Publish Date: Sat, 27 Jun 2026 (09:37 IST)
Updated Date: Sat, 27 Jun 2026 (09:39 IST)
ಬೆಲ್ ಫಾಸ್ಟ್: ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ವಿಶ್ವ ಚಾಂಪಿಯನ್ ಟೀಂ ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ. ಟೆಸ್ಟ್ ಪ್ಲೇಯರ್ ವಾಷಿಂಗ್ಟನ್ ಸುಂದರ್, ರನ್ ಮೆಷಿನ್ ಪ್ರಸಿದ್ಧ ಕೃಷ್ಣ ತಂಡದಲ್ಲಿ ಯಾಕಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.
ರಾಹುಲ್ ದ್ರಾವಿಡ್-ರೋಹಿತ್ ಶರ್ಮಾ ಇದ್ದಾಗ ತಂಡ ಅದ್ಭುತವಾಗಿತ್ತು. ಎಲ್ಲಾ ಮಾದರಿಗೂ ಅದರದ್ದೇ ಆದ ಸ್ಪೆಷಲಿಸ್ಟ್ ಆಟಗಾರರಿದ್ದರು. ಆದರೆ ಈಗ ಕೆಲವೊಂದು ಆಟಗಾರರು ಅರ್ಹತೆಯಿಲ್ಲದಿದ್ದರೂ ಮೂರೂ ಮಾದರಿಯ ತಂಡದಲ್ಲಿದ್ದಾರೆ. ಅರ್ಹ ಆಟಗಾರರು ತಂಡದಲ್ಲಿ ಅವಕಾಶವೇ ಇಲ್ಲದೇ ಹೊರಗಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ 34 ರನ್ ಗಳಿಂದ ಸೋತಿದೆ. ಆರಂಭದಲ್ಲಿ ಸತತ ವಿಕೆಟ್ ಕಬಳಿಸಿ ಎದುರಾಳಿ ಮೇಲೆ ನಿಯಂತ್ರಣ ಹೊಂದಿದ್ದ ಟೀಂ ಇಂಡಿಯಾ ಕೊನೆಯ ಹಂತದಲ್ಲಿ ರನ್ ಲೀಕ್ ಮಾಡಿತು. ವಿಶೇಷವಾಗಿ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತೊಮ್ಮೆ ತಾನು ರನ್ ಮೆಷಿನ್ ಎಂದು ಸಾಬೀತುಪಡಿಸಿದರು. ಒಂದೇ ಓವರ್ ನಲ್ಲಿ 27 ರನ್ ಬಿಟ್ಟುಕೊಟ್ಟಿದ್ದ ಅವರು 4 ಓವರ್ ಗಳಲ್ಲಿ ಒಟ್ಟು ಕೊಟ್ಟಿದ್ದು ಬರೋಬ್ಬರಿ 57 ರನ್. ಇನ್ನು ಗಂಭೀರ್ ಮೆಚ್ಚಿನ ಆಟಗಾರ ವಾಷಿಂಗ್ಟನ್ ಸುಂದರ್ ಒಂದೇ ಓವರ್ ನಲ್ಲಿ 19 ರನ್ ಧಾರೆಯೆರೆದು ಕೊಟ್ಟಿದ್ದರು. ಇದೇ ಐರ್ಲೆಂಟ್ 182 ರನ್ ಗಳಿಸಲು ನೆರವಾಗಿದ್ದು.
ಬ್ಯಾಟಿಂಗ್ ನಲ್ಲೂ ಅಭಿಷೇಕ್ ಶರ್ಮಾ ಬಿಟ್ಟರೆ ಉಳಿದವರು ಯಾರೂ ಹೇಳಿಕೊಳ್ಳುವ ಆಟವಾಡಲಿಲ್ಲ. ಎಲ್ಲರಿಗೂ ಎತ್ತಿ ಬೀಸಿ ಹೊಡೆಯುವ ಅತ್ಯುತ್ಸಾಹವಿತ್ತೇ ಹೊರತು ಪಂದ್ಯ ಗೆಲ್ಲಬೇಕು, ಗುರಿ ಮುಟ್ಟಬೇಕು ಎಂಬ ಜಾಣ್ಮೆಯೇ ಇರಲಿಲ್ಲ. ಸ್ವತಃ ನಾಯಕ ಶ್ರೇಯಸ್ ಅಯ್ಯರ್ ಬಳಿಯೇ ಈ ತುಡಿತ ಕಂಡುಬರಲಿಲ್ಲ. ಇದೇ ಸೋಲಿಗೆ ಕಾರಣವಾಯಿತು.
ಇದೇ ಕಾರಣಕ್ಕೆ ಕ್ರಿಕೆಟ್ ತಜ್ಞರು, ಅಭಿಮಾನಿಗಳು ಕೋಚ್ ಗೌತಮ್ ಗಂಭೀರ್ ರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಪ್ರಸಿದ್ಧ ಕೃಷ್ಣ ರನ್ ಲೀಕ್ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತು. ಹಾಗಿದ್ದರೂ ಅವರನ್ನು ಮೂರೂ ಮಾದರಿಯಲ್ಲಿ ಹಾಕುವ ಅಗತ್ಯವೇನಿದೆ? ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾರಂತಹ ಪ್ರತಿಭಾವಂತ ಮತ್ತು ಅನುಭವಿ ಆಟಗಾರರನ್ನು ಮೂಲೆಗುಂಪು ಮಾಡಿ ಗಂಭೀರ್-ಅಗರ್ಕರ್ ಸಾಧಿಸಿದ್ದೇನು? ವಾಷಿಂಗ್ಟನ್ ಸುಂದರ್ ಗಂಭೀರ್ ಕಾಲದಲ್ಲಿ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಅಂತಹ ಸಾಧನೆ ಅವರು ಏನು ಮಾಡಿದ್ದಾರೆ? ಅವರೊಬ್ಬ ಉತ್ತಮ ಫಿನಿಶರ್ ಅಲ್ಲ, ಸ್ವಲ್ಪ ರನ್ ಗಳಿಸಲ್ಲ, ವಿಕೆಟ್ ಕೂಡಾ ಪಡೆಯಲ್ಲ. ಅಂತಹವರು ಸತತವಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಿರುವುದು ಯಾಕೆ? ಇಂತಹ ವೇಸ್ಟ್ ಆಟಗಾರರಿಗಾಗಿ ಎಷ್ಟೋ ಪ್ರತಿಭಾವಂತರು ತಂಡದಿಂದ ಮೂಲೆಗುಂಪಾಗಿದ್ದಾರೆ. ಕ್ರಿಕೆಟ್ ಶಿಶುಗಳ ವಿರುದ್ಧ ಐತಿಹಾಸಿಕ ಸೋಲಿನ ಅವಮಾನ ಅನುಭವಿಸಬೇಕಾಗಿ ಬಂದಿದೆ ಎಂದು ಜನ ಛೀಮಾರಿ ಹಾಕುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ