ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಭಾರತ 17 ಓವರುಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 106 ರನ್ನು ಪೇರಿಸುವಷ್ಟರಲ್ಲಿ ಆಟ ಮತ್ತೊಮ್ಮೆ ಮಳೆಯ ಆಡಚಣೆಗೊಳಗಾಗಿದೆ. ಮಳೆಯಿಂದ ಆಟ ನಿಂತಾಗ ಸೆಹ್ವಾಗ್ (61) ಮತ್ತು ಗಂಭೀರ್ (30) ಕ್ರೀಸಿನಲ್ಲಿದ್ದರು.
14 ಓವರ್ ಆಗುತ್ತಿದ್ದಂತೆಯೇ ಮಳೆ ಸುರಿದು ಆಟವನ್ನು ಸುಮಾರು ಒಂದು ತಾಸು ಸ್ಥಗಿತಗೊಳಿಸಿದ ಪರಿಣಾಮವಾಗಿ ಪ್ರತಿ ಇನ್ನಿಂಗ್ಸನ್ನು 44 ಓವರುಗಳಿಗೆ ಕಡಿತಗೊಳಿಸಲಾಗಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಭಾರತವನ್ನು ಬ್ಯಾಟಿಂಗ್ಗೆ ಮಾಡಲು ಹೇಳಿತು. ಆರಂಭಿಕ ಆಟಗಾರರಾಗಿ ಇಳಿದ ಸಚಿನ್ ತೆಂಡುಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಆಕ್ರಮಣಕಾರಿ ಆಟ ಪ್ರದರ್ಶಿಸಿ, ಭಾರತದ ರನ್ ಗತಿಗೆ ಆರಂಭಿಕ ಚುರುಕುತನ ನೀಡಿದರು.
ಸರಣಿ ಜೀವಂತವಿರಿಸಲು ಮಾಡು ಇಲ್ಲವೇ ಮಡಿ ಪಂದ್ಯವಾಗಿರುವ ಇಂಗ್ಲೆಂಡ್ಗೆ ಬ್ರಾಡ್ ಮೊದಲ ಯಶಸ್ಸು ತಂದು ಕೊಟ್ಟರು. ಬ್ರಾಡ್ ಸಚಿನ್ ತೆಂಡುಲ್ಕರ್ (11)ರನ್ನು ಬೌಲ್ಡ್ ಮಾಡಿಸಿದರು.
ತದನಂತರ ಬಂದ ಗೌತಂ ಗಂಭೀರ್, ಸೆಹ್ವಾಗ್ ಜತೆಗೂಡಿ ಪ್ರಸಕ್ತ ಇಂಗ್ಲೆಂಡ್ ಬೌಲರುಗಳನ್ನು ಎರ್ರಾಬಿರ್ರಿಯಾಗಿ ದಂಡಿಸುತ್ತಿದ್ದಾರೆ. ಈ ಕಡೆ ಸೆಹ್ವಾಗ್ ತಮ್ಮ ಎಂದಿನ ಶೈಲಿಯಲ್ಲಿ ಹೊಡೆ ಬಡಿ ಆಟಕ್ಕೆ ಮೊರೆ ಹೋಗಿದ್ದು, ಇಂಗ್ಲೆಂಡ್ ಪಾಳಯದಲ್ಲಿ ಆತಂಕವನ್ನು ಮೂಡಿಸಿದ್ದಾರೆ.
ಭಾರತದ ಪಾಳಯದಲ್ಲಿ ರೋಹಿತ್ ಶರ್ಮಾ ಬದಲಿಗೆ ಸಚಿನ್ ತೆಂಡುಲ್ಕರ್ ಸ್ಥಾನ ಪಡೆದಿದ್ದರೆ, ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.