Publish Date: Sun, 20 Apr 2008 (15:35 IST)
Updated Date: Sun, 20 Apr 2008 (15:34 IST)
ಮಾಜಿ ಶಾಸಕ ಹಾಗೂ ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವ ಅನಿಲ್ ಲಾಡ್ ಮನೆ ಮೇಲೆ ದಾಳಿಗೆ ಸಂಬಂಧಪಟ್ಟಂತೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ತಮಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಅನಿಲ್ ಲಾಡ್ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರನ್ನು ಬಂಧಿಸಲಾಗಿತ್ತು. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಮಂದಿಯನ್ನು ಬಂಧಿಸಲಾಗಿದ್ದು, ಮೇ 2ರವರೆಗೆ ನ್ಯಾಯಾಂಗ ಬಂಧನದಲಲಿ ಇಡಲಾಗಿದೆ ಎಂದು ಹಿರಿಯ ಪೊಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು ಅವರ ರಾಜಕೀಯ ಎದುರಾಳಿ ಹಾಗೂ ಇತ್ತೀಚೆಗೆ ಜೆಡಿಎಸ್ ಸೇರಿರುವ ಮಾಜಿ ಸಚಿವ ದಿವಾಕರ್ ಬಾಬು, ಅನಿಲ್ ಲಾಡ್ ಮನೆ ಮೇಲಿನ ದಾಳಿ ಹಿಂದೆ ಯಾರ ಕೈವಾಡವಿದೆ ಎಂಬುದು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಶ್ರೀರಾಮುಲು ಹಾಗೂ ಅವರ ಬೆಂಬಲಿಗರು ವಿನಾಕಾರಣ ಲಾಡ್ ಮನೆ ಮೇಲೆ ಹಲ್ಲೆ ನಡೆಸಿದ್ದಾರೆ. ಜನರನ್ನು ಬೆದರಿಸಿ ಚುನಾವಣೆ ಎದುರಿಸುವುದನ್ನೇ ಬಿಜೆಪಿ ಮುಖಂಡರು ವೃತ್ತಿಯನ್ನಾಗಿಸಿಕೊಂಡಿದ್ದಾರೆ ಎಂದು ಲಾಡ್ ಪರವಾಗಿ ಮಾತನಾಡಿದ್ದು, ಸೋಜಿಗ ಉಂಟು ಮಾಡಿದೆ.
ಈ ಮಧ್ಯೆ ಬಿಜೆಪಿ ಮುಖಂಡ ಜರ್ನಾರ್ಧನ ರೆಡ್ಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಪೂರ್ಣ ನೆಲಕಚ್ಚಿವೆ. ಹೀಗಾಗಿ ತಮ್ಮ ವಾಹನಗಳಿಗೆ ತಾವೇ ಬೆಂಕಿ ಇಟ್ಟು, ಬಿಜೆಪಿ ಮೇಲೆ ದೂರು ದಾಖಲಿಸುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.