ಹಿರಿಯ ಆಟಗಾರರನ್ನು ಏಕದಿನ ತಂಡದಿಂದ ಕೈ ಬಿಟ್ಟದ್ದು ಆಯ್ಕೆ ಮಂಡಳಿಯ ಉತ್ತಮ ನಿರ್ಧಾರ ಎಂದು ಆಯ್ಕೆ ಮಂಡಳಿಯ ಹಿರಿಯ ಸದಸ್ಯ ದಿಲೀಪ್ ವೆಂಗ್ಸರ್ಕಾರ್ ಪುನರುಚ್ಚರಿಸಿದ್ದಾರೆ.
ಅವರು, ಹಿರಿಯ ಆಟಗಾರರನ್ನು ಕೈ ಬಿಟ್ಟಿರುವುದನ್ನು ಸಮರ್ಥಿಸುವ ಜೊತೆಗೆ, ಈಗ ಆಯ್ಕೆ ಮಾಡಲಾಗಿರುವ ಯುವ ಆಟಗಾರರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.
'ನಾವು ಭವಿಷ್ಯದ ಕಡೆಗೆ ನೋಡುತ್ತಿದ್ದೇವೆ. ಅದಕ್ಕಾಗಿ ಹಿರಿಯರನ್ನು ಕೈ ಬಿಟ್ಟಿದ್ದೇವೆ. ಆಟಗಾರನ ಎರಡು ತಿಂಗಳ ಹಿಂದಿನ ಸಾಧನೆಯನ್ನು ಪರಿಗಣಿಸಿ ತಂಡಕ್ಕೆ ಆಯ್ಕೆ ಮಾಡುವುದು ಸರಿಯಾ?' ಎಂದು ಪ್ರಶ್ನಿಸಿದ್ದಾರೆ.
'ನಾನು ಮುಂದಿನ ದಿನಗಳಲ್ಲಿ ಆಯ್ಕೆ ಮಂಡಳಿಯ ಸದಸ್ಯ ಸ್ಥಾನದಲ್ಲಿ ಇಲ್ಲದಿರಬಹುದು. ಆದರೆ ನಮ್ಮ ಗುರಿ ಭಾರತ ತಂಡವನ್ನು ಒಂದು ಉತ್ತಮ ತಂಡವಾಗಿ ರೂಪಿಸುವುದು. ಇದಕ್ಕಾಗಿಯೇ ಸದ್ಯದ ಸರಣಿಗೆ ಸಂತುಲಿತ ಆಟಗಾರರಿರುವ ತಂಡವನ್ನು ನೀಡಿದ್ದೇವೆ' ಎಂದು ಅವರು ಅಭಿಪ್ರಾಯಪಟ್ಟರು.
ಆದರೆ, ಗಂಗೂಲಿಯನ್ನು ಹೊರಗಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ವೆಂಗ್ಸರ್ಕಾರ್ ಹಿಂಜರಿದರು.
'ಪ್ರಸ್ತುತ, ಭಾರತ ತಂಡವು ಸ್ಥಾನಪಟ್ಟಿಯಲ್ಲಿ 7ನೇ ಸ್ಥಾನದಿಂದ 2 ನೇ ಸ್ಥಾನಕ್ಕೆ ಏರಿದೆ. ಇದಕ್ಕೆ ಆಯ್ಕೆ ಮಂಡಳಿಯ ಶ್ರಮವೇ ಕಾರಣ ಎಂಬುದನ್ನು ಅವರು ನೆನಪಿಸಿದರು.