Publish Date: Thu, 11 Jul 2019 (07:32 IST)
Updated Date: Thu, 11 Jul 2019 (07:35 IST)
ಲಂಡನ್: ವಿಶ್ವಕಪ್ 2019 ರಲ್ಲಿ ಚಾಂಪಿಯನ್ ಆಗುವ ಕನಸು ಹೊತ್ತು ಟೂರ್ನಮೆಂಟ್ ಆರಂಭಿಸಿದ್ದ ಭಾರತ ಸೆಮಿಫೈನಲ್ ನಲ್ಲೇ ಹೊರಬಿದ್ದು ಆಘಾತ ಅನುಭವಿಸಿದೆ.
ಕೇವಲ 240 ರನ್ ಗಳ ಗುರಿ ಬೆನ್ನತ್ತಲಾಗದೇ ಆರಂಭದ 40 ನಿಮಿಷ ಕೆಟ್ಟದಾಗಿ ಆಡಿ ಟೀಂ ಇಂಡಿಯಾ ಪಂದ್ಯ ಕಳೆದುಕೊಂಡು ತನ್ನನ್ನು ತಾನೇ ಹಳಿದುಕೊಳ್ಳುವಂತಾಗಿದೆ. ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜುಜುಬಿ ಮೊತ್ತಕ್ಕೆ ಪೆವಿಲಿಯನ್ ಪೆರೇಡ್ ನಡೆಸಿದ್ದು ಭಾರತಕ್ಕೆ ಕಂಟಕವಾಯಿತು.
ಇದರ ಬೆನ್ನಲ್ಲೇ ತಮ್ಮ ಅನುಭವವನ್ನು ಧಾರೆಯೆರೆದು ಆಡಿದ ಧೋನಿ ರನೌಟ್ ಆದ ಬಾಲ್ ಸುತ್ತ ಈಗ ವಿವಾದ ಹತ್ತಿಕೊಂಡಿದೆ. ಆ ಬಾಲ್ ನಲ್ಲಿ ಆರು ಫೀಲ್ಡರ್ ಗಳು ರಿಂಗ್ ಹೊರಗೆ ಇದ್ದರು. ನಿಯಮದ ಪ್ರಕಾರ ಇದು ತಪ್ಪು. ಹೀಗಿದ್ದ ಸಂದರ್ಭದಲ್ಲಿ ಅಂಪಾಯರ್ ಆ ಬಾಲ್ ನ್ನು ನೋ ಬಾಲ್ ಎಂದು ಘೋಷಿಸಬೇಕಿತ್ತು. ಆದರೆ ಅಂಪಾಯರ್ ಪ್ರಮಾದದಿಂದ ಅದನ್ನು ನೋ ಬಾಲ್ ಘೋಷಿಸಿರಲಿಲ್ಲ. ಒಂದು ವೇಳೆ ನೋ ಬಾಲ್ ಘೋಷಿಸಿದ್ದರೆ ಧೋನಿ ಬಚಾವ್ ಆಗುತ್ತಿದ್ದರು. ಭಾರತಕ್ಕೆ ಗೆಲ್ಲುವ ಅವಕಾಶವಿತ್ತು. ಅದೇನೇ ಇದ್ದರೂ ಈಗ ಭಾರತ ಚಾಂಪಿಯನ್ ಆಗುವ ಅವಕಾಶವನ್ನು ತಾನೇ ಕಳೆದುಕೊಂಡಿತು ಎನ್ನುವುದಂತೂ ಸತ್ಯ.