Select Your Language

Notifications

webdunia
webdunia
webdunia
webdunia

ಸಚಿನ್ ನಿವೃತ್ತಿ ನಿರ್ಧಾರದ ಹಿಂದಿನ ಗುಟ್ಟು ರಟ್ಟು

ಸಚಿನ್ ನಿವೃತ್ತಿ ನಿರ್ಧಾರದ ಹಿಂದಿನ ಗುಟ್ಟು ರಟ್ಟು
ನವದೆಹಲಿ , ಗುರುವಾರ, 22 ಸೆಪ್ಟಂಬರ್ 2016 (15:20 IST)
ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮೇಲೆ ಬಿಸಿಸಿಐ ಒತ್ತಡ ಹೇರಿತ್ತುಎಂಬ ಆಘಾತಕಾರಿ ಸತ್ಯವೀಗ ಬಯಲಾಗಿದೆ. 
ಕಿವೀಸ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಘೋಷಿಸಿದ ಬಳಿಕ ತಮ್ಮ ಅಂತಿಮ ಪತ್ರಿಕಾಗೋಷ್ಠಿಯನ್ನು ನಡೆಸಿದ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಅವರಿಗೆ ಕೆಲವು ಕ್ಲಿಷ್ಟಕರ ಪ್ರಶ್ನೆಗಳನ್ನು ಕೇಳಲಾಗಿತ್ತು. ನಾಲ್ಕು ವರ್ಷಗಳ ತಮ್ಮ ಕಾರ್ಯಾವಧಿಯನ್ನು ಪೂರ್ಣಗೊಳಿಸಿ ಹೊರ ನಡೆಯುತ್ತಿರುವ ಪಾಟೀಲ್ ಅವರಿಗೆ ಈ ಪ್ರಶ್ನೆಗಳು ಎದುರಾಗುವುದು ಮೊದಲೇ ನಿಶ್ಚಿತವಾಗಿದ್ದಂತಿತ್ತು. ಹೀಗಾಗಿಯೇ ಅವರು ಬಹಳ ಎಚ್ಚರಿಕೆಯಿಂದ ಈ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಬಿಸಿಸಿಐ ಮತ್ತು ಆಯ್ಕೆ ಸಮಿತಿ ನಡುವಿನ ಕೆಲ ವಿಷಯಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳಬೇಕು.ಅದನ್ನು ಹೊರ ಹಾಕುವಂತಿಲ್ಲ ಎಂದು ಅವರು ಕಳೆದ ವಾರ ಹೇಳಿದ್ದರು.
 
ತಮ್ಮ ಸ್ಥಾನವನ್ನು ಅಧಿಕೃತವಾಗಿ ಎಮ್‌ಎಸ್‌ಕೆ ಪ್ರಸಾದ್ ವಹಿಸಿಕೊಂಡ ಬಳಿಕ ಪಾಟೀಲ್ ಹೊರಗೆಡವಿದ್ದ ಸತ್ಯ ಮಾತ್ರ ಆಘಾತಕಾರಿಯಾಗಿತ್ತು. ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಅವರನ್ನು ತಂಡದಿಂದ ಕೈ ಬಿಡಲು ಆಯ್ಕೆ ಸಮಿತಿ ನಿರ್ಧರಿಸಿತ್ತು ಎಂದಿದ್ದಾರೆ. 
 
ಡಿಸೆಂಬರ್ 12, 2012ರಂದು ನಾವು ಸಚಿನ್ ಅವರನ್ನು ಭೇಟಿಯಾಗಿ ನಿಮ್ಮ ಭವಿಷ್ಯದ ಯೋಜನೆಗಳೇನು ಎಂದು ಕೇಳಿದೆವು. ಅವರು ನಿವೃತ್ತಿ ಬಗ್ಗೆ ಯೋಚಿಸಿಲ್ಲ ಎಂದರು. ಆದರೆ ಆಯ್ಕೆ ಸಮಿತಿ ಸಚಿನ್ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಂಡಿತ್ತು ಮತ್ತು ಈ ಕುರಿತು ಬಿಸಿಸಿಐಗೂ ಮಾಹಿತಿ ನೀಡಿತ್ತು. ಆಯ್ಕೆ ಸಮಿತಿಯೊಂದಿಗಿನ ತಮ್ಮ ಮುಂದಿನ ಭೇಟಿಯಲ್ಲಿ ತಮ್ಮನ್ನು ಕೈ ಬಿಡುವುದು ನಿಶ್ಚಿತ ಎಂಬ ಸುದ್ದಿ ಹೊರಬೀಳುವುದು ಸಚಿನ್ ಅವರಿಗೆ ಖಚಿತವಾಗಿತ್ತು. ನಮಗೆ ದೂರವಾಣಿ ಕರೆ ಮಾಡಿದ ಸಚಿನ್ ತಾವು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವುದಾಗಿ ತಮ್ಮ ನಿರ್ಧಾರ ಹೇಳಿದರು. ಆಗ ಅವರು ತಾವು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುತ್ತೇನೆ ಎಂದು ಘೋಷಿಸದಿದ್ದರೆ ಅವರನ್ನು ಖಚಿತವಾಗಿ ತಂಡದಿಂದ ಕೈ ಬಿಡಲಾಗುತ್ತಿತ್ತು ಎಂದು ಪಾಟೀಲ್ ಬಹುದೊಡ್ಡ ಗುಟ್ಟನ್ನು ರಟ್ಟುಗೊಳಿಸಿದ್ದಾರೆ. 
 
ನಿವೃತ್ತಿ ಯೋಜನೆಗಳ ಬಗ್ಗೆ ನಿಮ್ಮ ನಿಲುವೇನು ಎಂದು ಸಚಿನ್ ಅವರನ್ನು ಕೇಳಿದ್ದು  ತಮ್ಮ ಕಾರ್ಯಾವಧಿಯ ಅತ್ಯಂತ ನೋವಿನ ನೆನಪು ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಮಹಾನ್ ನಾಯಕ: ಬ್ರೆಟ್ ಲೀ