರಣ ಬೀರುತ್ತಾನೆ. ದಕ್ಷಿಣ ದಿಕ್ಕಿನಿಂದ ಉತ್ತರದ ಕಡೆಗೆ ಅರ್ಧ ವರ್ಷ ಪಯಣ ಮಾಡಿ ಮಕರ ರಾಶಿಗೆ ಆಗಮಿಸುತ್ತಾನೆ ಎಂಬುದು ನಮ್ಮ ಧಾರ್ಮಿಕ ನಂಬಿಕೆ. ಈ ನಂಬಿಕೆಗೆ ಮತ್ತೊಂದು ಹೆಸರೇ `ಸಂಕ್ರಾಂತಿ.

ಸೂರ್ಯನ ಪಥ ಬದಲಾವಣೆಯಲ್ಲದೇ ಹವಾಮಾನದಲ್ಲಿ ಏರಿಳಿತಗಳು ಕಂಡುಬರುತ್ತದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೆವ ಚಳಿ ಮಂದವಾಗುತ್ತಾ ಹೋಗುತ್ತದೆ. ಹಗಲು ದೀರ್ಘವಾಗುವುದು. ಸಂಕ್ರಾಂತಿ ಆಚರಿಸುವ ದಿನವನ್ನು ಹಿಂದೂ ಸಂಸ್ಕೃತಿಯಲ್ಲಿ ಉತ್ತರಾಯಣದ ಪುಣ್ಯಕಾಲ ಎಂದು ಕರೆಯಲಾಗುತ್ತದೆ. ಅಂದರೆ ಈ ದಿನದಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ. ಆದ್ದರಿಂದಲೇ ಭೀಷ್ಮ ಉತ್ತರಾಯಣದ ಕಾಲದವರೆಗೂ ಕೊನೆ ಉಸಿರನ್ನು ಬಿಡಲಿಲ್ಲ ಎಂದು ನಮ್ಮ ಧರ್ಮಗ್ರಂಥಗಳು ಸಾರಿ ಹೇಳುತ್ತವೆ.

ಗ್ರಾಮಗಳಲ್ಲಿ ಸಂಕ್ರಾಂತಿ:
webdunia
WD

ಸಂಕ್ರಾಂತಿ ಎಂದರೆ ಹಳ್ಳಿಗಳಲ್ಲಿ ಬೆಳೆದ ಬೆಳಗಳ ಸುಗ್ಗಿ. ಮನಕ್ಕೆ ಮುದ ನೀಡುವ ಪರಿಸರ ಸೃಷ್ಟಿಯಾಗುವ ಈ ಹಳ್ಳಿಗಳಲ್ಲಿ ರಾಗಿ, ಭತ್ತ, ಜೋಳ ಮತ್ತಿತರ ಬೆಳೆಗಳು ರೈತನ ಮಡಿಲು ಸೇರಿ ರಾಶಿಯಾಗಿರುತ್ತದೆ. ಉಳಿದ ಅವರೆಕಾಯಿ, ಗೆಣಸು, ಕುಂಬಳಕಾಯಿ ಬೆಳೆಗಳು ಸಮೃದ್ಧವಾಗಿ ಸಿಗುವ ಕಾಲ. ಆದ್ದರಿಂದಲೇ ಸಂಕ್ರಾಂತಿ ಎಂದರೆ ಹಳ್ಳಿಗರ ಮನಸ್ಸಿನಲ್ಲಿ ಸುಗ್ಗಿ ಹಬ್ಬ.

ಜಾಗತೀಕರಣ ಇಡೀ ಜಗತ್ತನ್ನೇ ಬದಲಾಯಿಸಬಹುದು. ಆದರೆ ಹಿಂದೂ ಸಂಸ್ಕ್ರತಿಯ ಮಡಿಲಲ್ಲಿ-ಹುಟ್ಟಿ ಬೆಳೆದ ಆಚರಣೆಗಳನ್ನು ಬದಲಾಯಿಸುವ ಶಕ್ತಿ ಅದಕ್ಕಿಲ್ಲ.

ಸಂಕ್ರಾಂತಿ, ಹಳ್ಳಿ ಜನರಿಗೆ ಸಂಭ್ರಮಿಸುವ ದಿನ. ಹೆಂಗಳೆಯರು ಆ ದಿನದಂದು ಶೃಂಗಾರಗೊಂಡು ಎಳ್ಳು - ಬೆಲ್ಲವನ್ನು ಹಂಚುತ್ತಾರೆ. ಸೂರ್ಯ ಹುಟ್ಟುವ ಮುನ್ನವೇ ಮನೆಯನ್ನು "ನವ ವಧು" ವಿನಂತೆ ಶೃಂಗಾರ ಮಾಡುತ್ತಾರೆ. ಮನೆಯ ಮುಂದೆ ರಂಗೋಲಿ ಹಾಕುವ ಮೂಲಕ ನೋಡುಗರ ಕಣ್ಣಿಗೆ ಚಿತ್ರಲೋಕವನ್ನೇ ಕಟ್ಟಿ ಕೊಡುತ್ತಾರೆ.

ಅಂದು ತಾವು ಸಾಕಿರುವ ಜಾನುವಾರುಗಳಿಗೆ ರೈತರು ಬೆಚ್ಚನೆ ನೀರಿನ ಸ್ನಾನ ಮಾಡಿಸಿ, ಶೃಂಗಾರ ಮಾಡುತ್ತಾರೆ. ಸ್ವಲ್ಪ ಸಿರಿವಂತರಾದರೆ ಅವುಗಳಿಗೆ ಸುಗಂಧ ದ್ರವ್ಯ ಲೇಪನ ಮಾಡಿ, ಕಣ್ಣಿಗೆ ಕಾಡಿಗೆ ಹಚ್ಚಿ, ಹೂವಿನ ಹಾರಗಳನ್ನು ಹಾಕಿ ಶೃಂಗರಿಸುತ್ತಾರೆ. ಬೇಕಾದಷ್ಟು ಮೇವು ಕೊಟ್ಟು ಸಾಧು ಪ್ರಾಣಿಗಳನ್ನು ತಮ್ಮ ಬಂಧುಗಳಂತೆ ನೋಡಿಕೊಳ್ಳುತ್ತಾರೆ. ಪ್ರಾಣಿಗಳಿಗೆ ನೋವು ನೀಡಬಾರದೆಂಬ ಕಾರಣದಿಂದ ಆ ದಿನದಂದು ಪ್ರಾಣಿಗಳಿಗೆ ಕೆಲಸವಿಲ್ಲ.

ಇಂತಹ ಸಡಗರದ ಹಬ್ಬದ ದಿನದಂದು ಹಳ್ಳಿ ಜನ ಸುಳ್ಳು ಹೇಳದೆ ಪ್ರಾಮಾಣಿಕ ಮಾತುಗಳನ್ನು ಆಡುತ್ತಾರೆ. ಇಂತಹ ಹಬ್ಬವನ್ನು ದೇಶದ ಹಲವೆಡೆ ವಿಭಿನ್ನ ಶೈಲಿಯಲ್ಲಿ ಆಚರಿಸುತ್ತಾರೆ. ರಾಮಾಯಣದಲ್ಲಿ ಶ್ರೀರಾಮಚಂದ್ರ ರಾವಣನನ್ನು ಸಂಹಾರ ಮಾಡಿ, ಸೀತೆಯನ್ನು ಅಯೋಧ್ಯೆಗೆ ಕರೆ ತಂದನೆಂಬ ಭಾವನೆಯಲ್ಲಿ ಆಂಧ್ರ ಪ್ರದೇಶದಲ್ಲಿ ರಾವಣನ ಪ್ರತಿಕೃತಿ ದಹನ ಮಾಡಿ ಆಚರಿಸಲಾಗುತ್ತದೆ. ಅದೇ ತಮಿಳುನಾಡಿನಲ್ಲಿ ಸೂರ್ಯ ದೇವನಿಗೆ ನೈವೇದ್ಯ ಸಮರ್ಪಿಸಿ ಸಂಕ್ರಾತಿಯನ್ನು ಆಚರಿಸಲಾಗುತ್ತದೆ.

ವೆಬ್‌ದುನಿಯಾ ಓದುಗರೆಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.

Share this Story:

Follow Webdunia kannada