Publish Date: Sat, 23 Sep 2023 (17:39 IST)
Updated Date: Sat, 23 Sep 2023 (17:45 IST)
ವಾರಣಾಸಿ: ಪ್ರಧಾನಿ ಮೋದಿ ಸಂಸದರಾಗಿರುವ ವಾರಣಾಸಿಯಲ್ಲಿ ಬೃಹತ್ ಕ್ರಿಕೆಟ್ ಕ್ರೀಡಾಂಗಣವೊಂದನ್ನು ನಿರ್ಮಿಸಲು ಇಂದು ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರ ಮತ್ತು ಬಿಸಿಸಿಐ ಸಹಯೋಗದಲ್ಲಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತದೆ. ಈ ಕ್ರೀಡಾಂಗಣ ಭಗವಾನ್ ಶಿವನಿಂದ ಪ್ರೇರಿತವಾಗಿದ್ದು, ಅರ್ಧಚಂದ್ರಾಕೃತಿಯ ಛಾವಣಿ, ತ್ರಿಶೂಲದ ಆಕಾರದ ಫ್ಲಡ್ ಲೈಟ್ ಗಳನ್ನು ಒಳಗೊಳ್ಳಲಿದೆ. 2025 ರ ಡಿಸೆಂಬರ್ ಒಳಗಾಗಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಪೂರ್ತಿಯಾಗುವ ಯೋಜನೆ ಹಾಕಿಕೊಳ್ಳಲಾಗಿದೆ.
ಈ ಮೈದಾನ ನಿರ್ಮಾಣಕ್ಕೆ ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿದೆ. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಗಣ್ಯರು ಆಗಮಿಸಿದ್ದರು. ಇನ್ನು, ಕಾರ್ಯಕ್ರಮದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ನಮೋ ಎಂಬ ಹೆಸರಿನ ಟೀಂ ಇಂಡಿಯಾ ಜೆರ್ಸಿಯೊಂದನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ.