Publish Date: Sat, 28 Sep 2024 (11:19 IST)
Updated Date: Sat, 28 Sep 2024 (11:22 IST)
ಬೆಂಗಳೂರು: ಇದು ಮಳೆಗಾಲವಾಗಿದ್ದರೂ ತೀವ್ರ ಬಿಸಿಲಿನಿಂದಾಗಿ ಬೆಂಗಳೂರಿಗರು ದಾಹ ತಣಿಸಲು ಜ್ಯೂಸ್ ಸೆಂಟರ್, ಎಳೆನೀರನ್ನು ಹುಡುಕಿಕೊಂಡು ಹೋಗುವಂತಾಗಿದೆ. ಆದರೆ ಎಳೆನೀರು ಕುಡಿಯಲು ಹೊರಟವರಿಗೆ ಈಗ ಶಾಕ್ ಎದುರಾಗಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಹಲವೆಡೆ ಎಳೆನೀರಿನ ದರದಲ್ಲಿ ಭಾರೀ ಏರಿಕೆಯಾಗಿದೆ. ಮೊದಲು 35-40 ರೂ. ಮಾರಾಟವಾಗುತ್ತಿದ್ದ ಎಳೆ ನೀರಿಗೆ ಈಗ 60 ರೂ.ವರೆಗೆ ತಲುಪಿದೆ. ಬರೀ ನೀರು ಇರುವ ಎಳೆನೀರಿಗೆ 35, ಗಂಜಿ ಇರುವುದಕ್ಕೆ 40-45 ರೂ.ಗಳಿಗೆ ಮಾರಾಟವಾಗುತ್ತಿತ್ತು.
ಈಗ ಅದೇ ಮಳಿಗೆಯಲ್ಲಿ ಬರೀ ನೀರು ಇರುವ ಎಳೆ ನೀರಿಗೇ 60 ರೂ. ದರ ವಸೂಲಿ ಮಾಡಲಾಗುತ್ತಿದೆ. ಹಾಗಂತ ಈ ದರ ರೈತನಿಗೆ ಸೇರಬಹುದು ಎಂದು ನೀವಂದುಕೊಂಡರೆ ತಪ್ಪಾಗುತ್ತದೆ. ಇದು ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದರೂ ತಪ್ಪಾಗಲಾರದು. ಈ ಬಗ್ಗೆ ಎಳೆನೀರಿನ ಅಂಗಡಿಯೊಂದರ ಮಾಲಿಕರನ್ನು ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು.
ಕೆಲವು ದಿನಗಳಿಂದ ಎಳೆ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಕಾಯಿ ಬರುತ್ತಿಲ್ಲ. ಅದರಲ್ಲೂ ಮೊದಲಿನಂತೆ ಗಂಜಿ, ದಪ್ಪ ಗಂಜಿ ಎಂದೆಲ್ಲಾ ವೆರೈಟಿ ಸಿಗುವುದು ಕಷ್ಟವಾಗಿದೆ. ವಾರಕ್ಕೆ ಎರಡು ಮೂರು ದಿನ ಲೋಡ್ ಬರ್ತಾ ಇತ್ತು. ಆದರೆ ಈಗ ಕಾಯಿ ಬರೋದೇ ಕಡಿಮೆಯಾಗಿದೆ. ಅದಕ್ಕೇ ದರ ಏರಿಕೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಬೇಸಿಗೆಯಲ್ಲಿ ಎಳೆನೀರಿನ ಬೆಲೆ ಬೇಡಿಕೆ ಹೆಚ್ಚಾಗಿದ್ದರಿಂದ ಏರಿಕೆಯಾಗಿತ್ತು. ಆದರೆ ಈಗ ಕಾಯಿ ಬರುತ್ತಿಲ್ಲ ಎಂಬ ಕಾರಣಕ್ಕೆ ಅದನ್ನೂ ಮೀರಿದ ದರ ನಿಗದಿಯಾಗಿದೆ. ಹೀಗಾಗಿ ಸದ್ಯಕ್ಕೆ ಎಳೆ ನೀರು ಕುಡಿಯಲೂ ಹಿಂದೆ-ಮುಂದೆ ನೋಡುವ ಪರಿಸ್ಥಿತಿಯಾಗಿದೆ.