ಸುಪ್ರೀಂಕೋರ್ಟ್ ನೇಮಿಸಿದ ನ್ಯಾ. ಲೋಧಾ ಸಮಿತಿಯು ಶಿಫಾರಸು ಮಾಡಿದ ಸುಧಾರಣೆಗಳನ್ನು ಬಿಸಿಸಿಐ ಮುಂದಿನ 6 ತಿಂಗಳಲ್ಲಿ ಅನುಷ್ಠಾನಗೊಳಿಸಬೇಕಿರುವುದರಿಂದ, ಎಲ್ಲಾ ಚುನಾವಣೆಗಳನ್ನು ಸ್ಥಗಿತಗೊಳಿಸುವಂತೆ ಬಿಸಿಸಿಐಗೆ ಲೋಧಾ ಸಮಿತಿ ಸೂಚಿಸಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಲೋಧಾ ಸಮಿತಿಯು ಅಧ್ಯಕ್ಷ ಅನುರಾಗ್ ಠಾಕುರ್, ಕಾರ್ಯದರ್ಶಿ ಅಜಯ್ ಶಿರ್ಕೆ, ಕೋಶಾಧಿಕಾರಿ ಅನಿರುದ್ ಚೌಧರಿ ಮತ್ತು ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಸೇರಿದಂತೆ ಬಿಸಿಸಿಐನ ಎಲ್ಲಾ ಪದಾಧಿಕಾರಿಗಳಿಗೆ ಲೋಧಾ ಸಮಿತಿಯು ನಿರ್ದೇಶನ ನೀಡಿದೆ.
ಈ ನಿರ್ದೇಶನದಿಂದ ಇದೇ 31ರಂದು ನಡೆಯಬೇಕಿದ್ದ ಬಂಗಾಳ ಕ್ರಿಕೆಟ್ ಸಂಸ್ಥೆ ಚುನಾವಣೆಯು ಕರ್ನಾಟಕ ಕ್ರಿಕೆಟ್ ಸಂಸ್ಥೆ ಚುನಾವಣೆ ಜೊತೆಗೆ ಸ್ಥಗಿತಗೊಳ್ಳಲಿದೆ. ಇದೇ ರೀತಿ ಮಂಗಳವಾರ ನಡೆದ ಜಮ್ಮು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಚುನಾವಣೆ ಕೂಡ ಅಸಿಂಧುವಾಗಲಿದೆ. ಈ ಚುನಾವಣೆಯಲ್ಲಿ ರಾಜ್ಯ ಸಚಿವ ಇಮ್ರಾನ್ ರಾಜಾ ಅನ್ಸಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಲೋಧಾ ಸಮಿತಿಯ ಪತ್ರದಲ್ಲಿ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಎಲ್ಲಾ ಚುನಾವಣೆಗಳನ್ನು ತಡೆಹಿಡಿಯಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ಸಮಿತಿಯು ಕಾರ್ಯಯೋಜನೆ ರೂಪಿಸುವ ಪ್ರಕ್ರಿಯೆಯಲ್ಲಿದ್ದು, ಮುಂದಿನ ಸೂಚನೆ ಬರುವ ತನಕ ಬಿಸಿಸಿಐ ಮತ್ತು ರಾಜ್ಯಸಂಸ್ಥೆಗಳು ಎಲ್ಲಾ ಚುನಾವಣೆಗಳನ್ನು ತಡೆಹಿಡಿಯಬೇಕು ಎಂದು ಸೂಚಿಸಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ