Publish Date: Sat, 05 Oct 2019 (08:57 IST)
Updated Date: Sat, 05 Oct 2019 (09:02 IST)
ಬೆಂಗಳೂರು: ಕೆಎಲ್ ರಾಹುಲ್ ಕೂಡಾ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಾಗ ಭಾರೀ ನಿರೀಕ್ಷೆ ಹುಟ್ಟಿಸಿದ್ದರು. ಅವರ ಬ್ಯಾಟಿಂಗ್ ನೋಡಿ ರಾಹುಲ್ ದ್ರಾವಿಡ್ ಗೆ ಹೋಲಿಕೆ ಮಾಡಲಾರಂಭಿಸಿದರು. ಈ ಅತಿಯಾದ ನಿರೀಕ್ಷೆಗಳೇ ರಾಹುಲ್ ಬ್ಯಾಟಿಂಗ್ ಹಳ್ಳ ಹಿಡಿಯುವಂತೆ ಮಾಡಿತು ಎಂದರೆ ತಪ್ಪಾಗಲಾರದೇನೋ.
ಈಗ ಮತ್ತೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ. ಚೊಚ್ಚಲ ದ್ವಿಶತಕವನ್ನೂ ಸಿಡಿಸಿದ್ದಾರೆ. ಕ್ರಿಕೆಟ್ ದಿಗ್ಗಜರಿಂದಲೇ ಹೊಗಳಿಸಿಕೊಳ್ಳುತ್ತಿದ್ದಾರೆ.
ಆದರೆ ಈ ಅತಿಯಾದ ಹೊಗಳಿಕೆ, ನಿರೀಕ್ಷೆಗಳಲ್ಲಿ ಮಯಾಂಕ್ ಕೂಡಾ ಮಂಕು ಬಡಿದವರಂತಾಗದೇ ಇದ್ದರೆ ಸಾಕು ಎಂಬುದೇ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆ. ಯಾವುದೇ ಆಟಗಾರನಿಗೂ ಉತ್ತಮವಾಗಿ ಆಡಬೇಕೆಂದರೆ ಒತ್ತಡದ ಗಂಟು ಬೆನ್ನ ಮೇಲೆ ಇರಬಾರದು. ಅದು ಮಯಾಂಕ್ ಗೂ ಇರಲಿ. ಯಾಕೆಂದರೆ ಅವರಿನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಳವೂರುತ್ತಿದ್ದಾರೆ. ಈಗಲೇ ಅತಿಯಾದ ನಿರೀಕ್ಷೆಯ ಭಾರ ಹೊರಿಸಿದರೆ ಅದನ್ನು ಹೊರುವುದು ಅವರಿಗೆ ಕಷ್ಟವಾಗಬಹುದು ಎಂಬುದನ್ನು ನಾವು ಮರೆಯುವಂತಿಲ್ಲ.