Publish Date: Thu, 31 Aug 2017 (08:31 IST)
Updated Date: Thu, 31 Aug 2017 (08:34 IST)
ಕೊಲೊಂಬೊ: ಶ್ರೀಲಂಕಾ ತಂಡದ ನಾಯಕನ ಪಟ್ಟವೆನ್ನುವುದು ದುರಾದೃಷ್ಟವೇ? ಹೀಗೊಂದು ಸಂಶಯ ಈಗಿನ ವಿದ್ಯಮಾನ ನೋಡಿದರೆ ಬಲವಾಗುವುದು ಸಹಜ.
ಭಾರತ ತಂಡ ಶ್ರೀಲಂಕಾಕ್ಕೆ ಕಾಲಿಟ್ಟಾಗ ಅದಾಗ ತಾನೇ ಟೆಸ್ಟ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದ ದಿನೇಶ್ ಚಂಡಿಮಾಲ್ ಜ್ವರದಿಂದ ಮೊದಲ ಪಂದ್ಯಕ್ಕೆ ಗೈರಾದರು.
ಅವರ ಅನುಪಸ್ಥಿತಿಯಲ್ಲಿ ಆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ರಂಗನಾ ಹೆರಾತ್ ಮುಂದಿನ ಪಂದ್ಯಕ್ಕಾಗುವಾಗ ಗಾಯಾಳುವಾಗಿ ಹೊರಗುಳಿದರು. ಅದೃಷ್ಟವಶಾತ್ ನಂತರದ ಪಂದ್ಯಕ್ಕೆ ಚಂಡಿಮಾಲ್ ವಾಪಸಾಗಿದ್ದರು.
ಆದರೆ ಏಕದಿನ ಸರಣಿಯ ಆರಂಭದಲ್ಲೇ ನಾಯಕ ಉಪುಲ್ ತರಂಗಾ ಎರಡು ಪಂದ್ಯಗಳ ನಿಷೇಧಕ್ಕೊಳಗಾದರು. ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಕಪುಗಡೆರಾ ಇದೀಗ ಬೆನ್ನು ನೋವಿನಿಂದ ಬಳಲುತ್ತಿದ್ದು, ನಾಲ್ಕನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ! ಅವರ ಸ್ಥಾನದಲ್ಲಿ ಲಸಿತ್ ಮಲಿಂಗಾ ತಂಡವನ್ನು ಮುನ್ನಡೆಸಲಿದ್ದಾರೆ. ಈಗ ಹೇಳಿ? ಲಂಕಾ ತಂಡದ ನಾಯಕನ ಪಟ್ಟ ಎನ್ನುವುದು ದುರಾದೃಷ್ಟವೇ?