ಯುವತಿಯೋರ್ವಳ ಜತೆ ಫೇಸ್ಬುಕ್ನಲ್ಲಿ ಚಾಟ್ ಮಾಡಿದ ಕಾರಣಕ್ಕೆ ಸೆಕ್ಯೂರಿಟಿ ಗಾರ್ಡ್ ಒಬ್ಬನನ್ನು ಅಪಹರಿಸಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಚಾಟ್ ಮಾಡಿದ ಯುವತಿಯನ್ನು ಪ್ರೀತಿಸುತ್ತಿದ್ದವ ಎಂದು ತಿಳಿದು ಬಂದಿದೆ.
ಘಾಟ್ಕೋಪಾರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಪ್ರಕಾರ ಪೀಡಿತ ವ್ಯಕ್ತಿ ಸಂದೀಪ್ ಶಿಂಧೆ ಕಾಜು ತೆಕ್ಡಿ ನಿವಾಸಿಯಾಗಿದ್ದು ಆರೋಪಿಗಳು ಸಹ ಅದೇ ಪ್ರದೇಶದ ನಿವಾಸಿಗಳಾಗಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ.
ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರೆನ್ನಲಾಗಿದ್ದು, ಉಳಿದವರನ್ನು ಸತೀಶ್ ಬಬ್ಬಾನ್ ಲೋಖಂಡೆ 927), ದಿನು ಸಿಂಗ್(21) ಪ್ರಥಮೇಶ್ ಶೆಡ್ಗೆ (19)ಎಂದು ಗುರುತಿಸಲಾಗಿದೆ. ಅವರೆಲ್ಲರೀಗ ಪೊಲೀಸರ ವಶದಲ್ಲಿದ್ದಾರೆ. ಆದರೆ ಮುಖ್ಯ ಆರೋಪಿಗಳಾದ ಶುಭಂ ಜುವಟ್ಕರ್ ಮತ್ತು ಗುಡ್ಡು ನಾಪತ್ತೆಯಾಗಿದ್ದಾರೆ.
ಶಿಂಧೆಯನ್ನು ಅಪಹರಿಸಿದ ದುರುಳರ ಗುಂಪು ಅಜ್ಞಾತ ಸ್ಥಳವೊಂದಕ್ಕೆ ಆತನನ್ನು ಕರೆದೊಯ್ದು ಕೋಣೆಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದೆ. ಬೆದರಿಕೆ ಹಾಕಿದ ಶುಭಂ ಜುವಟ್ಕರ್ ಶಿಂಧೆಯ ಕುತ್ತಿಗೆಯ ಮೇಲೆ ಕುಡಗೋಲನ್ನಿಟ್ಟು ವಿಡಿಯೋ ಚಿತ್ರೀಕರಣವನ್ನು ಮಾಡಿದ್ದಾನೆ.
"ನಿನ್ನ ಪ್ರಿಯತಮೆಯ ಜತೆ ಮತ್ತೆಂದೂ ಚಾಟ್ ಮಾಡಲಾರೆ. ಬಿಟ್ಟು ಬಿಡು", ಎಂದು ಶಿಂಧೆ ಶುಭಂ ಬಳಿ ಗೋಗರೆಯುತ್ತಿರುವುದು ಸಹ ವೀಡಿಯೋದಲ್ಲಿ ಕಂಡುಬಂದಿದೆ. ಆ ನಂತರ ಶಿಂಧೆಯ ಮೊಬೈಲ್ನ್ನು ಕಿತ್ತುಕೊಂಡ ದುಷ್ಕರ್ಮಿಗಳ ತಂಡ ಆತನನ್ನು ಬಂಧಮುಕ್ತಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಶಿಂಧೆಯನ್ನು ಆಸ್ಪತ್ರೆಗೆ ದಾಖಲಿಸಿದ ಆತನ ಕುಟುಂಬದವರು ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. "ಆತನ ತಲೆಗೆ 8 ಹೊಲಿಗೆ ಹಾಕಲಾಗಿದ್ದು, ಮೈಮೇಲೆ ಆಳವಾದ ಗಾಯದ ಗುರುತುಗಳಿವೆ", ಎಂದು ಹಿರಿಯ ಪೊಲೀಸ್ ಇನ್ಸಪೆಕ್ಟರ್ ವೆಂಕಟ್ ಪಾಟೀಲ್ ತಿಳಿಸಿದ್ದಾರೆ.