Select Your Language

Notifications

webdunia
webdunia
webdunia
webdunia

ಗಂಡಿನ ಜಗತ್ತಿನೊಳಗೂ ನೋವಿನ ಬುತ್ತಿ ಇದೆ!

ಗಂಡಿನ ಜಗತ್ತಿನೊಳಗೂ ನೋವಿನ ಬುತ್ತಿ ಇದೆ!
ಬೆಂಗಳೂರು , ಬುಧವಾರ, 18 ಜುಲೈ 2018 (13:13 IST)
-ಸತೀಶ್ ಕುಮಾರ್
 
ಪುರುಷ ಇದು ಸ್ತ್ರೀಯ ವಿರುದ್ಧಾರ್ಥಕ ಪದವೇವಿದ್ದಿರಬಹುದು. ಆದರೆ ಅವನ ಭಾವನೆಗಳು/ಕಷ್ಟಗಳು ಹೆಣ್ಣಿಗಿಂತ ತೀರಾ ಭಿನ್ನವಾಗೇನಿಲ್ಲ. ಭಾವನೆ ಹೆಣ್ಣೊಬ್ಬಳ ಸ್ವತ್ತೂ ಅಲ್ಲ. ಗಂಡು ಕೂಡ ಅಳಬಲ್ಲ, ತ್ಯಾಗ ಮಾಡಬಲ್ಲ, ಮೌನದ ಮೊರೆ ಹೋಗಬಲ್ಲ, ತುಟಿಕಚ್ಚಿ ನೋವು ನುಂಗಬಲ್ಲ. ಅಂರ್ತಯದಲ್ಲಿ ಅವನು ಕೂಡ ನೋವು ಅನುಭವಿಸುತ್ತಾನೆ. 

ಆದರೆ ಅದ್ಯಾವುದೂ ಈ ಜಗತ್ತಿಗೆ ಕಾಣದೇ ಹೋಗಬಹುದು! ಯಾಕೆಂದರೆ ಹುಡುಗರಿಗೆ ಬಾಲ್ಯದಿಂದಲೇ ನೀನು ಗಂಡು, ಅಳಬಾರದು, ನಿನ್ನ ಭಾವನೆಗಳೆನೇ ಇದ್ದರೂ ಅದನ್ನು ವ್ಯಕ್ತಪಡಿಸಬಾರದು ಎಂಬ ಧೋರಣೆಯನ್ನೇ ಅವನ ಮನಕ್ಕೆ ತುಂಬಿರುತ್ತಾರೆ. ಹೆಣ್ಣಿಗೆ ಅಳುವುದಕ್ಕಾದರೂ ಸ್ವಾತಂತ್ರ್ಯವಿದೆ. ಆದರೆ ಗಂಡು…? ಅಪ್ಪಿ-ತಪ್ಪಿ  ಅವನೆಲ್ಲಿಯಾದರೂ ಅತ್ತರೇ ಕೇಳುವ ಮೊದಲ ಪ್ರಶ್ನೇಯೇ ನೀನೇನು ಹೆಣ್ಣಾ ಮಾರಾಯ… ಎಂದು. ಹುಡುಗನೊಬ್ಬ ಅತ್ತರೇ ಅದು ಅವನ ಅಸಹಾಯಕತೆ ಎಂದು ಹೇಳಲಾಗುತ್ತದೆ. ಹಾಗಾಗಿ ಗಂಭೀರವಾದ ಮುಖವಾಡವನ್ನು ಅವನು ಯಾವಾಗಲೂ ತೊಟ್ಟುಕೊಂಡೇ ಇರಬೇಕಾಗುತ್ತದೆ.
 
ಇನ್ನು ಮಧ್ಯಮ ವರ್ಗದ ಮನೆಯಲ್ಲಿ ಹಿರಿಯ ಮಗನಾಗಿ ಜನಿಸಿದರಂತೂ ಅವನ ವ್ಯಥೆ ಕೇಳುವುದೇ ಬೇಡ. ಅವನ ಬಟ್ಟೆ, ಆಟಿಕೆಯಿಂದ ಹಿಡಿದು ಶಿಕ್ಷಣವನ್ನೂ ಕೂಡ ತನ್ನ ಒಡಹುಟ್ಟಿದವರಿಗಾಗಿ ತ್ಯಾಗ ಮಾಡಬೇಕಾಗುತ್ತದೆ. ಕುಟುಂಬದ ಜವಾಬ್ದಾರಿಯ ಹೊರೆ ಬೀಳುವುದು ಕೂಡ ಹಿರಿ ಮಗನ ತಲೆ ಮೇಲೆಯೇ. ವಯಸ್ಸಾದ ಅಪ್ಪ-ಅಮ್ಮ, ಮದುವೆಗೆ ತಯಾರಾಗಿ ನಿಂತ ಸಹೋದರಿಯರು, ಕಿರಿಯ ತಮ್ಮನ ಶಿಕ್ಷಣ ಹೀಗೆ ನೂರೆಂಟು ಜವಾಬ್ದಾರಿ ಅವನನ್ನು ಕಣ್ಣುಮುಚ್ಚಿ ಮಲಗುವುದಕ್ಕೂ ಬಿಡುವುದಿಲ್ಲ. ಮೌನದಲ್ಲಿಯೇ ಅವನು ಸುರಿಸುವ ಕಣ್ಣಿರೂ ಯಾರ ಅರಿವಿಗೂ ಬರುವುದಿಲ್ಲ. ಒಂದು ವೇಳೆ ಕಷ್ಟವೆಂದು ಹೇಳಿದರೆ ಸಹಾಯ ಮಾಡುವುವವರಿಗಿಂತ ಹೀಯಾಳಿಸುವವರೇ ಹೆಚ್ಚು. 
 
ಕೆಲಸದ ವಿಷಯಕ್ಕೆ ಬಂದರೆ, ಅಲ್ಲೂ ಕೂಡ ಪುರುಷ ಸುಖಿ ಅಲ್ಲ. ಪ್ರಾಯಕ್ಕೆ ಬಂದಾಗ ತಂದೆ-ತಾಯಿ, ಒಡಹುಟ್ಟಿದವರ ಜವಾಬ್ದಾರಿಗಾಗಿ ಹೆಗಲೊಡ್ಡಿದ ಜೀವ ನಂತರ ತನ್ನ ಸಂಸಾರಕ್ಕಾಗಿ ದುಡಿತ ಶುರುವಿಟ್ಟುಕೊಳ್ಳುತ್ತಾನೆ. ಹೆಂಡತಿಯ ಆಕಾಂಕ್ಷೆಗಾಗಿ, ಮಕ್ಕಳ ಪೋಷಣೆಗಾಗಿ ಅವನು ದುಡಿಮೆ ಅಗತ್ಯ. ಇದೆಲ್ಲ ಸಾಕಪ್ಪಾ… ಎಂದು ಒಂದು ನಾಲ್ಕು ದಿನ ಮನೆಯಲ್ಲಿ ಕುಳಿತರೇ ಎಲ್ಲರ ತಾತ್ಸಾರದ ಕಣ್ಣು, ಮೂದಲಿಕೆಯ ಮಾತು ಅವನನ್ನು ತಟ್ಟುತ್ತದೆ. ಹಾಗಾಗಿ ಯಾವುದೇ ಕೆಲಸಕ್ಕಾದರೂ ಗಂಡು ಅಂಜದೇ ತನ್ನನ್ನೊಡ್ಡಿ ಕೊಳ್ಳಬೇಕಾಗುತ್ತದೆ. ನೆಪ ಹೇಳುವುದಕ್ಕೆ ಅಲ್ಲೂ ಅವನಿಗೆ ಅವಕಾಶವಿಲ್ಲ. ಇಷ್ಟವಿಲ್ಲದ ಕೆಲಸವಾದರೂ ಕಷ್ಟಪಟ್ಟು ಮಾಡಲೇ ಬೇಕು. ರಾತ್ರಿ ಪಾಳಿಯ ಕೆಲಸವಿದ್ದರೂ, ನಿದ್ದೆ, ಊಟ ಸರಿಯಾಗದೇ ಇದ್ದರೂ ಯಾವುದರ ಬಗ್ಗೆಯೂ ಸೊಲ್ಲೆತ್ತದೇ ದುಡಿಯುವುದಕ್ಕೆ ಸಿದ್ಧನಿರಬೇಕಾದ ಜೀವವದು. ತನ್ನದೇ ವಯಸ್ಸಿನ ಶ್ರೀಮಂತ ವರ್ಗದ ಹುಡುಗರು ಮೋಜ ಮಸ್ತಿಯಲ್ಲಿ ಇರುವುದನ್ನು ನೋಡಿ ಹೊಟ್ಟೆಯೊಳಗೆ ತುಸು ಸಂಕಟವಾದರೂ ಅವುಡುಗಚ್ಚಿ ವಾಸ್ತವದ ಬದುಕಿನತ್ತ ಮುಖವೊಡ್ಡುತ್ತಾನೆ. 
webdunia
ಇನ್ನು ಮದುವೆ ವಿಷಯದಲ್ಲೂ ಪುರುಷ ಮತ್ತೆ ಅಸಹಾಯಕ. ವಯಸ್ಸಿನ ಸಹಜತೆಯಿಂದ ಅಂಕುರಿಸಿದ ಮೊದಲ ಪ್ರೀತಿಯನ್ನು ಕೂಡ ದಕ್ಕಿಸಿಕೊಳ್ಳುವುದಕ್ಕೆ ಆಗದ ಸ್ಥಿತಿ ಅವನದ್ದು. ಮನೆಯಲ್ಲಿ ಮದುವೆಯ ವಯಸ್ಸಿಗೆ ಬಂದ ಅಕ್ಕ-ತಂಗಿಯಂದಿರೂ ಇದ್ದಾರೆ ಎಂಬ ಯೋಚನೆಯೊಂದು ಅವನ ತಲೆಯಲ್ಲಿ ಓಡಾಡುತ್ತಲೇ ಇರುತ್ತದೆ. ತನಗೆ ಮದುವೆಯ ವಯಸ್ಸು ದಾಟುತ್ತಿದ್ದರೂ, ಒಡಹುಟ್ಟಿದ ಸಹೋದರಿಯ ಮದುವೆಯ ನಂತರವೇ ಮದುವೆಯಾಗಬೇಕು ಎಂಬ ಸಂಪ್ರದಾಯದ ಕಟ್ಟಳೆಗೆ ಒಗ್ಗಿಕೊಂಡಿರುತ್ತಾನೆ ಗಂಡು. ಮತ್ತೆ ಅಲ್ಲಿ ತನ್ನ ಆಸೆ, ಕನಸುಗಳನ್ನು ತ್ಯಾಗಮಾಡುತ್ತಾನೆ. ತನ್ನೆಲ್ಲಾ ಸ್ನೇಹಿತರು ಮದುವೆಯಾಗಿ ಅವರವರ ಸಂಸಾರದ ಜತೆ ನೆಮ್ಮದಿಯಾಗಿರುವುದನ್ನು ನೋಡಿ ನೋವಾದರೂ ತನ್ನ ಮುಖದ ಮೇಲೊಂದು ಗಂಭೀರತೆಯ ಸೋಗು ಹಾಕಿಕೊಂಡೇ ಜೀವಿಸುತ್ತಾನೆ. 
 
ಹೆಣ್ಣಿಗೆ ತನ್ನ ಭಾವನೆಯನ್ನು ವ್ಯಕ್ತ ಪಡಿಸುವುದಕ್ಕೆ ಹಲವು ವಿಧಗಳಿವೆ. ಆದರೆ ಗಂಡು ತನ್ನ ಭಾವನೆಗಳನ್ನು ಹಿಡಿದಿಡುವುದರಿಂದ ಒತ್ತಡದಿಂದಲೇ ಜೀವನ ಸಾಗಿಸಬೇಕಾಗುತ್ತದೆ.ಸಂಶೋಧನೆಯ ಪ್ರಕಾರ ಹೆಣ್ಣಿಗಿಂತ ಗಂಡೇ ಹೆಚ್ಚಾಗಿ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಾರಂತೆ. ಯಾಕೆಂದರೆ ಅವನಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವೇ ಇಲ್ಲ!
 
ಕೆಲವೊಂದು ಸಮಯದಲ್ಲಿ ಗಂಡು ಕೂಡ ಕೆಲವೊಮ್ಮೆ ಒಂಟಿಯಾಗಿರಲು ಬಯಸುತ್ತಾನೆ. ಆದರೆ ಸಂಸಾರದ ಬಂಧನದಲ್ಲಿರುವಾಗ ಇದೆಲ್ಲಾ ಆಗುಹೋಗುವ ಮಾತೇ….? ತನ್ನ ಕುಟುಂಬವನ್ನು ಸಂತೋಷದಲ್ಲಿಡುವುದಕ್ಕಾಗಿ ಕೆಲವೊಮ್ಮೆ ಮನಸ್ಸಿಲ್ಲದಿದ್ದರೂ ಹೆಂಡತಿಯ ಜತೆ ಶಾಪಿಂಗ್ ಹೋಗಲೇಬೇಕು. ಹಾಗೇ,  ಮಕ್ಕಳ ಶಾಲಾ ಚಟುವಟಿಕೆಗಳಲ್ಲಿ  ಭಾಗವಹಿಸುವುದು ಕೂಡ ಅವನ ಕರ್ತವ್ಯವಾಗಿರುತ್ತದೆ. ಇನ್ನು ತನ್ನ ಭಾವನೆಗಳಿಗೆ ಬೆಲೆಕೊಡದೇ ತನ್ನ ಹಕ್ಕನ್ನು ಮಾತ್ರ ಚಲಾಯಿಸುವ ಹೆಂಡತಿಯಿದ್ದರೇ, ಆ ಗಂಡಿನ ಪಾಡು ಮತ್ತಷ್ಟು ಹೀನಾಯವಾಗಿರುತ್ತದೆ. ಹೊರಗಡೆ ಕಷ್ಟಪಟ್ಟು ದುಡಿದು ಮನೆಗೆ ಬಂದರೆ, ಸಂತೈಸಿ, ಪ್ರೀತಿಸಬೇಕಾದ ಮಡದಿ, ನಿಮ್ಮನು ಕಟ್ಟಿಕೊಂಡು ನಾನೇನು ಸುಖಪಟ್ಟೇ…? ನನ್ನ ಜೀವನ ಹಾಳಾಗಿ ಹೋಯಿತು ಎಂತಿದ್ದರೇ, ಆ ಗಂಡು ತನ್ನ ಜೀವನದಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾನೆ.
webdunia
 ಇನ್ನು ತನ್ನ ಸಂಸಾರ, ತಂದೆ-ತಾಯಿಯನ್ನೆಲ್ಲಾ ಬಿಟ್ಟು ಪರವೂರಿಲ್ಲಿ ಕೆಲಸ ಮಾಡುತ್ತಿದ್ದರಂತೂ ಅವನ ಗೋಳು ದೇವರಿಗೆ ಪ್ರೀತಿ. ಹೊತ್ತು ಹೊತ್ತಿಗೆ ಸರಿಯಾದ ಊಟವಿಲ್ಲದೆ, ನಿದ್ದೆಯೂ ಸರಿಯಿಲ್ಲದೇ, ಅವನು ಅನುಭವಿಸುವ ನೋವು ಅವನಿಗಷ್ಟೇ ಗೊತ್ತಿರುತ್ತದೆ. ತಮ್ಮ ನೋವನ್ನು ಮನೆಯವರೊಂದಿಗೆ ಹೇಳಿಕೊಂಡರೇ ಅವರೆಲ್ಲಿ ಬೇಸರಗೊಳ್ಳುತ್ತಾರೋ ಎಂದು ಸಹಿಸಿಕೊಳ್ಳುವಿಕೆಗೆ ಮತ್ತೆ ಮತ್ತೆ ತನ್ನನ್ನು ಒಗ್ಗಿಸಿಕೊಳ್ಳುತ್ತಾನೆ ಗಂಡು. 
 
ಹೆಣ್ಣಿನ ಬದುಕಿನಲ್ಲಿ ಹೇಗೆ ಕಷ್ಟವಿದೆಯೋ ಗಂಡು ಕೂಡ ಈ ಕಷ್ಟಗಳಿಗೆ ಹೊರತಾಗಿಲ್ಲ.ಅವನ ಜಗತ್ತಿನಲ್ಲಿ ಅವನದೇ ಆದ ಕಷ್ಟಗಳಿವೆ, ನೋವುಗಳಿವೆ. ತನ್ನ ಸುತ್ತ ಮೌನದ ಕೋಟೆ ಕಟ್ಟಿಕೊಂಡೇ ಅವನು ಎಲ್ಲವನ್ನು, ಎಲ್ಲರನ್ನು ನಿಭಾಯಿಸುತ್ತಾನೆ. ಗಂಡಾಗಿ ಹುಟ್ಟಿ ಬದುಕುವುದು ಸುಲಭವೇನಲ್ಲ!

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಚಿಸಿ ಟೀಕೆಗೆ ಗುರಿಯಾದ ರಾಹುಲ್ ಗಾಂಧಿ!