Publish Date: Thu, 28 Nov 2019 (09:02 IST)
Updated Date: Thu, 28 Nov 2019 (09:05 IST)
ಮುಂಬೈ: ಟೀಂ ಇಂಡಿಯಾಗೆ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿಲ್ಲ ಎಂದು ಅಭಿಮಾನಿಗಳು, ಮಾಜಿ ಕ್ರಿಕೆಟಿಗರಿಂದ ಟೀಕೆಗೊಳಗಾಗುತ್ತಿದ್ದರೂ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ತಮ್ಮ ಪ್ರದರ್ಶನವನ್ನು ತಾವೇ ಕೊಂಡಾಡಿದ್ದಾರೆ.
ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಅವಧಿ ಕೊನೆಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಮಾಧ್ಯಮದೊಂದಿಗೆ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿರುವ ಪ್ರಸಾದ್, ನಮ್ಮ ಕೆಲಸ ಬಿಸಿಸಿಐ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಇಷ್ಟವಾಗಿದೆ ಎಂದಿದ್ದಾರೆ.
ಕಡಿಮೆ ಪಂದ್ಯವಾಡಿರುವ ಅನುಭವವಿರುವ ಆಯ್ಕೆ ಸಮಿತಿ ಸದಸ್ಯರನ್ನು ವಜಾಗೊಳಿಸಿ ಅರ್ಹರನ್ನು ನೇಮಿಸಿ ಎಂದು ಇತ್ತೀಚೆಗಷ್ಟೇ ಹರ್ಭಜನ್ ಸಿಂಗ್, ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಟೀಕೆ ಮಾಡಿದ್ದರು.
‘ಜನ ಏನು ಬೇಕಾದರೂ ಟೀಕೆ ಮಾಡಲಿ. ಟೀಂ ಇಂಡಿಯಾ, ಭಾರತ ಎ ತಂಡದ ಪ್ರದರ್ಶನಗಳೇ ನಮ್ಮ ಸಾಧನೆ ತೋರಿಸುತ್ತಿದೆ. ನಾನು ಧೋನಿ ಮತ್ತು ವಿರಾಟ್ ಕೊಹ್ಲಿ ಜತೆಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನನ್ನ ಅವಧಿಯಲ್ಲಿ ದಿಗ್ಗಜ ಕ್ರಿಕೆಟಿಗರ ಸಲಹೆ ಪಡೆಯುತ್ತಿದ್ದೆ. ನನ್ನ ಬಗ್ಗೆ ಬರುವ ಟೀಕೆಗಳಿಗೆ ನಾನು ತಲೆಕೆಡಿಸಿಕೊಂಡರೆ ಕೆಲಸ ಮಾಡಲು ಆಗುತ್ತಿರಲಿಲ್ಲ’ ಎಂದು ಪ್ರಸಾದ್ ಹೇಳಿಕೊಂಡಿದ್ದಾರೆ.