Publish Date: Thu, 26 Aug 2021 (09:00 IST)
Updated Date: Thu, 26 Aug 2021 (09:09 IST)
ಲೀಡ್ಸ್: ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಪೈಪೋಟಿ ಹೇಗೆಂದರೆ ಒಂದೇ ಒಂದು ವೈಫಲ್ಯ ಸಾಕು, ಮುಂದಿನ ಪಂದ್ಯದಿಂದ ಕೊಕ್ ಸಿಗುತ್ತದೆ. ಆದರೆ ಚೇತೇಶ್ವರ ಪೂಜಾರ ವಿಚಾರದಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ.
ಪೂಜಾರ ಬ್ಯಾಟ್ ನಿಂದ ರನ್ ಹರಿದುಬಂದಿದ್ದು, ಅಭಿಮಾನಿಗಳಿಗೆ ನೆನಪೇ ಇಲ್ಲ. ಟೆಸ್ಟ್ ಸ್ಪೆಷಲಿಸ್ಟ್ ಎನ್ನುವ ಕಾರಣಕ್ಕೆ ಪೂಜಾರಗೆ ಟೆಸ್ಟ್ ತಂಡದಲ್ಲಿ ಖಾಯಂ ಅವಕಾಶವಿದೆ. ಆದರೆ ತಂಡದಲ್ಲಿ ಅವಕಾಶ ಪಡೆಯಲು ಪ್ರತಿಭಾವಂತರ ಸಾಲು ಇರುವಾಗ ಪದೇ ಪದೇ ವಿಫಲವಾಗುತ್ತಿರುವ ಆಟಗಾರನಿಗೇ ಮತ್ತೆ ಅವಕಾಶ ನೀಡುವ ಅಗತ್ಯವಿದೆಯೇ?
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ನಾಯಕ ಕೊಹ್ಲಿ ನಾವು ಭವಿಷ್ಯದ ದೃಷ್ಟಿಯಿಂದ ಹೊಸ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದಿದ್ದರು. ಆದರೆ ಅದನ್ನು ಅವರು ಇದುವರೆಗೆ ಕಾರ್ಯರೂಪಕ್ಕೆ ತಂದಿಲ್ಲ. ಹಾಗಿದ್ದರೆ ಕೊಹ್ಲಿ ತಮ್ಮ ಮಾತನ್ನೇ ಮರೆತುಬಿಟ್ಟರೇ? ಸದ್ಯದ ತಂಡದಲ್ಲೇ ಸೂರ್ಯಕುಮಾರ್ ಯಾದವ್, ಮಯಾಂಕ್ ಅಗರ್ವಾಲ್, ಹನುಮ ವಿಹಾರಿ ಅಂತಹ ಪ್ರತಿಭಾವಂತರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹಾಗಿರುವಾಗ ಒಂದೇ ಒಂದು ಪಂದ್ಯದಲ್ಲಿ ಅವರಿಗೆ ಅವಕಾಶ ಕೊಡಲು ಕೊಹ್ಲಿಗೆ ಅಡ್ಡಿಯಾಗುತ್ತಿರುವುದಾದರೂ ಏನು? ಭಾರತ ಭವಿಷ್ಯದ ದೃಷ್ಟಿಯಿಂದ ಅದೇ ಆಟಗಾರರಿಗೆ ಅಂಟಿಕೊಳ್ಳುವ ಬದಲು ಹೊಸ ಆಟಗಾರರಿಗೆ ಅವಕಾಶ ನೀಡದೇ ಒಂದು ಉತ್ತಮ ಟೆಸ್ಟ್ ತಂಡವಾಗದು.