ಸೆಪ್ಟೆಂಬರ್ 22 ರಿಂದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿರುವ ಭಾರತ 500ನೇ ಟೆಸ್ಟ್ ಪಂದ್ಯವನ್ನಾಡುವ ಸಂಭ್ರಮಾಚರಣೆಯಲ್ಲಿದೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸಲು ಪಣ ತೊಟ್ಟಿದೆ ಬಿಸಿಸಿಐ. ಅದರ ಸಂಪೂರ್ಣ ಜವಾಬ್ದಾರಿಯನ್ನು ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿ ಮುಖ್ಯಸ್ಥ, ರಾಜೀವ್ ಶುಕ್ಲಾ ಅವರಿಗೆ ವಹಿಸಿದೆ. ಅಂದು ಮೈದಾನ ಮದುವಣಗಿತ್ತಿಯಂತೆ ಶೃಂಗಾರ ಗೊಳ್ಳಲಿದೆ.
ಪಂದ್ಯದ ಟಾಸ್ಗಾಗಿ ಬೆಳ್ಳಿ ನಾಣ್ಯವನ್ನು ಬಳಸಲಾಗುವುದು. ಭಾರತ ಕ್ರಿಕೆಟ್ ತಂಡ ದಿಗ್ಗಜರೆನಿಸಿಕೊಂಡ ಮಾಜಿ ನಾಯಕರು ಈ ವಿಶೇಷ ಕ್ಷಣಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೆ. ಶ್ರೀಕಾಂತ್, ಕಪಿಲ್ ದೇವ್, ಸುನೀಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ದಂತಕಥೆಗಳಿಗೆ ಅಂದು ಗೌರವ ನೀಡಲಾಗುವುದು.
ಅಷ್ಟೇ ಅಲ್ಲದೇ 2000 ಮಂದಿ ಬುದ್ಧಿ ಮಾಂದ್ಯ ಶಾಲಾ ಮಕ್ಕಳು, ದಿವ್ಯಾಂಗ, ಅನಾಥಾಲಯದ ಮಕ್ಕಳನ್ನೆಲ್ಲ ಪಂದ್ಯ ವೀಕ್ಷಣೆಗೆ ಕರೆಯಲಾಗುವುದು. ಇವರೆಲ್ಲರಿಗೂ ವಿಶೇಷವಾದಿ ತಯಾರಿಸಲಾದ 'ಭಾರತದ 500ನೇ ಟೆಸ್ಟ್' ಎಂಬ ಬರಹವುಳ್ಳ ಟೀ- ಶರ್ಟ್ ನೀಡುವ ಮೂಲಕ ಬಿಸಿಸಿಐ ಈ ಐತಿಹಾಸಿಕ ಕ್ಷಣವನ್ನು ವಿಶಿಷ್ಠವಾಗಿ ಆಚರಿಸಲಿದೆ.
ಈ ಮೂಲಕ 500 ಟೆಸ್ಟ್ ಕ್ಲಬ್ ಸೇರ್ಪಡೆಯಾಗಲಿರುವ ನಾಲ್ಕನೆಯ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ