Publish Date: Mon, 13 Dec 2021 (09:27 IST)
Updated Date: Mon, 13 Dec 2021 (09:29 IST)
ಮುಂಬೈ: ಟೀಂ ಇಂಡಿಯಾ ನಾಯಕನ ಹುದ್ದೆ ಆರಂಭದಲ್ಲಿ ರಾಜ ಸಿಂಹಾಸನದಂತೆ ಕಂಡರೂ ಕೊನೆಗೆ ಸಿಗುವುದು ಅವಮಾನವೇ. ಇದು ಗಂಗೂಲಿಯಿಂದ ಹಿಡಿದು ಇದೀಗ ಕೊಹ್ಲಿಯವರೆಗೆ ಸಾಬೀತಾಗಿದೆ.
ಭಾರತಕ್ಕೆ ಗೆಲುವಿನ ಮುಖ ತೋರಿಸಿದ್ದ ಯಶಸ್ವೀ ನಾಯಕ ಸೌರವ್ ಗಂಗೂಲಿಯನ್ನೂ ಬಿಸಿಸಿಐ ಕೊನೆಗೆ ಅವಮಾನಕಾರಿಯಾಗಿ ನಡೆಸಿಕೊಂಡಿತ್ತು. ಗ್ರೆಗ್ ಚಾಪೆಲ್ ಜೊತೆಗಿನ ವಿವಾದದ ಬಳಿಕ ಗಂಗೂಲಿಯಿಂದ ಅಂದು ನಾಯಕತ್ವ ಕಿತ್ತುಕೊಂಡು ಮುಖಭಂಗವಾಗಿತ್ತು.
ಬಳಿಕ ಧೋನಿಗೂ ನಾಯಕರಾಗಿ ಕೊನೆಯ ದಿನಗಳಲ್ಲಿ ಗೌರವ ಸಿಗಲೇ ಇಲ್ಲ. ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಿಗೂ ವೈಫಲ್ಯವಾದಾಗ ನಾಯಕತ್ವವನ್ನು ಕಸಿದುಕೊಳ್ಳುವ ಹಂತಕ್ಕೆ ಬರಲಾಗಿತ್ತು. ಆದರೆ ಅದಕ್ಕೂ ಮೊದಲೇ ಧೋನಿಯೇ ರಾಜೀನಾಮೆ ನೀಡಿ ಹೊರಬಂದಿದ್ದರು.
ಇದೀಗ ವಿರಾಟ್ ಕೊಹ್ಲಿಗೂ ಅದೇ ಗತಿಯಾಗಿದೆ. ನಾಯಕನಾಗಿ ಫಾರ್ಮ್ ನಲ್ಲಿರುವವರೆಗೆ ಮಾತ್ರ ಇಲ್ಲಿ ಮರ್ಯಾದೆ. ಹಳೆಯ ದಾಖಲೆಗಳು ಯಾವುದೂ ಇಲ್ಲಿ ಗಣನೆಗೆ ಬರಲ್ಲ. ವೈಫಲ್ಯ ಅನುಭವಿಸುತ್ತಿದೆ ಎಂದು ಗೊತ್ತಾದಾಗಲೇ ತಾವಾಗಿಯೇ ರಾಜೀನಾಮೆ ಕೊಟ್ಟು ಹೊರಬಂದರೆ ಅವರಿಗೇ ಉತ್ತಮ. ವಿಪರ್ಯಾಸವೆಂದರೆ ಇಂದು ಕೊಹ್ಲಿಯಿಂದ ನಾಯಕತ್ವ ಕಿತ್ತುಕೊಳ್ಳುವಾಗ ಅಂದು ಅವಮಾನ ಅನುಭವಿಸಿದ್ದ ಗಂಗೂಲಿಯೇ ಬಿಸಿಸಿಐ ಅಧ್ಯಕ್ಷ!