Publish Date: Sat, 09 Mar 2024 (15:07 IST)
Updated Date: Sat, 09 Mar 2024 (15:10 IST)
ಧರ್ಮಶಾಲಾ: ಇಂಗ್ಲೆಂಡ್ ವಿರುದ್ದ ಅಂತಿಮ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಇನಿಂಗ್ಸ್ ಅಂತರದಿಂದ ಗೆದ್ದುಕೊಂಡು ಸರಣಿಯನ್ನೇ ತನ್ನದಾಗಿಸಿಕೊಂಡಿದೆ. ಆದರೆ ಇಂದು ನಾಯಕ ರೋಹಿತ್ ಶರ್ಮಾ ಬೆನ್ನು ನೋವಿನಿಂದಾಗಿ ಮೈದಾನಕ್ಕಿಳಿಯಲಿಲ್ಲ.
ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ತಂಡವನ್ನು ಉತ್ತಮ ಸ್ಥಿತಿಗೆ ತಂದಿದ್ದರು. ಆದರೆ ಸುದೀರ್ಘ ಅವಧಿಗೆ ಬ್ಯಾಟಿಂಗ್ ಮಾಡಿ ಬಳಲಿದ್ದ ರೋಹಿತ್ ಇಂದು ಮೈದಾನಕ್ಕಿಳಿಯಲಿಲ್ಲ. ಅವರ ಬದಲು ಉಪನಾಯಕ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಿದರು.
ತಮ್ಮ ಅನುಪಸ್ಥಿತಿಯಲ್ಲೂ ಯಂಗ್ ಇಂಡಿಯನ್ ಟೀಂ ಗೆಲುವಿನತ್ತ ಸಾಗುತ್ತಿದ್ದರೆ ರೋಹಿತ್ ಶರ್ಮಾ ಬಾಲ್ಕನಿಯಿಂದಲೇ ಇಣುಕಿ ನೋಡಿ ಖುಷಿಪಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟೀಂ ಇಂಡಿಯಾ ಗೆಲುವಿನ ಬಳಿಕ ಮೈದಾನಕ್ಕಿಳಿದ ರೋಹಿತ್ ತಂಡದ ಸದಸ್ಯರನ್ನು ಅಭಿನಂದಿಸಿದರು.
ಈ ಸರಣಿಯಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿಯಂತಹ ಅನುಭವಿಗಳ ಅನುಪಸ್ಥಿತಿಯಲ್ಲೂ ಯುವ ಬ್ಯಾಟಿಗರನ್ನು ಕಟ್ಟಿಕೊಂಡು ಇಂಗ್ಲೆಂಡ್ ವಿರುದ್ಧ ಸತತ ನಾಲ್ಕು ಟೆಸ್ಟ್ ಪಂದ್ಯ ಗೆಲುವಿಗೆ ಕಾರಣವಾಗಿದ್ದು ರೋಹಿತ್ ಶರ್ಮಾ ನಾಯಕತ್ವ. ಇದಕ್ಕಾಗಿ ಫ್ಯಾನ್ಸ್ ಅವರನ್ನು ಕೊಂಡಾಡುತ್ತಿದ್ದಾರೆ.