ರಾಂಚಿ: ಸಾಮ್ರಾಜ್ಯ ಸ್ಥಾಪಿಸುವ ಮೊದಲು ಭದ್ರ ಕೋಟೆ ಕಟ್ಟಬೇಕು. ಮತ್ತಷ್ಟೇ ಯುದ್ಧ ಮಾಡುವ ಬಗ್ಗೆ ಚಿಂತಿಸಬೇಕು. ಈಗ ಟೀಂ ಇಂಡಿಯಾ ಮಾಡುತ್ತಿರುವುದೂ ಅದನ್ನೇ. ನಿಧಾನಕ್ಕೆ ಇನಿಂಗ್ಸ್ ಕಟ್ಟುತ್ತಿರುವ ಟೀಂ ಇಂಡಿಯಾ ಭೋಜನ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿದೆ.
ಆದಷ್ಟು ವಿಕೆಟ್ ಕಾಯ್ದುಕೊಳ್ಳುವ ಕಡೆಗೆ ಹೆಚ್ಚು ಗಮನ ಕೊಟ್ಟ ಭಾರತೀಯರು, ರನ್ ಗತಿ ಸ್ವಲ್ಪ ನಿಧಾನ ಮಾಡಿದರು. ಭೋಜನ ವಿರಾಮಕ್ಕೆ ಕೆಲವು ಕ್ಷಣಗಳ ಮೊದಲು ಮಿಂಚು ಮಿಂಚಿದಂತೆ ಬೌಂಡರಿಗಳು ಬಂದು ಕೊಂಚ ರನ್ ಗತಿ ಹೆಚ್ಚುವಂತೆ ಮಾಡಿತು. ಬ್ಯಾಟಿಂಗ್ ಗೆ ಸಹಾಯವಾಗುವಂತಹ ಪಿಚ್ ನಲ್ಲಿ ಭಾರತೀಯರನ್ನು ಕಟ್ಟಿ ಹಾಕುವುದು ಸುಲಭವಲ್ಲ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಯಿತು.
ಆರಂಭಿಕ ಮುರಳಿ ವಿಜಯ್ ಸ್ಪಿನ್ನರ್ ಗಳಿಗೆ ಸ್ವೀಪ್ ಶಾಟ್ ಮಾಡುವ ಮೂಲಕವೇ ರನ್ ಗಳಿಸಿದರು. ಆದರೆ ದುರಾದೃಷ್ಟವಶಾತ್ ಶತಕದ ಹಾದಿಯಲ್ಲಿ ಎಡವಿ ಒಕೀಫ್ ಗೆ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಿ ಅವರು 82 ರನ್ ಗಳಿಸಿದ್ದರು. ಅಷ್ಟರಲ್ಲಿ ಅವರು 100 ರನ್ ಜತೆಯಾಟವಾಡಿದ್ದರು. ಆದರೆ ಅವರ ವಿಕೆಟ್ ಕಳೆದುಕೊಳ್ಳುವುದರ ಜತೆಗೆ ಲಂಚ್ ಬ್ರೇಕ್ ಆಯಿತು. ಹೀಗಾಗಿ ಮುಂದಿನ ಸರದಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಗೆ ಇಳಿಯುತ್ತಾರಾ ಎನ್ನುವುದು ಇನ್ನೂ ಸಸ್ಪೆನ್ಸ್ !
ಚೇತೇಶ್ವರ ಪೂಜಾರರದ್ದು ಯಾವಾಗಲೂ ಸಾರಥಿಯ ಪಾತ್ರ. ಹೆಚ್ಚು ಬೌಂಡರಿ ಬಾರಿಸುವುದಿಲ್ಲ. ಎತ್ತಿ ಹೊಡೆಯುವ ಸಾಹಸ ಮಾಡುವುದಿಲ್ಲ. ಆದರೆ ಎದುರಾಳಿಗೆ ನುಂಗಲಾರದ ಬಿಸಿ ತುಪ್ಪವಾಗುತ್ತಾರೆ. ಇಂದೂ ಹಾಗೇ, 139 ಎಸೆತ ಎದುರಿಸಿದ 40 ರನ್ ಗಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ