Publish Date: Sun, 08 Mar 2026 (12:20 IST)
Updated Date: Sun, 08 Mar 2026 (12:23 IST)
ಅಹಮದಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬ್ಲಾಕ್ಬಸ್ಟರ್ ಹಣಾಹಣಿಗೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಈ ಮಧ್ಯೆ ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದ ಟಿಕೆಟ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ತವರು ನೆಲದಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವಾಗುವ ಮತ್ತು ಸತತ ಎರಡು ಬಾರಿ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಮೊದಲ ತಂಡವಾಗುವ ಅವಕಾಶವನ್ನು ಹೊಂದಿದೆ.
ಅಹಮದಾಬಾದ್ ನಗರ ಅಪರಾಧ ಶಾಖೆ ಅಧಿಕಾರಿಗಳು ಉಸ್ಮಾನಪುರ ಗುಜರಾತ್ ವಿದ್ಯಾಪೀಠ ಎಸ್.ಟಿ. ಬಸ್ ನಿಲ್ದಾಣದ ಬಳಿ ಬಲೆ ಬೀಸಿತು. ಅಲ್ಲಿ ಇಬ್ಬರು ವ್ಯಕ್ತಿಗಳನ್ನು ತಡೆದು ತಪಾಸಣೆ ನಡೆಸಲಾಯಿತು. ಅವರಿಂದ ಪಂದ್ಯದ ಎಂಟು ಟಿಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಮುಂಚಿತವಾಗಿ ಖರೀದಿಸಿ ಮೂಲ ಬೆಲೆಗಿಂತ ಮೂರು ಪಟ್ಟು ಹೆಚ್ಚು ಮಾರಾಟ ಮಾಡುತ್ತಿದ್ದರು. ಅಭಿಮಾನಿಗಳಿಗೆ ಟಿಕೆಟ್ಗೆ ₹ 10,000 ಶುಲ್ಕ ವಿಧಿಸುತ್ತಿದ್ದರು. ಎಲ್ಲಾ ಟಿಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇಬ್ಬರೂ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ದಂಧೆಯಲ್ಲಿ ವ್ಯಾಪಕ ಜಾಲ ಭಾಗಿಯಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾಳ ಸಂತೆಯಲ್ಲಿ ಟಿಕೆಟ್ ಮಾರಾಟ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಶನಿವಾರ ಎಚ್ಚರಿಕೆ ನೀಡಿದ್ದರು. ಪಂದ್ಯದ ದಿನವೇ ಈ ಬಂಧನಗಳು ನಡೆದಿವೆ. ಅಂತಿಮ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್, ಪಂದ್ಯಕ್ಕೆ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.