Publish Date: Sun, 14 Jul 2024 (11:17 IST)
Updated Date: Sun, 14 Jul 2024 (11:19 IST)
ಹರಾರೆ: ಜಿಂಬಾಬ್ವೆ ವಿರುದ್ಧ ನಡೆದ ಟಿ20 ಸರಣಿಯನ್ನು ಭರ್ಜರಿಯಾಗಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಯುವ ಪಡೆ ಭವಿಷ್ಯ ಭದ್ರವಾಗಿದೆ ಎಂದು ಸಾರಿದಂತಾಗಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಟೀಂ ಇಂಡಿಯಾ ಭವಿಷ್ಯ ಏನಾಗಬಹುದು ಎಂಬ ಆತಂಕವಿತ್ತು. ಅದೀಗ ಈ ಸರಣಿಯ ಮೂಲಕ ದೂರವಾಗಿದೆ. ಆರಂಭಿಕರಾಗಿ ಯಶಸ್ವಿ ಜೈಸ್ವಾಲ್-ಶುಬ್ಮನ್ ಗಿಲ್ ಜೋಡಿ ಈ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇನ್ನು, ಮಧ್ಯಮ ಕ್ರಮಾಂಕಕ್ಕೆ ಋತುರಾಜ್ ಗಾಯಕ್ ವಾಡ್, ಸಂಜು ಸ್ಯಾಮ್ಸನ್ ಬಲ ತುಂಬಬಲ್ಲರು. ವಿರಾಟ್ ಕೊಹ್ಲಿಯ ಅನುಪಸ್ಥಿತಿಯನ್ನು ಕಿರು ಮಾದರಿ ಕ್ರಿಕೆಟ್ ನಲ್ಲಿ ತುಂಬುವ ಸಾಮರ್ಥ್ಯ ಋತುರಾಜ್ ಗಾಯಕ್ ವಾಡ್ ಗಿದೆ ಎನ್ನಬಹುದು. ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ತಂಡಕ್ಕೆ ಬಂದರೆ ತಂಡ ಇನ್ನಷ್ಟು ಬಲಗೊಳ್ಳಲಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಷ್ಟು ಈಗಿನ ಯುವ ಕ್ರಿಕೆಟಿಗಲು ಮಾಗಲು ಕೆಲವು ಸಮಯ ಬೇಕಾಗಬಹುದು. ಆದರೆ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಪ್ರಬಲ ತಂಡಗಳೆದುರು ಒಂದಷ್ಟು ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕರೆ, ಈ ಯುವ ಕ್ರಿಕೆಟಿಗರೂ ಒತ್ತಡ ನಿಭಾಯಿಸಲು ಕಲಿಯುತ್ತಾರೆ. ಯಾಕೆಂದರೆ ಟಿ20 ಕ್ರಿಕೆಟ್ ಗೆ ಅನುಭವಿಗಳಿಗಿಂತ ಒತ್ತಡ ನಿಭಾಯಿಸಬಲ್ಲ ಯುವ ಕ್ರಿಕೆಟಿಗರೇ ಹೆಚ್ಚು ಅವಶ್ಯಕ. ಹೀಗಾಗಿ ಟಿ20 ಕ್ರಿಕೆಟ್ ನಲ್ಲಿ ಕೊಹ್ಲಿ, ರೋಹಿತ್ ಅನುಪಸ್ಥಿತಿ ಕಾಡದು ಎಂದೇ ಹೇಳಬಹುದು.