ಈಗ ದಕ್ಷಿಣ ಭಾಗಕ್ಕೆ ಬರೋಣ. ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿಗೆ ಹರಿಯುವ ಕಾವೇರಿ ನದಿಯನ್ನೂ ಗಂಗೆಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಕಾವೇರಿ ನದಿಗಿರುವ ವಡವಾರು ಎಂಬ ಉಪನದಿಯೊಂದನ್ನು ತಂಜಾವೂರು ಜನತೆ ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತಾರೆ. ಈ ನದಿ ತಟದಲ್ಲಿರುವ ಸ್ಮಶಾನವನ್ನು ಅವರು ವಾರಣಾಸಿ (ಕಾಶಿ)ಗೆ ಸಮಾನ ಎಂದೇ ಭಾವಿಸುತ್ತಾರೆ. ಈ ಐತಿಹಾಸಿಕ ನಗರಿ ತಂಜಾವೂರು ಮತ್ತು ಸುತ್ತಮುತ್ತಲ ಊರಿನ ಜನರು ವಡವಾರು ನದಿ ತೀರದಲ್ಲಿರುವ ರಾಜಾ ಗೋರಿ ಎಂದು ಕರೆಸಿಕೊಳ್ಳುವ ಸ್ಮಶಾನಭೂಮಿಯನ್ನು ಕಾಶಿಯಂತಹ ಪುಣ್ಯ ಕ್ಷೇತ್ರ ಎಂದು ಪರಿಗಣಿಸುತ್ತಾರೆ.ತಮ್ಮ ಹಿರಿಯರಲ್ಲಿ ಹೆಚ್ಚಿನವರು, ತಮ್ಮ ಕಾಲವಾದ ನಂತರ ರಾಜಾಗೋರಿಯಲ್ಲೇ ನಮ್ಮನ್ನು ಮಣ್ಣು ಮಾಡಬೇಕು ಮತ್ತು ವಡವಾರು ನದಿಯಲ್ಲೇ ಅಸ್ಥಿ ವಿಸರ್ಜನೆ ಮಾಡಬೇಕು ಅಂತ ತಾಕೀತು ಮಾಡಿದ್ದರು ಎಂದು ಅನೇಕರು ಹೇಳುವುದನ್ನು ನಾವು ಕೇಳಿದ್ದೇವೆ.
ರಾಜಾಗೋರಿ ಎಂಬ ಸ್ಮಶಾನ ಭೂಮಿಯು ತಂಜಾವೂರು ಪಟ್ಟಣದ ಮೂಲೆಯಲ್ಲಿದೆ. ತುಂಬಾ ವಿಶಾಲವಾದದ್ದು ಮತ್ತು ಏಕಕಾಲದಲ್ಲಿ 20 ಪಾರ್ಥಿವ ಶರೀರಗಳ ಅಂತ್ಯಕ್ರಿಯೆಯನ್ನು ಇಲ್ಲಿ ನೆರವೇರಿಸಬಹುದು. ಇಲ್ಲಿ ಅಷ್ಟೊಂದು ಶೆಡ್ಡುಗಳಿವೆ. ಅಂತ್ಯಸಂಸ್ಕಾರ ಮಾಡುವ ಶೆಡ್ಡುಗಳ ಪಕ್ಕದಲ್ಲಿ ಮರಾಠಾ ರಾಜಕುಟುಂಬಿಕರಿಗೆ, ನಾಯಕ್ ಕುಟುಂಬಿಕರಿಗೆ ಮತ್ತು ಬ್ರಾಹ್ಮಣರಿಗೆ ಪ್ರತ್ಯೇಕ ಶೆಡ್ಡುಗಳಿವೆ. ಜಾತಿ ಭೇದವು ತಮಿಳುನಾಡಿನಲ್ಲಿ ಹಳೆಯ ಕಾಲದ್ದಾಗಿದ್ದರೂ, ರಾಜಾ ಗೋರಿಯು ಪುರಾತನ ಕಾಲದಿಂದಲೂ ಇದ್ದ ಜಾತಿಪದ್ಧತಿಯ ಕುರುಹಾಗಿ ನಿಂತಿದೆ.
ಈ ಸ್ಮಶಾನದ ಪಕ್ಕದಲ್ಲೇ ಶಾಂತವಾಗಿ ಹರಿಯುತ್ತಿದೆ ಮಣಿಮುತಾರು ಎಂದೂ ಕರೆಯಲಾಗುವ ವಡವಾರು ನದಿ. ಅಂತ್ಯ ಸಂಸ್ಕಾರ ಮಾಡುವವರು ಈ ನದಿಯಲ್ಲಿ ಶುಚಿರ್ಭೂತರಾಗಬೇಕು. ಮೃತರ ಅಸ್ಥಿಯನ್ನು ಇಲ್ಲಿ ವಿಸರ್ಜಿಸುವುದರಿಂದ ಅವರ ಆತ್ಮವು ಪವಿತ್ರಗೊಂಡು, ಯಾವುದೇ ತೊಂದರೆಯಿಲ್ಲದೆ ಸ್ವರ್ಗ ಸೇರುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.
ಹೊಸ ಪೀಳಿಗೆಯ ಮಂದಿ ಈ ನಂಬಿಕೆಗೆ ಅಷ್ಟೇನೂ ಬೆಲೆ ಕೊಡದಿದ್ದರೂ, ಹಿರಿಯರಂತೂ ಇದರಲ್ಲಿ ಪ್ರಬಲ ನಂಬಿಕೆ ಇರಿಸಿದ್ದಾರೆ ಮತ್ತು ತಮ್ಮ ಸಾವಿನ ಬಳಿಕ ತಾವೂ ಇಲ್ಲೇ ಮಣ್ಣಾಗಬೇಕೆಂಬ ಆಕಾಂಕ್ಷೆ ಹೊತ್ತಿದ್ದಾರೆ.
ಇಂಥ ನಂಬಿಕೆಗಳ ಬಗ್ಗೆ ನಿಮಗೇನನಿಸುತ್ತದೆ? ನಮಗೆ ಬರೆಯಿರಿ.