ಆತ ಹುಟ್ಟಿನಿಂದ ಅನಾಥನಾಗಿ ಬೆಳೆದ. ತನ್ನ ಜೀವನದಲ್ಲಿ ಆತ ಅನುಭವಿಸಿದ ಕಷ್ಟಗಳೆಲ್ಲ 18 ವರ್ಷದ ಬಳಿಕ ಕೊನೆಗೊಂಡಿದೆ. ತುತ್ತು ಅನ್ನಕ್ಕಾಗಿ ತತ್ವಾರ ಪಡುತ್ತಿದ್ದ ಆತನ ಬದುಕಲ್ಲಿ ಭಾಗ್ಯೋದಯವಾಗಿದೆ. ಆತನೀಗ ಬರೊಬ್ಬರಿ 5 ಕೋಟಿ ಆಸ್ತಿಗೆ ಒಡೆಯನಾಗಿದ್ದಾನೆ. ಇದು ಸಿನಿಮಾ ಕಥೆಯಲ್ಲ. ಗುಜರಾತ್ನ ರಾಜಕೋಟ್ನಲ್ಲಿ ನಡೆದ ನೈಜ ಘಟನೆ ಇದು.
ಕಳೆದ 9ವರ್ಷಗಳಿಂದ ವಿಶೇಷ ಬಾಲಮಂದಿರದಲ್ಲಿ ವಾಸಿಸುತ್ತಿದ್ದ ರಾಹುಲ್ ಎಂಬ ಯುವಕನನ್ನು ದತ್ತು ಪಡೆಯಲು ಸಿರಿವಂತ ಉದ್ಯಮಿಗಳೊಬ್ಬರು ನಿರ್ಧರಿಸಿದ್ದು ತಂದೆ-ತಾಯಿ ಪ್ರೀತಿ ಜತೆಗೆ ಧನಿಕನಾಗುವ ಭಾಗ್ಯವು ಕೂಡ ಆತನನ್ನು ಅರಸಿ ಬಂದಿದೆ. ಈತನ ಉತ್ತಮ ನಡತೆ ಆತನಿಗೆ ಈ ಹೊಸ ಜೀವನವನ್ನು ನೀಡಿದೆ. 18 ವರ್ಷದವನಾಗಿರುವ ಆತ ಓದಿನಲ್ಲೂ ಅಪಾರ ಬುದ್ಧಿವಂತನಾಗಿದ್ದು ಜಾಮನಗರದ ತಾಮ್ರ ಲೋಹದ ಉದ್ಯಮಿಯೊಬ್ಬರು ಆತನನ್ನು ದತ್ತು ಪಡೆದುಕೊಂಡಿದ್ದಾರೆ.
ಕಳೆದ 30 ವರ್ಷಗಳಿಂದ ಮಕ್ಕಳಿಲ್ಲದ ಕೊರಗನ್ನು ಎದುರಿಸುತ್ತಿದ್ದ ಉದ್ಯಮಿ ಮಾವ್ಜೀ ಕಟೇಶಿಯಾ ಮತ್ತು ರಮಾ ದಂಪತಿ ದತ್ತು ಪಡೆಯಲು ಬುದ್ಧಿವಂತ ಹಾಗೂ ಸುಸಂಸ್ಕೃತ ಯುವಕನ ಶೋಧದಲ್ಲಿದ್ದರು. ಅನಾಥಾಶ್ರಮದಲ್ಲಿ ರಾಹುಲ್ನನ್ನು ನೋಡಿದ ಅವರು ಪ್ರಥಮ ಭೇಟಿಯಲ್ಲೇ ಆತನ ಪ್ರಭಾವಕ್ಕೆ ಒಳಗಾದರು.
ಕಟೇಶಿಯಾ ವಾರ್ಷಿಕವಾಗಿ 5 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಅವರಿಗೆ ನಾಲ್ವರು ಸಹೋದರರಿದ್ದು ಅವರೆಲ್ಲರೂ ಅರ್ಥಿಕವಾಗಿ ಸದೃಢರಾಗಿದ್ದಾರೆ.