Select Your Language

Notifications

webdunia
webdunia
webdunia
webdunia

ಸಚಿನ್ ತೆಂಡುಲ್ಕರ್ ಕ್ರಿಕೆಟ್ ದೇವರಾಗಿದ್ದು ಇದೇ ಕಾರಣಕ್ಕೆ!

ಸಚಿನ್ ತೆಂಡುಲ್ಕರ್ ಕ್ರಿಕೆಟ್ ದೇವರಾಗಿದ್ದು ಇದೇ ಕಾರಣಕ್ಕೆ!
Bangalore , ಭಾನುವಾರ, 18 ಜೂನ್ 2017 (06:31 IST)
ಬೆಂಗಳೂರು: ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವೆಂದರೆ ಎಲ್ಲರ ಕಣ್ಣು ಒಬ್ಬನೇ ಆಟಗಾರನ ಮೇಲೆ ದೃಷ್ಟಿ ಇರುತ್ತಿತ್ತು. ಅವರೇ ಸಚಿನ್ ತೆಂಡುಲ್ಕರ್!


 
ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು ಇದೇ ತಂಡದ ಎದುರು ಎನ್ನುವ ಕಾರಣಕ್ಕೋ ಏನೋ. ಸಚಿನ್ ಗೆ ತಮ್ಮ ಆರಂಭದ ಕಾಲದಿಂದಲೂ ಪಾಕಿಸ್ತಾನದ ವಿರುದ್ಧ ಆಡುವಾಗ ಅದೇನೋ ಉತ್ಸಾಹ. ಪಾಕಿಸ್ತಾನದ ವಿರುದ್ಧ ಅವರು ಸಣ್ಣ ಮೊತ್ತಕ್ಕೆ ಔಟಾಗಿದ್ದು ತೀರಾ ವಿರಳ.

ಅತ್ತ ಪಾಕಿಸ್ತಾನಿಯರಿಗೂ ಅಷ್ಟೇ, ವಕಾರ್ ಯೂನಸ್, ಇಮ್ರಾನ್ ಖಾನ್ ರಿಂದ ಹಿಡಿದು ಶೊಯೇಬ್ ಅಖ್ತರ್ ವರೆಗೂ ಎಲ್ಲರಿಗೂ ಸಚಿನ್ ವಿಕೆಟ್ ಪಡೆಯುವುದೇ ಗುರಿಯಾಗಿರುತ್ತಿತ್ತು. ನೀವೇ ಗಮನಿಸಿ. ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಾಗಲೆಲ್ಲಾ ಸಚಿನ್ ಕೊಡುಗೆ ದೊಡ್ಡದಿರುತ್ತಿತ್ತು.

ಶಾರ್ಜಾ ಕಪ್ ನಿಂದ ಹಿಡಿದು, ಅವರು ಪಾಕ್ ವಿರುದ್ಧ ಆಡಿದ ಕೊನೆಯ ಪಂದ್ಯದವರೆಗೂ ಅವರ ಆಟ ಇತರರಿಗೆ ಪಾಠ ಪುಸ್ತಕದಂತಿತ್ತು. ಪ್ರತೀ ಬಾರಿ ಸಚಿನ್ ಕೆಣಕಿ ಸೋತರೂ, ಮತ್ತೆ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದ ಪಾಕ್ ಆಟಗಾರರು ನಮಗೆ ವಿರೋಧಿ ಸೈನಿಕರಂತೇ ಕಾಣುತ್ತಿದ್ದರು. ಅವರೆಲ್ಲರನ್ನೂ ಹೊಡೆದೋಡಿಸುತ್ತಿದ್ದ ಏಕಾಂಗಿ ವೀರನಂತೆ ಸಚಿನ್ ರನ್ನು ಕಾಣುತ್ತಿದ್ದೆವು.

ನೀನು ಯಾವ ಮಹಾನ್ ಲೆಕ್ಕ ನಿನ್ನನ್ನು ಶೂನ್ಯಕ್ಕೆ ಔಟ್ ಮಾಡುತ್ತೇನೆ ಎಂದು ಶೊಯೇಬ್ ಅಖ್ತರ್ ದ. ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಪಂದ್ಯಕ್ಕೂ ಮೊದಲು ಸಚಿನ್ ಗೆ ಸವಾಲೆಸೆದಿದ್ದರು. ಅದೇ ಪಂದ್ಯದಲ್ಲಿ ಅವರದೇ ಎಸೆತದಲ್ಲಿ ಪಾಯಿಂಟ್ ಕ್ಷೇತ್ರಕ್ಕೆ ಬಾರಿಸಿದ ಸಿಕ್ಸರ್ ಇಂದಿಗೂ ಕ್ರಿಕೆಟ್ ಪ್ರಿಯರು ಸ್ಮರಿಸಿಕೊಳ್ಳುತ್ತಾರೆ.

ಅಂದು ಅವರು ಸ್ನಾಯು ಸೆಳೆತಕ್ಕೊಳಗಾಗದೇ ಇದ್ದಿದ್ದರೆ ಶತಕದಂಚಿನಲ್ಲಿ ಎಡವುತ್ತಿರಲಿಲ್ಲವೇನೋ. ಆದರೆ 90 ರನ್ ಗಳಿಸಿ ಔಟಾಗುವಾಗ ಅವರು ಪಾಕ್ ದಾಳಿಯನ್ನು ಸಾಕಷ್ಟು ಪುಡಿಗಟ್ಟಿಯಾಗಿತ್ತು. ಈ ಎರಡೂ ತಂಡಗಳು ಕ್ರಿಕೆಟ್ ಆಡುವಾಗ ಅಭಿಮಾನಿಗಳು ದೇವರ ಮೊರೆ ಹೋಗಿ ತಮ್ಮ ನಂಬಿಕೆ ಪ್ರಕಾರ ಪೂಜೆ ಸಲ್ಲಿಸುತ್ತಾರೆ. ಬಹುಶಃ ಪ್ರತೀ ಬಾರಿ ಪಾಕ್ ದಾಳಿಯಿಂದ ಕಾಪಾಡುತ್ತಿದ್ದುದಕ್ಕೇ ಸಚಿನ್ ಅಭಿಮಾನಿಗಳ ಪಾಲಿಗೆ ದೇವರಾದರು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೆಲುವೊಂದೇ ಗುರಿಯಾಗಲಿ