ಮುಂಬೈ: ಒಂದೆಡೆ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಸಿದ್ಧವಾಗುತ್ತಿದ್ದರೆ, ಇತ್ತ ಬಿಸಿಸಿಐನಲ್ಲಿ ಕೋಚ್ ಅನಿಲ್ ಕುಂಬ್ಳೆ ಸ್ಥಾನಕ್ಕೆ ಹೊಸ ಕೋಚ್ ಹುಡುಕಾಟದಲ್ಲಿ ಚಟುವಟಿಕೆಗಳು ಜೋರಾಗಿವೆ.
ಅಷ್ಟಕ್ಕೂ ಬಿಸಿಸಿಐಗೆ ಯಶಸ್ವೀ ಕೋಚ್ ಕುಂಬ್ಳೆ ಮೇಲೆ ಅಸಮಾಧಾನವೇಕೆ? ಅಂತಹದ್ದನ್ನೇನು ಮಾಡಿದರು ಕುಂಬ್ಳೆ? ಭಾರತ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಕರೆದೊಯ್ದಿದ್ದೇ ತಪ್ಪೇ? ಆದರೆ ಆಟಗಾರರ ಪರ ಧ್ವನಿಯೆತ್ತಿದ ರೀತಿ ಬಿಸಿಸಿಐಗೆ ಇಷ್ಟವಾಗಲಿಲ್ಲ ಎನ್ನಲಾಗುತ್ತಿದೆ.
ಆಟಗಾರರಾಗಿದ್ದ ಕುಂಬ್ಳೆಗೆ ಕ್ರಿಕೆಟಿಗರ ಸಮಸ್ಯೆಗಳ ಅರಿವಿತ್ತು. ಹೀಗಾಗಿ ಅವರು ಏನೇ ಸಮಸ್ಯೆಯಿದ್ದರೂ ತಾವೇ ಮುಂದೆ ನಿಂತು ಬಿಸಿಸಿಐ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದರು. ಅದೂ ಸುಪ್ರೀಂಕೋರ್ಟ್ ನಿಂದ ನಿಯೋಜಿತವಾಗಿರುವ ಆಡಳಿತಾಧಿಕಾರಿಗಳನ್ನು ಕುಂಬ್ಳೆ ಸಂಪರ್ಕಿಸುತ್ತಿದ್ದುದು ಪದಾದಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಇನ್ನು, ಸಂಭಾವನೆ ವಿಚಾರದಲ್ಲಿ ಶೇ. 150 ರಷ್ಟು ಹೆಚ್ಚಳ ಮಾಡಬೇಕೆಂದು ಕುಂಬ್ಳೆ ವಾದಿಸಿದ್ದರು. ಅಲ್ಲದೆ, ಕೋಚ್ ಆಗಿದ್ದ ತಮ್ಮ ಸಂಭಾವನೆಯನ್ನು 8 ಕೋಟಿಗೆ ಏರಿಕೆ ಮಾಡಬೇಕು ಹಾಗೂ ನಾಯಕನಿಗೆ ಹೆಚ್ಚಿನ ಜವಾಬ್ದಾರಿಗಳಿರುವುದರಿಂದ ಆತನ ಸಂಭಾವನೆಯಲ್ಲಿ ಶೇ. 25 ರಷ್ಟು ಹೆಚ್ಚಳ ಮಾಡಬೇಕೆಂದು ಕುಂಬ್ಳೆ ಬೇಡಿಕೆ ಸಲ್ಲಿಸಿದ್ದರು.
ಇದಲ್ಲದೆ, ಕೋಚ್ ಆಗಿದ್ದ ತಮ್ಮನ್ನು ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿ ಮಾಡಬೇಕೆಂದು ಕುಂಬ್ಳೆ ಆಗ್ರಹಿಸಿದ್ದರು. ಇದು ಬಿಸಿಸಿಐ ದೊರೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ತಮ್ಮ ಅಧಿಕಾರ ಮೀರಿ ವರ್ತಿಸುತ್ತಿದ್ದಾರೆ ಎಂದು ಅವರ ಮೇಲೆ ಸಿಟ್ಟಿಗೆದ್ದಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವಾಗಲೇ ಕುಂಬ್ಳೆಗೆ ಮುಜುಗರ ತರುವ ರೀತಿಯಲ್ಲಿ ಬೇರೆ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಕುಂಬ್ಳೆಯೇ ಕೋಚ್ ಆಗಿ ಮುಂದುವರಿಯಬೇಕೆಂದು ಬಯಸಿದರೂ, ಹೊಸದಾಗಿ ಅರ್ಜಿ ಸಲ್ಲಿಸಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ