Publish Date: Sat, 27 Apr 2024 (08:09 IST)
Updated Date: Sat, 27 Apr 2024 (08:14 IST)
ದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಗೆ ಇಂದು ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ಇಂದು ನಡೆಯಲಿದೆ. ದೆಹಲಿಯಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಸಂದರ್ಭದಲ್ಲಿಯೇ ತಂಡದ ಘೋಷಣೆಯಾಗಲಿದೆ.
ಜೂನ್ ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಇಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡ ಘೋಷಣೆ ಮಾಡಲಿದ್ದಾರೆ.
ಈಗಾಗಲೇ ಅಜಿತ್ ಅಗರ್ಕರ್, ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಸಭೆ ಸೇರಿ ಭಾರತ ತಂಡವನ್ನು ಅಂತಿಮಗೊಳಿಸಿದ್ದಾರೆ. ಇನ್ನೀಗ ಘೋಷಣೆಯೊಂದೇ ಬಾಕಿಯಿದೆ. ಈ ಬಾರಿ ನಡೆಯುತ್ತಿರುವ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಅವಕಾಶ ಸಿಗಬಹುದೇ ಅಥವಾ ಹಿರಿಯ ಆಟಗಾರರನ್ನು ಬಿಟ್ಟು ಕಿರಿಯ ಆಟಗಾರರಿಗೆ ಮಣೆ ಹಾಕಬಹುದೇ ಇತ್ಯಾದಿ ವಿಚಾರಗಳು ಭಾರೀ ಚರ್ಚೆಯಾಗುತ್ತಿದೆ.
ಮುಖ್ಯವಾಗಿ ಭಾರತ ತಂಡದಲ್ಲಿ ವಿಕೆಟ್ ಕೀಪರ್, ಓಪನರ್ ಸ್ಥಾನಕ್ಕೆ ಭಾರೀ ಪೈಪೋಟಿಯಿದೆ. ವಿಕೆಟ್ ಕೀಪರ್ ಬ್ಯಾಟಿಗ ಸ್ಥಾನಕ್ಕೆ ರಿಷಬ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಕೆಎಲ್ ರಾಹುಲ್ ನಡುವೆ ಸ್ಪರ್ಧೆಯಿದೆ. ಇವರಲ್ಲಿ ಇಬ್ಬರಿಗೆ ಅವಕಾಶ ಸಿಗಬಹುದಾಗಿದೆ. ಇನ್ನು, ಆರಂಭಿಕ ಬ್ಯಾಟಿಗ ಸ್ಥಾನಕ್ಕೆ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್ ನಡುವೆ ಸ್ಪರ್ಧೆಯಿದೆ. ಅಂತಿಮವಾಗಿ ಟೀಂ ಇಂಡಿಯಾದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂದು ಕಾದುನೋಡಬೇಕಿದೆ.