Publish Date: Mon, 16 Dec 2019 (10:00 IST)
Updated Date: Mon, 16 Dec 2019 (10:01 IST)
ಮುಂಬೈ: ಸೀಮಿತ ಓವರ್ ಗಳಲ್ಲಿ ಟೀಂ ಇಂಡಿಯಾಗೆ ಧೋನಿ ನಂತರ ವಿಕೆಟ್ ಕೀಪರ್ ಯಾರು ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ. ಎಷ್ಟೇ ಅವಕಾಶ ಕೊಟ್ಟರೂ ರಿಷಬ್ ಪಂತ್ ವಿಫಲವಾಗುತ್ತಿರುವುದರಿಂದ ಟೀಂ ಇಂಡಿಯಾ ಚಿಂತಕರ ಚಾವಡಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ವಿಕೆಟ್ ಕೀಪರ್ ಜವಾಬ್ಧಾರಿ ನೀಡಲು ತಂಡ ಚಿಂತನೆ ನಡೆಸಿದೆ. ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕ ಪರ ವಿಕೆಟ್ ಕೀಪರ್ ಆಗಿಯೂ ಕರ್ತವ್ಯ ನಿಭಾಯಿಸುವ ರಾಹುಲ್ ರನ್ನು ಟೀಂ ಇಂಡಿಯಾದಲ್ಲೂ ಬಳಸಿಕೊಳ್ಳಲು ಚಿಂತನೆ ನಡೆಸಿರುವುದಾಗಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಅವರಂತಹ ಅದ್ಭುತ ಬ್ಯಾಟ್ಸ್ ಮನ್ ಗಳ ಹೊರತಾಗಿ ಉಳಿದವರು ಕೇವಲ ಒಂದಕ್ಕೆ ಮಾತ್ರ ಸೀಮಿತವಾಗದೇ ಹಲವು ಜವಾಬ್ಧಾರಿಗಳನ್ನು ನಿಭಾಯಿಸಲೂ ಕಲಿಯಬೇಕಾಗುತ್ತದೆ. ರಿಷಬ್ ಪಂತ್ ಕಳಪೆ ಫಾರ್ಮ್ ಹೀಗೇ ಮುಂದುವರಿದಿರೆ ಅನಿವಾರ್ಯವಾಗಿ ನಾವು ಬೇರೆ ಆಯ್ಕೆಯತ್ತ ನೋಡಬೇಕಾಗುತ್ತದೆ. ಟಿ20 ವಿಶ್ವಕಪ್ ನಲ್ಲಿ ರಾಹುಲ್ ಗೆ ಈ ಜವಾಬ್ಧಾರಿ ನೀಡಿದರೂ ಅಚ್ಚರಿಯಿಲ್ಲ ಎಂದು ಶಾಸ್ತ್ರಿ ಹೇಳಿದ್ದಾರೆ. ಹೀಗಾಗಿ ರಾಹುಲ್ ಮುಂದಿನ ದಿನಗಳಲ್ಲಿ ಸೀಮಿತ ಓವರ್ ಗಳ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ಧಾರಿ ಹೊತ್ತುಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.