Publish Date: Mon, 02 Feb 2026 (13:49 IST)
Updated Date: Mon, 02 Feb 2026 (13:50 IST)
ಲಾಹೋರ್: ಇದೇ ತಿಂಗಳು ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಮುಂದಾದ ಪಾಕಿಸ್ಥಾನಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿರುವ ಐಸಿಸಿ, ಭಾರತ ವಿರುದ್ಧದ ಪಂದ್ಯದಿಂದ ಹಿಂದೆ ಸರಿದರೆ ದಂಡನೆ ಸೇರಿದಂತೆ ಅದರ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿದೆ.
ವಿಶ್ವಕಪ್ ಟೂರ್ನಿಯಲ್ಲಿ ತಂಡವು ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅನುಮತಿ ನೀಡಲಾಗಿದೆ. ಆದರೆ ಭಾರತದ ವಿರುದ್ಧದ ಹೈ-ಪ್ರೊಫೈಲ್ ಪಂದ್ಯವನ್ನು ಆಡಬಾರದು ಎಂದು ಷರತ್ತು ವಿಧಿಸಿದೆ.
ಭದ್ರತಾ ಕಾರಣಗಳಿಗಾಗಿ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿ ನಿರಾಕರಿಸಿತ್ತು. ಇದರಿಂದಾಗಿ ಟೂರ್ನಿಯಿಂದಲೇ ಬಾಂಗ್ಲಾದೇಶ ಹಿಂದಕ್ಕೆ ಸರಿದಿತ್ತು. ಐಸಿಸಿಯ ಈ ತೀರ್ಮಾನಕ್ಕೆ ರಾಜಕೀಯ ಪ್ರತಿಭಟನೆಯಾಗಿ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ. ಐಸಿಸಿ ಸಭೆಯಲ್ಲಿ ಬಾಂಗ್ಲಾ ನಿಲುವನ್ನು ಪಾಕಿಸ್ತಾನ ಬೆಂಬಲಿಸಿತ್ತು.
ಈ ನಿರ್ಧಾರದಿಂದ ಜಾಗತಿಕ ಕ್ರಿಕೆಟ್ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತನ್ನ ದೇಶದಲ್ಲಿ ಆಗುವ ದೀರ್ಘಕಾಲೀನ ಕ್ರಿಕೆಟ್ ಮಹತ್ವವನ್ನು ಅದು ಪರಿಗಣಿಸುತ್ತದೆ ಎಂದು ಐಸಿಸಿ ಆಶಿಸುತ್ತದೆ. ಏಕೆಂದರೆ ಪಾಕಿಸ್ತಾನ ಸಹ ಪೂರ್ಣ ಸದಸ್ಯ ರಾಷ್ಟ್ರವಾಗಿದ್ದು, ಅದರ ಫಲಾನುಭವಿಯಾಗಿದೆ ಎಂದು ಹೇಳಿದೆ.
ಪಾಕಿಸ್ತಾನ ಪಂದ್ಯ ಬಹಿಷ್ಕರಿಸಿದರೆ ಭಾರತ ವಾಕ್ ಓವರ್ ಪಡೆಯಲಿದೆ. ಮತ್ತೊಂದೆಡೆ ಪಾಕಿಸ್ತಾನದ ಮೇಲೆ ಐಸಿಸಿ ಆರ್ಥಿಕ ದಂಡ ವಿಧಿಸುವ ಸಾಧ್ಯತೆಯಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಪ್ರಾಯೋಜಕತ್ವ ಮತ್ತು ಪ್ರಸಾರದಿಂದ ಹಣದ ಹೊಳೆಯೇ ಹರಿದುಬರುತ್ತದೆ. ಅಭಿಮಾನಿಗಳಲ್ಲೂ ಹೆಚ್ಚಿನ ರೋಚಕತೆ ಮನೆ ಮಾಡುತ್ತದೆ.
ಈ ಪಂದ್ಯ ನಡೆಯದಿದ್ದರೆ ಆತಿಥೇಯ ಪ್ರಸಾರಕರಿಗೆ 10 ಸೆಕೆಂಡುಗಳ ಕಮರ್ಷಿಯಲ್ ಸ್ಲಾಟ್ಗೆ ₹40 ಲಕ್ಷ ನಿಗದಿಯಂತೆ ಅಂದಾಜು ₹200ರಿಂದ ₹250 ಕೋಟಿ ಜಾಹೀರಾತು ಆದಾಯ ನಷ್ಟವಾಗಬಹುದು ಎಂದು ತಿಳಿದು ಬಂದಿದೆ.